ಮಂಗಳೂರು, ಸೆ.18 www.bengaluruwire.com: ಕರಾವಳಿ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಮಾನ್ಯತೆ ಸೇರಿದಂತೆ, ಕರಾವಳಿ ಮತ್ತು ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗಾಗಿ ಬರೋಬ್ಬರಿ 32,611 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಐತಿಹಾಸಿಕ ಅನುಮೋದನೆ ನೀಡಿದೆ.
ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ನಿರ್ಧಾರಗಳನ್ನು ಪ್ರಕಟಿಸಿದರು. ಒಟ್ಟು ಮೊತ್ತದಲ್ಲಿ 16,000 ಕೋಟಿ ರೂ. ಗ್ರಾಮೀಣ ಸಂಪರ್ಕ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾಗಿದ್ದು, ಉಳಿದ ಅನುದಾನವನ್ನು ಕರಾವಳಿ ಜಿಲ್ಲೆಗಳ ವಿವಿಧ ಯೋಜನೆಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ತುಳು ಭಾಷೆಗೆ ಆಡಳಿತಾತ್ಮಕ ಸ್ಥಾನಮಾನ:
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲಾಗಿದೆ. “ನಾವು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡದೆ, ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಮಾಜಿ ಸಚಿವ ರಮಾನಾಥ ರೈ, ಸ್ಪೀಕರ್ ಯು.ಟಿ. ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳು ಈ ಬಗ್ಗೆ ನಿರಂತರ ಒತ್ತಡ ತಂದಿದ್ದರು,” ಎಂದು ಸಿಎಂ ಸ್ಮರಿಸಿದರು.

ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು:
ದಕ್ಷಿಣ ಕನ್ನಡ ಹೆಸರು ಬದಲಾವಣೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ‘ಮಂಗಳೂರು’ ಹೆಸರನ್ನೇ ಜಿಲ್ಲೆಗೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕರಡು ಅಧಿಸೂಚನೆ ಹೊರಡಿಸಿ, ಒಂದು ತಿಂಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು.
ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026: ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಿ, ಹೂಡಿಕೆದಾರರಿಗೆ ಸಾಲ ಮರುಪಾವತಿಗೆ ಕಾಲಾವಕಾಶ ಹಾಗೂ ವಿಶೇಷ ಪ್ರೋತ್ಸಾಹಕಗಳನ್ನು ನೀಡುವ ಹೊಸ ನೀತಿಗೆ ಸಂಪುಟ ಅಸ್ತು ಎಂದಿದೆ.
ಶಿಕ್ಷಣ & ಆರೋಗ್ಯ: ಮಂಗಳೂರಿನಲ್ಲಿ ಫಿಶರೀಸ್ ಮತ್ತು ಬ್ಲೂ ಎಕಾನಮಿ ಯೂನಿವರ್ಸಿಟಿ (Fisheries and Blue Economy University) ಸ್ಥಾಪನೆ, ಮೀನುಗಾರಿಕಾ ಕಾಲೇಜು ಸೀಟುಗಳ ಸಂಖ್ಯೆ 60 ರಿಂದ 200ಕ್ಕೆ ಹೆಚ್ಚಳ ಹಾಗೂ ಪುತ್ತೂರಿನಲ್ಲಿ ₹549 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.
ಮೀನುಗಾರಿಕೆ ಪಾರ್ಕ್: ಕರಾವಳಿಯಲ್ಲಿ 150 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಮೀನುಗಾರಿಕೆ ಪಾರ್ಕ್ ನಿರ್ಮಾಣವಾಗಲಿದೆ.
ವಿಕೇಂದ್ರೀಕೃತ ಸಂಪುಟ ಸಭೆಗಳು: ಬೆಂಗಳೂರು ಹೊರತುಪಡಿಸಿ ಮುಂದಿನ 15 ತಿಂಗಳಲ್ಲಿ ರಾಜ್ಯದ ವಿವಿಧ ಕಡೆ 10 ರಿಂದ 12 ಸ್ಥಳಗಳಲ್ಲಿ ಸಂಪುಟ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸಹದ್ಯೋಗಿಗಳು ಉಪಸ್ಥಿತರಿದ್ದರು.





















