ಬೆಂಗಳೂರು, ಆ.02 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಯು ವಿನೂತನ ಹೆಜ್ಜೆಯಿಟ್ಟಿದೆ.
ಯಾವುದೇ ಬೃಹತ್ ಸಿವಿಲ್ ಕಾಮಗಾರಿಗಳಿಲ್ಲದೆ, ಲಭ್ಯವಿರುವ ರಸ್ತೆ ಮೂಲಸೌಕರ್ಯಗಳನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು ಟ್ರಾಫಿಕ್ ನಿಯಂತ್ರಿಸುವ ‘ಶಿಸ್ತುಬದ್ದ ಸಂಚಾರಿ ಕಾರಿಡಾರ್’ (Enforced Easy Flow Corridor – EEFC) ಯೋಜನೆಯನ್ನು ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ನಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಜಾರಿಗೊಳಿಸಲಾಗಿದೆ.

ಏನಿದು ಇ.ಇ.ಎಫ್.ಸಿ (EEFC) ಯೋಜನೆ?:
ಈ ಯೋಜನೆಯು ವಾಹನ ದಟ್ಟಣೆಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತ್ವರಿತ ಹಾಗೂ ಪರಿಣಾಮಕಾರಿ ಇಂಜಿನಿಯರಿಂಗ್ ಕ್ರಮಗಳನ್ನು ಜಾರಿಗೊಳಿಸುವ ನೂತನ ಸಂಚಾರ ನಿರ್ವಹಣಾ ಮಾದರಿಯಾಗಿದೆ. ಪೂರ್ವ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಪ್ರಕಾರ, ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ ಮತ್ತು ಮುಖ್ಯರಸ್ತೆಯ ಸುಮಾರು 175 ಮೀಟರ್ ಉದ್ದದ ರಸ್ತೆ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದೆ.

ಬದಲಾದ ಚಿತ್ರಣ: ಅಂಕಿ-ಅಂಶಗಳ ವರದಿ:
ಈ ಪೈಲಟ್ ಯೋಜನೆಯು ಕಡ್ಡಾಯ ಲೇನ್ ಶಿಸ್ತು ಮತ್ತು ನಿರಂತರ ವಾಹನ ಸಂಚಾರವನ್ನು ಜಾರಿಗೊಳಿಸುವ ಮೂಲಕ ಜಂಕ್ಷನ್ನ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ತಂದಿದೆ:
ಪ್ರಯಾಣದ ಸಮಯ ಕಡಿತ: ವಾಹನಗಳ ಸಂಚಾರದಲ್ಲಿ 50–60% ರಷ್ಟು ಪ್ರಯಾಣದ ಸಮಯ ಇಳಿಕೆಯಾಗಿದೆ (ಉದಾಹರಣೆಗೆ, ಮಹದೇವಪುರದಿಂದ ಕಗ್ಗದಾಸಪುರ ಕಡೆಗೆ 8 ನಿಮಿಷದಿಂದ 4 ನಿಮಿಷಕ್ಕೆ ಇಳಿಕೆ).
ತಪ್ಪು ದಿಕ್ಕಿನ (Wrong-Lane) ಪ್ರವೇಶಕ್ಕೆ ಬ್ರೇಕ್: ಗೇಟ್ ತೆರೆದಿದ್ದಾಗ ತಪ್ಪು ದಿಕ್ಕಿನಿಂದ ಬರುತ್ತಿದ್ದ ವಾಹನಗಳ ಸಂಖ್ಯೆ ಗಂಟೆಗೆ 60 ರಿಂದ ಕೇವಲ 2 ಕ್ಕೆ ಇಳಿದಿದೆ (97% ಇಳಿಕೆ).
ವಾಹನ ಸಂಚಾರ ಸಾಮರ್ಥ್ಯ ದ್ವಿಗುಣ: ಪ್ರತಿ 15 ನಿಮಿಷಕ್ಕೆ 300–400 ಸಂಚರಿಸುತ್ತಿದ್ದ ವಾಹನಗಳ ಸಂಖ್ಯೆ ಇದೀಗ 700ಕ್ಕೂ ಹೆಚ್ಚು ವಾಹನಗಳಿಗೆ ಏರಿಕೆಯಾಗಿದೆ.
ಜಂಕ್ಷನ್ ಬ್ಲಾಕೇಜ್ ಇಲ್ಲ: ದಿನಕ್ಕೆ ಸಂಭವಿಸುತ್ತಿದ್ದ 12ಕ್ಕೂ ಹೆಚ್ಚು ಬ್ಲಾಕೇಜ್ ಘಟನೆಗಳು ಸಂಪೂರ್ಣವಾಗಿ ನಿವಾರಣೆಯಾಗಿ ಶೂನ್ಯಕ್ಕೆ ಇಳಿದಿದೆ.
ವಿಶೇಷ ವಿನ್ಯಾಸದ ಬ್ಯಾರಿಕೇಡ್ಗಳು:
ಟ್ರಾಫಿಕ್ ಕಂಟ್ರೋಲ್ ಮಾಡಲು ಅಳವಡಿಸಲಾಗಿರುವ ಬ್ಯಾರಿಕೇಡ್ಗಳು ವಿಶೇಷ ಪುಷ್-ಪುಲ್ ಚೈನ್ ವ್ಯವಸ್ಥೆ ಹೊಂದಿವೆ. ಪ್ರತಿ ಬ್ಯಾರಿಕೇಡ್ 20 ಕೆ.ಜಿ.ಗಿಂತ ಕಡಿಮೆ ತೂಕವಿರುವುದರಿಂದ, ತುರ್ತು ಸಂದರ್ಭಗಳಲ್ಲಿ (ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ) ಒಬ್ಬನೇ ಸಂಚಾರ ಪೊಲೀಸ್ ಸಿಬ್ಬಂದಿ ಸುಲಭವಾಗಿ ನಿರ್ವಹಿಸಿ ದಾರಿ ಮಾಡಿಕೊಡಬಹುದಾಗಿದೆ. ಇದು ಸಾರ್ವಜನಿಕ ಸ್ನೇಹಿ ವ್ಯವಸ್ಥೆಗೆ ನಾಂದಿ ಹಾಡಿದೆ.
ಮುಂದಿನ ಕಾರ್ಯಯೋಜನೆ: 10 ಜಂಕ್ಷನ್ಗಳಿಗೆ ವಿಸ್ತರಣೆ:
’ಫೆಚ್ ಮೊಬಿಲಿಟಿ’ (Fetch Mobility) ಸಂಸ್ಥೆಯ ಸಂಸ್ಥಾಪಕರಾದ ಜೋಸೆಫ್ ಥಾಮಸ್ ಅವರು ಪ್ರಸ್ತಾಪಿಸಿದ ಈ ಇ.ಇ.ಎಫ್.ಸಿ ಪರಿಕಲ್ಪನೆಗೆ, ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ವಿಶೇಷ ಪ್ರೋತ್ಸಾಹ ನೀಡಿ ಅನುಮೋದಿಸಿದ್ದರು.
ಕಗ್ಗದಾಸಪುರದಲ್ಲಿ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಸುಮಾರು 5 ರಿಂದ 10 ಪ್ರಮುಖ ಸಂಚಾರ ದಟ್ಟಣೆ ಇರುವ ಜಂಕ್ಷನ್ಗಳನ್ನು ಗುರುತಿಸಿ ಈ ಯೋಜನೆಯನ್ನು ವಿಸ್ತರಿಸಲು ಪಾಲಿಕೆ ಮುಂದಾಗಿದೆ. ಬೃಹತ್ ರಸ್ತೆ ವಿಸ್ತರಣೆ ಕಾಮಗಾರಿಗಳಿಲ್ಲದೆಯೇ ಟ್ರಾಫಿಕ್ ಕಂಟ್ರೋಲ್ ಮಾಡಬಹುದೆಂಬುದನ್ನು ಈ ಯೋಜನೆ ಸಾಬೀತುಪಡಿಸಿದೆ.




















