ಬೆಂಗಳೂರು, ಆ.17 www.bengaluruwire.com: ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜ್ಯಾದ್ಯಂತ ನಡೆಸುತ್ತಿರುವ ಆಹಾರ ಸುರಕ್ಷತಾ ತಪಾಸಣೆ ಮತ್ತು ಅವರ ಕಾರ್ಯವೈಖರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಶ್ಲಾಘಿಸಿದ್ದಾರೆ.
ಆರೋಗ್ಯ ಸೌಧದಲ್ಲಿ ಸೋಮವಾರ ಅಧಿಕಾರಿಗಳ ಕಾರ್ಯವೈಖರಿ ಕುರಿತು ಉತ್ತೇಜನಾ ಕಾರ್ಯಕ್ರಮ ನಡೆಸಿ, ಬಳಿಕ ನಡೆದ ಪತ್ರಿಕಾಘೋಷ್ಠಿಯಲ್ಲಿ ಅವರು ಮಾತನಾಡಿ, ಈ ವಿಶೇಷ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.
ಸಾರ್ವಜನಿಕರು ಆಹಾರ ಹಾಗೂ ಔಷಧ ಸಂಬಂಧಿತ ದೂರುಗಳನ್ನು ಸುಲಭವಾಗಿ ದಾಖಲಿಸಲು ಅನುಕೂಲವಾಗುವಂತೆ ನೂತನ QR ಕೋಡ್ ಆಧಾರಿತ ದೂರು ನಿರ್ವಹಣಾ ವ್ಯವಸ್ಥೆಗೆ (IPGRS) ಇದೇ ವೇಳೆ ಸಚಿವರು ಚಾಲನೆ ನೀಡಿದರು.
ವಿಶೇಷ ತಪಾಸಣೆ ಮತ್ತು ಮುಟ್ಟುಗೋಲು ಹಾಕಿಕೊಂಡ ಪ್ರಮುಖ ಸಾಮಾಗ್ರಿಗಳು

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಸರಣಿ ದಾಳಿಗಳು ಮತ್ತು ತಪಾಸಣೆಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
ಹಾಸ್ಟೆಲ್ ಹಾಗೂ ಅಂಗನವಾಡಿಗಳ ತಪಾಸಣೆ: ಹಿಂದುಳಿದ ವರ್ಗಗಳ 629 ಹಾಸ್ಟೆಲ್ಗಳಿಗೆ ಭೇಟಿ ನೀಡಿ 1,860 ಆಹಾರ ಮಾದರಿಗಳನ್ನು, ಹಾಗೂ ಸಮಾಜ ಕಲ್ಯಾಣ ಇಲಾಖೆಯ 331 ಹಾಸ್ಟೆಲ್ಗಳಿಂದ 556 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಲ್ಲದೆ, 603 ಅಂಗನವಾಡಿ ಕೇಂದ್ರಗಳಲ್ಲಿ ತಪಾಸಣೆ ನಡೆಸಿ 549 ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಬಸ್ ನಿಲ್ದಾಣ ಹಾಗೂ ಡಾಬಾ ದಾಳಿಗಳು: ರಾಜ್ಯದ 186 ಬಸ್ ನಿಲ್ದಾಣಗಳ 889 ಮಳಿಗೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅನೈರ್ಮಲ್ಯ ಕಂಡುಬಂದ 206 ಘಟಕಗಳಿಗೆ ನೋಟಿಸ್ ನೀಡಿ ಒಟ್ಟು ₹55,000 ದಂಡ ವಿಧಿಸಲಾಗಿದೆ. ಹಾಗೆಯೇ ಹೆದ್ದಾರಿಗಳ ಪಕ್ಕದ 99 ಡಾಬಾಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆಗಾಗಿ ₹3,67,500 ದಂಡ ವಸೂಲಿ ಮಾಡಲಾಗಿದೆ.
ಅಸುರಕ್ಷಿತ ಶಾವರ್ಮಾ ಮತ್ತು ಕಬಾಬ್: ಶಾವರ್ಮಾ ಹಾಗೂ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮತ್ತು ಅನೈರ್ಮಲ್ಯದ ದೂರುಗಳ ಹಿನ್ನೆಲೆಯಲ್ಲಿ ಶಾವರ್ಮಾದ 41 ಹಾಗೂ ಕಬಾಬ್ನ 21 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯದ ವರದಿಯಂತೆ 9 ಶಾವರ್ಮಾ ಮತ್ತು 1 ಕಬಾಬ್ ಮಾದರಿಗಳು ಅಸುರಕ್ಷಿತ ಎಂದು ದೃಢಪಟ್ಟು ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಪ್ರಮುಖ ಹೋಟೆಲ್ಗಳು ಹಾಗೂ ವಶಪಡಿಸಿಕೊಂಡ ಆಹಾರ ವಸ್ತುಗಳು: ಬೆಂಗಳೂರು ನಗರ ಸೇರಿದಂತೆ ವಿವಿಧೆಡೆಯ 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್ಗಳು ಹಾಗೂ ಗೋದಾಮುಗಳಲ್ಲಿ ತಪಾಸಣೆ ನಡೆಸಿ, ಅವಧಿ ಮೀರಿದ ಮತ್ತು ಲೇಬಲ್ ಇಲ್ಲದ ಟನ್ ಗಟ್ಟಲೆ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
378 ಕೆ.ಜಿ ಮಟನ್/ಚಿಕನ್ (ಲೇಬಲ್ ಇಲ್ಲದ ಮತ್ತು ಅವಧಿ ದಿನಾಂಕವಿಲ್ಲದ)
203 ಕೆ.ಜಿ ಮೀನು
200 ಕೆ.ಜಿ ಸಸ್ಯಾಹಾರಿ ಆಹಾರ (ಅತಿ ದೀರ್ಘಾವಧಿ ಮುಕ್ತಾಯ ದಿನಾಂಕ ಹಾಗೂ ಮಾಂಸಹಾರದೊಂದಿಗೆ ಸಂಗ್ರಹಿಸಿದ್ದು)
45 ಲೀಟರ್ ಹಾಲು ಮತ್ತು ಮೊಸರು (ಅವಧಿ ಮೀರಿದವು)
49 ಲೀಟರ್ ಬಳಸಿದ ಅಡುಗೆ ಎಣ್ಣೆ
ಸಾರ್ವಜನಿಕರಿಗಾಗಿ ಕ್ಯೂಆರ್ ಕೋಡ್ (QR Code) ವ್ಯವಸ್ಥೆ:

ಆಹಾರ ಮತ್ತು ಔಷಧಗಳಿಗೆ ಸಂಬಂಧಿಸಿದ ದೂರುಗಳನ್ನು ಗ್ರಾಹಕರು ನೇರವಾಗಿ ಮತ್ತು ಸುಲಭವಾಗಿ ಇಲಾಖೆಯ ಗಮನಕ್ಕೆ ತರಲು ಸೆಂಟರ್ ಫಾರ್ ಇ-ಗವರ್ನೆನ್ಸ್ (CeG) ಸಹಯೋಗದೊಂದಿಗೆ ನೂತನ QR ಕೋಡ್ ಆಧಾರಿತ ದೂರು ನಿರ್ವಹಣಾ ವ್ಯವಸ್ಥೆಯನ್ನು (IPGRS) ಜಾರಿಗೆ ತರಲಾಗಿದೆ.
ಆಹಾರ ಸುರಕ್ಷತೆಗೆ ಸಂಬಂಧಿಸಿದ ದೂರುಗಳು: ಹೋಟೆಲ್ಗಳು, ರೆಸ್ಟೋರೆಂಟ್ಗಳು, ಬೀದಿಬದಿ ಆಹಾರ ವ್ಯಾಪಾರಿಗಳಲ್ಲಿನ ಕಳಪೆ ನೈರ್ಮಲ್ಯ, ಆಹಾರದಲ್ಲಿ ಕೃತಕ ಬಣ್ಣಗಳ ಬಳಕೆ ಹಾಗೂ ಸೇವಾ ನ್ಯೂನತೆಗಳ ಕುರಿತು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ದಾಖಲಿಸಬಹುದು.
ಔಷಧ ಸಂಬಂಧಿಸಿದ ದೂರುಗಳು: ಅಡ್ಡಪರಿಣಾಮಗಳು (ADR), ಔಷಧಿಗಳ ಅಧಿಕ ಬೆಲೆ ವಸೂಲಿ, ಅವಧಿ ಮೀರಿದ ಔಷಧಿಗಳ ಮಾರಾಟ ಹಾಗೂ ಫಾರ್ಮಸಿ ಸೇವಾ ದೂರುಗಳನ್ನು ಇದರ ಮೂಲಕ ತಿಳಿಸಬಹುದು.
ಈ ವ್ಯವಸ್ಥೆಯು ಗ್ರಾಹಕರ ಸಕ್ರಿಯ ಭಾಗಿತ್ವವನ್ನು ಹೆಚ್ಚಿಸುವುದಲ್ಲದೆ, ನಿಯಂತ್ರಣ ಪ್ರಾಧಿಕಾರಗಳೊಂದಿಗೆ ಪಾರದರ್ಶಕತೆಯನ್ನು ತರಲಿದೆ ಎಂದು ಇಲಾಖೆ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಆಯುಕ್ತರಾದ ಶ್ರೀನಿವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

















