ಬೆಂಗಳೂರು, ಜು.26 www.bengaluruwire.com: ಬೆಂಗಳೂರಿನಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡುವ ಮುನ್ನ ಎಚ್ಚರ! ರಸ್ತೆ ಬದಿ, ಸ್ವಚ್ಛಗೊಳಿಸಿದ ಜಾಗಗಳಲ್ಲಿ ಕಸ ಎಸೆದರೆ ದಂಡ ಮಾತ್ರವಲ್ಲ, ನಿಮ್ಮ ಮೇಲೆ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಬಾಣಸವಾಡಿಯ 7ನೇ ಮುಖ್ಯರಸ್ತೆಯ ತೆರವುಗೊಳಿಸಿದ ಬ್ಲಾಕ್ ಸ್ಪಾಟ್ ಜಾಗದಲ್ಲಿ ಮತ್ತೆ ಕಸ ಎಸೆದ ನಾಲ್ವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಘಟನೆಯ ಹಿನ್ನೆಲೆ ಏನು?:
ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಭಾಗದ ವಾರ್ಡ್ ಸಂಖ್ಯೆ 27ರ ವ್ಯಾಪ್ತಿಗೆ ಬರುವ ಬಾಣಸವಾಡಿ 7ನೇ ಮುಖ್ಯರಸ್ತೆಯಲ್ಲಿನ ಕಸದ ಬ್ಲಾಕ್ ಸ್ಪಾಟ್ ಅನ್ನು ಇತ್ತೀಚೆಗೆ ಸಂಪೂರ್ಣವಾಗಿ ತೆರವುಗೊಳಿಸಿ, ಸೌಂದರ್ಯೀಕರಣ (Beautification) ಮಾಡಲಾಗಿತ್ತು. ಈ ಜಾಗದಲ್ಲಿ ಮತ್ತೆ ಕಸ ಸುರಿಯದಂತೆ ತಡೆಯಲು ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ರಾತ್ರಿ ಪಾಳಿಯಲ್ಲಿ ವಾರ್ಡ್ ಮಾರ್ಷಲ್ಗಳನ್ನು ಕಣ್ಗಾವಲಿಗಾಗಿ ನಿಯೋಜಿಸಲಾಗಿತ್ತು.

ದಂಡ ಕಟ್ಟಲು ನಿರಾಕಾರ, ಎಫ್ಐಆರ್ ದಾಖಲು:
ಜುಲೈ 16ರಂದು ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಮಾರ್ಷಲ್ಗಳು ಕಸ ಎಸೆಯುತ್ತಿದ್ದ ನಾಲ್ವರನ್ನು ತಡೆದು ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ, ದಂಡ ಪಾವತಿಸಲು ದುರಹಂಕಾರದಿಂದ ನಿರಾಕರಿಸಿದ ಆ ವ್ಯಕ್ತಿಗಳು ಕಸವನ್ನು ಅಲ್ಲೇ ಬಿಸಾಡಿ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಸರ್ವಜ್ಞನಗರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ, ಇದೀಗ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 280ರ ಅಡಿಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸ್ ಇಲಾಖೆ ಮುಂದಿನ ತನಿಖೆ ಕೈಗೊಂಡಿದೆ.
ಪಾಲಿಕೆಯ ಕಟ್ಟುನಿಟ್ಟಿನ ಎಚ್ಚರಿಕೆ:
ಶಾಶ್ವತವಾಗಿ ತೆರವುಗೊಳಿಸಿ ಸೌಂದರ್ಯೀಕರಿಸಿರುವ ಕಸದ ಬ್ಲಾಕ್ ಸ್ಪಾಟ್ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸಾರ್ವಜನಿಕ ಸ್ವಚ್ಛತೆಗೆ ಧಕ್ಕೆ ತರುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಎಚ್ಚರಿಕೆ ನೀಡಿದೆ.




















