ಬೆಂಗಳೂರು, ಆ.04 www.bengaluruwire.com: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಹಿಂದಿನ ಬಿಬಿಎಂಪಿ, ಈಗಿನ ಜಿಬಿಎ) ವ್ಯಾಪ್ತಿಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ಕಂಪ್ಯೂಟರ್ ಹಾಗೂ ಸ್ಟೇಷನರಿ ಪೂರೈಕೆ ಹೆಸರಿನಲ್ಲಿ ಸುಮಾರು 8.91 ಕೋಟಿ ರೂ.ಗಳ ಬೃಹತ್ ಹಗರಣ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇವಲ ಒಂದು ಕಛೇರಿಗೆ ಲೆಕ್ಕಕ್ಕೆ ಸಿಗದಷ್ಟು ಕಂಪ್ಯೂಟರ್, ಪ್ರಿಂಟರ್ ಹಾಗೂ ಕಾಪಿಯರ್ ಗಳನ್ನು ಪೂರೈಸಿರುವುದಾಗಿ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂದು ಮಾಜಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಹಾಗೂ ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಹಗರಣದ ಸ್ವರೂಪ ಹಾಗೂ ಆರೋಪಗಳು:
ದೂರಿನಲ್ಲಿರುವ ಮಾಹಿತಿಯ ಪ್ರಕಾರ, ಎಂ/ಎಸ್ ಎನ್.ಎಸ್. ಎಂಟರ್ಪ್ರೈಸಸ್ (M/s N.S. Enterprises) ಎಂಬ ಸಂಸ್ಥೆಯ ಮೂಲಕ 2021-22ನೇ ಸಾಲಿನಿಂದ ಜೂನ್ 2026ರವರೆಗೆ ಒಟ್ಟು ₹8,91,46,526 ಮೊತ್ತದ ವಸ್ತುಗಳನ್ನು ಪೂರೈಸಲಾಗಿದೆ ಎಂದು ಬಿಲ್ ಪಡೆಯಲಾಗಿದೆ. ಆದರೆ ವಾಸ್ತವದಲ್ಲಿ ಇಷ್ಟೊಂದು ಪ್ರಮಾಣದ ಸಾಮಗ್ರಿಗಳು ಕಚೇರಿಗೆ ಪೂರೈಕೆಯಾಗಿಲ್ಲ ಎಂಬುದು ದೂರುದಾರರ ಆರೋಪವಾಗಿದೆ.

ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ (FDA) ಓರ್ವ ನೌಕರರು ತಮ್ಮ ಕುಟುಂಬದವರ ಹೆಸರಿನಲ್ಲಿರುವ ಸಂಸ್ಥೆಯ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಗೋವಿಂದರಾಜನಗರ ವಿಭಾಗದಲ್ಲಿ ನಡೆದಿದೆ ಎನ್ನಲಾದ ಹಗರಣ ಬೆಳಕಿಗೆ ಬರುತ್ತಿದ್ದಂತೆ, ಸದರಿ ಸಂಸ್ಥೆಯ ಹೆಸರನ್ನು ಬದಲಾಯಿಸಿ ಕೇಂದ್ರ ವಲಯದಲ್ಲಿಯೂ ಬಿಲ್ ಪಾವತಿಗೆ ಯತ್ನಿಸಲಾಗಿತ್ತು. ಆದರೆ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಉಪ ಹಣಕಾಸು ನಿಯಂತ್ರಕರು (DCF) ಕಡತವನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ರಮೇಶ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ಎನ್.ಆರ್. ರಮೇಶ್ ಅವರ ಹೇಳಿಕೆ:
“ಶಾಂತಿನಗರ ಇಇ ಕಛೇರಿಗೆ ಕಳೆದ ಐದು ವರ್ಷಗಳಿಂದ ಪದೇ ಪದೇ ಕಂಪ್ಯೂಟರ್, ಪ್ರಿಂಟರ್ ಪೂರೈಸಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರ ತೆರಿಗೆ ಹಣವಾದ ಬರೋಬ್ಬರಿ 9 ಕೋಟಿ ರೂ.ಗಳನ್ನು ವಂಚಿಸಲಾಗಿದೆ. ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಪಾಲಿಕೆ ನೌಕರ ಹಾಗೂ ಶಾಂತಿನಗರ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಮುಂದಿನ ಕ್ರಮಕ್ಕೆ ಆಗ್ರಹ:
ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ನಿಯಮ 17 ‘A’ ಅಡಿಯಲ್ಲಿ ಈ ಪ್ರಕರಣದ ಸಮಗ್ರ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವಂತೆ ಜಿಬಿಎ ಮುಖ್ಯ ಆಯುಕ್ತರನ್ನು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರನ್ನು ದೂರುದಾರರು ಒತ್ತಾಯಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದ ಈ ಬೃಹತ್ ದುರ್ಬಳಕೆಯ ಆರೋಪದ ಸತ್ಯಾಸತ್ಯತೆ ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಹೊರಬರಬೇಕಿದೆ.





















