ಬೆಂಗಳೂರು/ತೀರ್ಥಹಳ್ಳಿ, ಸೆ.20 www.bengaluruwire.com: ಶನಿವಾರ ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಸ್ತೂರಿರಂಗನ್ ವರದಿ ಕುರಿತ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಶ್ಚಿಮ ಘಟ್ಟದ ನೈಜ ಸಂರಕ್ಷಣೆ ಮತ್ತು ಸ್ಥಳೀಯ ಜನರ ಜೀವನೋಪಾಯವನ್ನು ಸಮತೋಲನದಲ್ಲಿಡುವ ‘ಜನಪರ ಹಾಗೂ ವೈಜ್ಞಾನಿಕ ಪರ್ಯಾಯ ಚೌಕಟ್ಟಿನ’ ನೀತಿ ಪ್ರಸ್ತಾವನೆ ಸಲ್ಲಿದೆ. ಆ ವರದಿಯಲ್ಲೇನಿದೆ? ಇಲ್ಲಿದೆ ವಿವರ.
ಕೃಷಿ ಅರ್ಥಶಾಸ್ತ್ರಜ್ಞ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಅವರು ‘ಜನಮುಖಿ ಚಿಂತಕರು, ಸಾಂಸ್ಕೃತಿಕ ದನಿಗಳು ಮತ್ತು ನಾಗರಿಕ ಸಮಾಜದ ವೇದಿಕೆ’ಯ ಪರವಾಗಿ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ. ಸೆಪ್ಟೆಂಬರ್ 21ರಿಂದ 23ರವರೆಗೆ ನಡೆಯಲಿರುವ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಮತ್ತು 7ನೇ ಕರಡು ಅಧಿಸೂಚನೆ ಕುರಿತು ಕೈಗೊಳ್ಳಬೇಕಾದ ಕಾರ್ಯತಂತ್ರಗಳಿಗೆ ಈ ಪ್ರಸ್ತಾವನೆ ಅತ್ಯಂತ ಮಹತ್ವದ ದಿಕ್ಸೂಚಿಯಾಗಲಿದೆ.
ಕೇವಲ ಆಕ್ಷೇಪಣೆಯಲ್ಲ, ‘ಕರ್ನಾಟಕ ಪರ್ಯಾಯ’ವೇ ಪರಿಹಾರ:
ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿರುವ 7ನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ 20,668 ಚದರ ಕಿ.ಮೀ., 1,449 ಗ್ರಾಮಗಳು ಮತ್ತು 39 ತಾಲೂಕುಗಳು ಪರಿಸರ ಸೂಕ್ಷ್ಮ ಪ್ರದೇಶದ (ESA) ವ್ಯಾಪ್ತಿಗೆ ಸೇರಿವೆ. ಆದರೆ, ಈ ಪ್ರಕ್ರಿಯೆಯಲ್ಲಿ ಕೇವಲ ವಿರೋಧ ದಾಖಲಿಸುವುದರಿಂದ ಪ್ರಯೋಜನವಿಲ್ಲ. ಬದಲಾಗಿ, ‘ಸೂಕ್ತ ಪ್ರದೇಶಕ್ಕೆ ಸೂಕ್ತ ಮಟ್ಟದ ಸಂರಕ್ಷಣೆ’ ಒದಗಿಸುವ ‘ಕರ್ನಾಟಕ ಪರ್ಯಾಯ ಮಾದರಿ’ಯನ್ನು ಕೇಂದ್ರದ ಮುಂದೆ ಇಡಬೇಕು ಎಂದು ಪ್ರಸ್ತಾವನೆಯಲ್ಲಿ ಒತ್ತಿಹೇಳಲಾಗಿದೆ.

ಸಿಎಂ ಗಮನಕ್ಕೆ ತಂದ ಪ್ರಮುಖ 5 ಅಂಶಗಳು:
ಕೇರಳ ಮಾದರಿಯಲ್ಲಿ ವೈಜ್ಞಾನಿಕ ಗಡಿ ಮರುಪರಿಶೀಲನೆ: ಪ್ರಸ್ತಾವಿತ 1,449 ಹಳ್ಳಿಗಳ ಗಡಿಯನ್ನು ದೂರಸಂವೇದಿ ತಂತ್ರಜ್ಞಾನ (Remote Sensing/GIS), ಕಂದಾಯ-ಅರಣ್ಯ ದಾಖಲೆಗಳು ಹಾಗೂ ಗ್ರಾಮಸಭೆಗಳ ಮೂಲಕ ತಳಮಟ್ಟದಲ್ಲಿ ಮರುಪರಿಶೀಲಿಸಬೇಕು. ಕೇವಲ ಸ್ಯಾಟಲೈಟ್ ಚಿತ್ರದಲ್ಲಿ ಹಸಿರು ಕಂಡ ಮಾತ್ರಕ್ಕೆ ಅಡಿಕೆ, ಕಾಫಿ, ತೋಟಗಳನ್ನು ನೈಸರ್ಗಿಕ ಅರಣ್ಯವೆಂದು ಪರಿಗಣಿಸಿರುವುದು ಅವೈಜ್ಞಾನಿಕ. ಜನವಸತಿ ಹಾಗೂ ಕೃಷಿ ಭೂಮಿಯನ್ನು ಸೂಕ್ಷ್ಮ ಅರಣ್ಯ ಪ್ರದೇಶಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಬೇಕು.
ರೈತರನ್ನು ಸಂರಕ್ಷಣೆಯ ಪಾಲುದಾರರನ್ನಾಗಿ ಮಾಡುವುದು: ಮಲೆನಾಡಿನ ರೈತರನ್ನು ‘ಅರಣ್ಯ ನಾಶಕರು’ ಎಂದು ನೋಡುವ ಮನಸ್ಥಿತಿ ಬದಲಾಗಬೇಕು. ಅಡಿಕೆ, ನೆರಳು ಆಶ್ರಿತ ಕಾಫಿ, ಕೃಷಿ-ಅರಣ್ಯ ಹಾಗೂ ದೇವರಕಾಡುಗಳನ್ನು ಉಳಿಸಿಕೊಂಡು ಬಂದಿರುವ ರೈತರಿಗೆ ‘ಪರಿಸರ ಸೇವೆಗೆ ಪಾವತಿ’ (Payment for Ecosystem Services – PES), ಕಾರ್ಬನ್ ಕ್ರೆಡಿಟ್ಸ್ (Carbon Credits) ಮತ್ತು ‘ಪಶ್ಚಿಮ ಘಟ್ಟ ಪರಿಸರ ಸಂರಕ್ಷಣಾ ನಿಧಿ’ಯ ಮೂಲಕ ಆರ್ಥಿಕ ಪ್ರೋತ್ಸಾಹ ನೀಡಬೇಕು. ಅದೇ ಹೊತ್ತಿಗೆ ಅಕ್ರಮ ಒತ್ತುವರಿ, ಬೆಟ್ಟ ಕಡಿಯುವುದು ಹಾಗೂ ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಬೀಳಬೇಕು.
ಸ್ಥಳೀಯ ಜೀವವೈವಿಧ್ಯವೇ ಸಂರಕ್ಷಣೆಯ ಕೇಂದ್ರ: ಹಸಿರು ಹೊದಿಕೆಯ ಬದಲು ಕಾಳಿಂಗ ಸರ್ಪ, ಸಿಂಹಬಾಲದ ಕೋತಿ, ಬಿಳಿಹೊಟ್ಟೆಯ ಶಾರ್ಟ್ವಿಂಗ್ ಪಕ್ಷಿ ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ನೈಸರ್ಗಿಕ ಆವಾಸ, ಶೋಲಾ ಕಾಡುಗಳು, ಜೌಗು ಪ್ರದೇಶಗಳು ಮತ್ತು ನದಿ ಮೂಲಗಳನ್ನು ಮಾತ್ರ ಮೂಲ ಸಂರಕ್ಷಣಾ ಘಟಕಗಳನ್ನಾಗಿ ಘೋಷಿಸಬೇಕು.
ಗ್ರಾಮಸಭೆಗಳಿಗೆ ನಿರ್ಣಾಯಕ ಅಧಿಕಾರ: ಸರ್ವೇ ನಂಬರ್ ಹಂತದಲ್ಲಿ ಕಂದಾಯ ಮತ್ತು ಅರಣ್ಯ ನಕ್ಷೆಗಳನ್ನು ಗ್ರಾಮ ಪಂಚಾಯಿತಿಗಳ ಮುಂದಿಟ್ಟು, ಗ್ರಾಮಸ್ಥರ ನೇರ ಸಹಭಾಗಿತ್ವದೊಂದಿಗೆ ಗಡಿ ನಿರ್ಧಾರವಾಗಬೇಕು.
ಆರು ರಾಜ್ಯಗಳ ಏಕೀಕೃತ ಸಮನ್ವಯ ವ್ಯವಸ್ಥೆ: ಪಶ್ಚಿಮ ಘಟ್ಟ ವ್ಯಾಪಿಸಿರುವ ಆರೂ ರಾಜ್ಯಗಳನ್ನು ಒಳಗೊಂಡ ‘ಪಶ್ಚಿಮ ಘಟ್ಟ ನಿರ್ಧಾರ-ಬೆಂಬಲ ಮತ್ತು ಮೇಲ್ವಿಚಾರಣಾ ಕೇಂದ್ರ’ವನ್ನು ಸಶಕ್ತಗೊಳಿಸಲು ಹಾಗೂ ವಾರ್ಷಿಕ ‘ಪರಿಸರ ಆರೋಗ್ಯ ವರದಿ’ ಬಿಡುಗಡೆ ಮಾಡಲು ಕರ್ನಾಟಕವೇ ಮುಂದಾಳತ್ವ ವಹಿಸಬೇಕು.
ವಿಶೇಷ ಅಧಿವೇಶನದಲ್ಲಿ ಸರ್ಕಾರದ ನಿಲುವು ಹೇಗಿರಬೇಕು?:
ಸೆಪ್ಟೆಂಬರ್ 21–23ರ ವಿಶೇಷ ಅಧಿವೇಶನದಲ್ಲಿ ಕೇವಲ ಆಕ್ಷೇಪಣಾ ನಿರ್ಣಯ ಕೈಗೊಳ್ಳದೆ, ಸೆಪ್ಟೆಂಬರ್ 26ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿರುವ ಅಂತಿಮ ದಾಖಲೆಯಲ್ಲಿ ‘ವೈಜ್ಞಾನಿಕ ಪರ್ಯಾಯ ಚೌಕಟ್ಟು’ ಮಂಡಿಸಬೇಕು. ಸರ್ವೇ ನಂಬರ್ ಹಂತದ ನೆಲಮಟ್ಟದ ಪರಿಶೀಲನೆಗೆ ಕೇಂದ್ರದಿಂದ ಹೆಚ್ಚುವರಿ ಕಾಲಾವಕಾಶ ಪಡೆಯುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕು ಎಂದು ಡಾ. ಪ್ರಕಾಶ್ ಕಮ್ಮರಡಿ ಒತ್ತಾಯಿಸಿದ್ದಾರೆ.





















