ಬೆಂಗಳೂರು, ಆ.03 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಟ್ಯಾಂಕ್ ಬಂಡ್ ರಸ್ತೆ ಹಾಗೂ ರಂಗಸ್ವಾಮಿ ಟೆಂಪಲ್ (ಆರ್.ಟಿ) ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ವಿನೂತನ ಫೈರ್ ಹೈಡ್ರೆಂಟ್ ವ್ಯವಸ್ಥೆಯನ್ನು ಸೋಮವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರಾದ ಕೃಷ್ಣ ಬೈರೇಗೌಡ ಅವರು ಲೋಕಾರ್ಪಣೆಗೊಳಿಸಿದರು.
ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರದ 2023-24ನೇ ಸಾಲಿನ ಅನುದಾನದಡಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ 8 ಆಯ್ದ ರಸ್ತೆಗಳ ಸಮಗ್ರ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
ರಸ್ತೆಗಳ ಪ್ರಮುಖ ಆಕರ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು
ಯುಟಿಲಿಟಿ ಡಕ್ಟ್ ಅಳವಡಿಕೆ: ಭವಿಷ್ಯದಲ್ಲಿ ಪದೇ ಪದೇ ರಸ್ತೆ ಅಗೆಯುವುದನ್ನು ಸಂಪೂರ್ಣವಾಗಿ ತಪ್ಪಿಸುವ ಉದ್ದೇಶದಿಂದ, ಬಿಡಬ್ಲ್ಯೂಎಸ್ಎಸ್ಬಿ ನೀರಿನ ಸಂಪರ್ಕ ಮತ್ತು ಒಳಚರಂಡಿ ಮಾರ್ಗಗಳ ಜೊತೆಗೆ ಎಚ್ಡಿಪಿಇ ಯುಟಿಲಿಟಿ ಡಕ್ಟ್ ಜಾಲವನ್ನು ಸಮಗ್ರವಾಗಿ ಅಳವಡಿಸಲಾಗಿದೆ.

ಟ್ಯಾಂಕ್ ಬಂಡ್ ರಸ್ತೆ ಅಭಿವೃದ್ಧಿ: ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್ ವರೆಗಿನ 418 ಮೀಟರ್ ಉದ್ದದ ಈ ರಸ್ತೆಗೆ 180 ಎಂಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ.
ವಿನೂತನ ಸಾರ್ವಜನಿಕ ಶೌಚಾಲಯ: ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎಸ್ಡಬ್ಲ್ಯೂಎಂಎಲ್ ವತಿಯಿಂದ “eeze” ಎಂಬ ವಿನೂತನ ಪ್ರಿಕಾಸ್ಟ್ ಸಾರ್ವಜನಿಕ ಶೌಚಾಲಯ ಸಂಕೀರ್ಣವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಪುರುಷರು, ಮಹಿಳೆಯರು, ಮಂಗಳಮುಖಿಯರು (Transgender) ಮತ್ತು ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆಗಳಿವೆ.

ಆರ್.ಟಿ. ರಸ್ತೆ: ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗಿನ 645 ಮೀಟರ್ ಉದ್ದದ ರಸ್ತೆಗೆ 150 ಎಂಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ ಹಾಗೂ ಬೂದು ಮತ್ತು ಕೆಂಪು ಬಣ್ಣದ ಜಿಗ್-ಜಾಗ್ ಪೇವರ್ಗಳೊಂದಿಗೆ ಬಫರ್ ವಲಯ ನಿರ್ಮಿಸಲಾಗಿದೆ.

ಸೌಂದರ್ಯೀಕರಣ: ಈ ಎರಡೂ ರಸ್ತೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಪುರಾತನ ಶೈಲಿಯ (Antique finish) ಎಲ್ಇಡಿ ಬೀದಿ ದೀಪಗಳು ಮತ್ತು ಥರ್ಮೋ ಪ್ಲಾಸ್ಟಿಕ್ ರಸ್ತೆ ಗುರುತುಗಳನ್ನು ಅಳವಡಿಸಲಾಗಿದೆ.
ಬೆಂಗಳೂರಿನಲ್ಲೇ ಪ್ರಥಮ ವಿನೂತನ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ
ಆರ್.ಟಿ. ರಸ್ತೆಯ ಉದ್ಘಾಟನೆಯ ಅತ್ಯಂತ ಪ್ರಮುಖ ಅಂಶವೆಂದರೆ, ಇಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ‘ಫೈರ್ ಹೈಡ್ರೆಂಟ್’ (Fire Hydrant) ಜಾಲ. ಇದರ ವಿಶೇಷತೆ ಮತ್ತು ಅವಶ್ಯಕತೆಗಳು ಹೀಗಿವೆ:
ಅವಶ್ಯಕತೆ ಮತ್ತು ಹಿನ್ನೆಲೆ: ಐತಿಹಾಸಿಕ ‘ಬೆಂಗಳೂರು ಪೇಟೆ’ ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿವೆ. ಈ ಹಿಂದೆ ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನಗಳ ಪ್ರವೇಶಕ್ಕೆ ತೀವ್ರ ಅಡಚಣೆಯಾಗಿ ಅಪಾರ ಹಾನಿ ಸಂಭವಿಸಿದ ಉದಾಹರಣೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಕಾರ್ಯನಿರ್ವಹಣೆ: ಅಗ್ನಿ ಅವಘಡಗಳಾದಾಗ ಅಗ್ನಿಶಾಮಕ ವಾಹನಗಳು ಕಿರಿದಾದ ರಸ್ತೆಯೊಳಗೆ ಪ್ರವೇಶಿಸಲು ಸಾಧ್ಯವಾಗದಿದ್ದರೂ, ರಸ್ತೆಯುದ್ದಕ್ಕೂ ಇರುವ ಈ ಹೈಡ್ರೆಂಟ್ ಪಾಯಿಂಟ್ಗಳ ಮೂಲಕ ಸುಲಭವಾಗಿ ನೀರು ಪಡೆದು ತಕ್ಷಣದ ತುರ್ತು ಸ್ಪಂದನೆಯನ್ನು ಖಚಿತಪಡಿಸಿಕೊಳ್ಳಬಹುದು.
ಬೆಂಗಳೂರಿನ ರಸ್ತೆಗಳಲ್ಲಿ ಇಂತಹ ಜೀವ ರಕ್ಷಕ ಮೂಲಸೌಕರ್ಯವನ್ನು ಅಳವಡಿಸುತ್ತಿರುವುದು ಇದೇ ಮೊದಲು ಹಾಗೂ ಇದೊಂದು ವಿನೂತನ ಪರಿಕಲ್ಪನೆಯಾಗಿದೆ.
ಈ ಕಾರ್ಯಕ್ರಮದಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡೂರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಹೆಚ್ಚುವರಿ ಆಯುಕ್ತರಾದ ವೆಂಕಟಾಚಲಪತಿ ಸೇರಿದಂತೆ ಜಿಬಿಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





















