ಬೆಂಗಳೂರು, ಜು.29 www.bengaluruwire.com: ಆನ್ಲೈನ್ ಫುಡ್ ಡೆಲಿವರಿ ದೈತ್ಯ ‘ಸ್ವಿಗ್ಗಿ’ (Swiggy) ವಿರುದ್ಧ ಸಿಡಿದೆದ್ದಿರುವ ಬೆಂಗಳೂರು ಹೋಟೆಲುಗಳ ಸಂಘ, ಆಗಸ್ಟ್ 15 ರಿಂದ ಸ್ವಿಗ್ಗಿ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಸ್ವಿಗ್ಗಿ ಸಂಸ್ಥೆಯಿಂದ ಹೋಟೆಲ್ ಮಾಲೀಕರಿಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಹಾಗೂ ಬಿಕ್ಕಟ್ಟು ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಘವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೋಟೆಲ್ ಮಾಲೀಕರ ಪ್ರಮುಖ ಆರೋಪಗಳೇನು?:
ಬೆಂಗಳೂರು ಹೋಟೆಲುಗಳ ಸಂಘ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಸ್ವಿಗ್ಗಿ ಸಂಸ್ಥೆಯು ಹೋಟೆಲ್ ಮಾಲೀಕರ ಯಾವುದೇ ಲಿಖಿತ ಅಥವಾ ಡಿಜಿಟಲ್ ಅನುಮತಿ ಪಡೆಯದೆ CPC/CPA/Promoted Ads ನಂತಹ ಜಾಹೀರಾತುಗಳನ್ನು ಆರಂಭಿಸುತ್ತಿದೆ. ಮಾತ್ರವಲ್ಲದೆ, ಈ ಜಾಹೀರಾತು ಮತ್ತು ಪ್ರಚಾರ ವೆಚ್ಚಗಳನ್ನು ನೇರವಾಗಿ ಮಾಲೀಕರ ಬ್ಯಾಂಕ್ ಖಾತೆಗಳಿಂದಲೇ ಕಡಿತಗೊಳಿಸುತ್ತಿದೆ. ಇಂತಹ ಜಾಹೀರಾತುಗಳನ್ನು ಯಾವಾಗ ಬೇಕಾದರೂ ನಿಲ್ಲಿಸಲು (One-Click Opt-Out) ಅವಕಾಶ ನೀಡಬೇಕು ಹಾಗೂ ನಿಲ್ಲಿಸಿದ ನಂತರ ಯಾವುದೇ ಶುಲ್ಕ ವಿಧಿಸಬಾರದು ಎಂಬುದು ಮಾಲೀಕರ ಪ್ರಮುಖ ಆಗ್ರಹವಾಗಿದೆ.

ಪಾರದರ್ಶಕತೆಯ ಕೊರತೆ ಹಾಗೂ ಜಿಎಸ್ಟಿ ಮೇಲೂ ಸೇವಾಶುಲ್ಕ:
ಸ್ವಿಗ್ಗಿ ನೀಡುವ ಪ್ರತಿ ಪಾವತಿ ವಿವರದಲ್ಲಿ ಕಮಿಷನ್, GST, CPC Ads ಸೇರಿದಂತೆ ಎಲ್ಲಾ ಶುಲ್ಕಗಳನ್ನು ಸ್ಪಷ್ಟವಾಗಿ ತೋರಿಸುತ್ತಿಲ್ಲ. ಪಾರದರ್ಶಕತೆಯ ಕೊರತೆಯಿಂದಾಗಿ ಮಾಲೀಕರಿಗೆ ವಹಿವಾಟುಗಳ ಹೊಂದಾಣಿಕೆ (Reconciliation) ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಇದಕ್ಕೂ ಮಿಗಿಲಾಗಿ, ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್ಟಿ (GST) ಮೊತ್ತದ ಮೇಲೆಯೂ ಸ್ವಿಗ್ಗಿ ಸೇವಾಶುಲ್ಕ ವಿಧಿಸಿ ಅದನ್ನು ಹೋಟೆಲ್ ಮಾಲೀಕರಿಂದಲೇ ವಸೂಲಿ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಎಲ್ಲಾ ಅನಗತ್ಯ ಕಡಿತಗಳಿಂದಾಗಿ ಹೋಟೆಲ್ ಮಾಲೀಕರಿಗೆ ಒಟ್ಟು ಮೊತ್ತದ ಶೇ. 50% ಗಿಂತಲೂ ಕಡಿಮೆ ಪಾವತಿಯಾಗುತ್ತಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ.
ಆಗಸ್ಟ್ 15 ಡೆಡ್ಲೈನ್: ಪರ್ಯಾಯ ವ್ಯವಸ್ಥೆಗೆ ಚಿಂತನೆ:
ಈ ಹಿಂದೆ ಹಲವು ಬಾರಿ ಸ್ವಿಗ್ಗಿ ಪ್ರತಿನಿಧಿಗಳೊಂದಿಗೆ ನೇರ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಇದು ಕೊನೆಯ ಅವಕಾಶವಾಗಿದ್ದು, ಕೂಡಲೇ ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ವ್ಯವಹಾರ ನಡೆಸದಿದ್ದರೆ, ಆಗಸ್ಟ್ 15 ರಿಂದ BHA, KSHA, NRAI, KBSA, ಬಾರ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಸೇರಿದಂತೆ ನಗರದ ಎಲ್ಲಾ ಸಂಘಟನೆಗಳು ಒಮ್ಮತದಿಂದ ಸ್ವಿಗ್ಗಿ ಜೊತೆಗಿನ ವ್ಯವಹಾರವನ್ನು ಸ್ಥಗಿತಗೊಳಿಸಲಿವೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೊಳ್ಳ ಎಸ್, ಗೌರವಾಧ್ಯಕ್ಷ ಪಿ.ಸಿ. ರಾವ್ ಹಾಗೂ ಗೌ. ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಎಚ್ಚರಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಆಗುವ ಅನಾನುಕೂಲ ತಪ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದೂ ಸಂಘ ಸ್ಪಷ್ಟಪಡಿಸಿದೆ.




















