ಬೆಂಗಳೂರು, ಆ.04 www.bengaluruwire.com: ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷವು ಪಾದಯಾತ್ರೆ ನಡೆಸಿದ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಪೋಸ್ಟರ್ ಸಮರ ತಾರಕಕ್ಕೇರಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಹಾಗೂ ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕವು ಜೆಡಿಎಸ್ ಕಚೇರಿ ಜೆಪಿ ಭವನದ ಗೋಡೆ ಮತ್ತು ಗೇಟ್ಗಳಿಗೆ ‘ಹೊಟ್ಟೆಕಿಚ್ಚಿನ ಸುಮಾರ್ ಕೋಳಿ’ ಎಂಬ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜೆಪಿ ಭವನದ ಬಳಿ ಸೋಮವಾರ ತಡರಾತ್ರಿ 10 ರಿಂದ 11 ಗಂಟೆ ಸುಮಾರಿಗೆ ಈ ಪೋಸ್ಟರ್ ಅಭಿಯಾನ ನಡೆದಿದೆ ಎಂದು ವರದಿಯಾಗಿದೆ. ಜೆಡಿಎಸ್ ಪಾದಯಾತ್ರೆಯನ್ನು “ಬೇನಾಮಿ ಆಸ್ತಿಯನ್ನು ರಕ್ಷಿಸುವ ಯಾತ್ರೆ” ಎಂದು ಕಾಂಗ್ರೆಸ್ ಯುವ ಘಟಕ ಲೇವಡಿ ಮಾಡಿದೆ.
ಸಾಮಾಜಿಕ ಜಾಲತಾಣ ಹಾಗೂ ಪೋಸ್ಟರ್ನಲ್ಲಿ ಏನಿದೆ?

ಯುವ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಪೋಸ್ಟ್ ಮಾಡಿದ್ದು, ಎಚ್.ಡಿ.ಕುಮಾರಸ್ವಾಮಿ ಅವರ ಹೆಸರೆತ್ತದೆ ಪರೋಕ್ಷವಾಗಿ ಅವರ ಫೋಟೋ ಬಳಸಿ ಟೀಕಾ ಪ್ರಹಾರ ನಡೆಸಿದೆ. ಪೋಸ್ಟ್ ಹಾಗೂ ಪೋಸ್ಟರ್ನಲ್ಲಿನ ಪ್ರಮುಖ ಅಂಶಗಳು ಹೀಗಿವೆ:
ಅಪರೂಪದ ಕೋಳಿ: “ಈ ಹೊಟ್ಟೆಕಿಚ್ಚಿನ ಕೋಳಿಯನ್ನು ಒಮ್ಮೆ ನೋಡಿಬಿಡಿ! ಇದು ಬಹಳ ಅಪರೂಪದ ಕೋಳಿ. ಇದನ್ನು ಗುರುತಿಸೋದು ಸುಲಭ; ಈ ಕೋಳಿಗೆ ತನ್ನ ಮಗನ ಹೊರತಾಗಿ ಯಾರಾದರೂ ಒಕ್ಕಲಿಗರಿಗೆ ಅಧಿಕಾರ ಸಿಗುತ್ತೋ, ಆಗ ಈ ಕೋಳಿ ವಿಲವಿಲ ಅಂತ ಒದ್ದಾಡಿ ಹೋಗುತ್ತೆ.”
ರಾಜಕೀಯ ಅಭದ್ರತೆ: “ತನ್ನ ಮಗನಿಗೆ ಎಲ್ಲಿ ಅಡ್ಡಿಯಾಗುತ್ತಾರೋ ಅನ್ನೋ ದುರುದ್ದೇಶದಿಂದ ತನ್ನದೇ ಜಿಲ್ಲೆಯ, ತನ್ನದೇ ಜಾತಿಯ, ತನ್ನದೇ ಸ್ನೇಹಿತನಿಗೆ ರಾಜಕೀಯವಾಗಿ ಬೆಳೆಯಲು ಬಿಟ್ಟಿರಲಿಲ್ಲ! ಈ ಹೊಟ್ಟೆಕಿಚ್ಚಿನ ಕೋಳಿಗೆ ಎಷ್ಟು ಅಭದ್ರತೆ ಇದೆ ಅಂದರೆ, ಅತ್ತ ದೊಡ್ಡವರಿಗೆ ದೊಡ್ಡವನೂ ಅಲ್ಲದ; ಚಿಕ್ಕವರಿಗೆ ಚಿಕ್ಕವನೂ ಅಲ್ಲದ ಎಡಬಿಡಂಗಿ ಪುತ್ರನ ಸೋಕಾಲ್ಡ್ ಭವಿಷ್ಯಕ್ಕೆ ಅಡ್ಡಿಯಾಗುತ್ತಾರೆ ಅಂತ ಹೊಸಕಿ ಹಾಕಿದ ರಾಜಕೀಯ ನಾಯಕರೆಷ್ಟೋ!”
ಕಾಲವೇ ಉತ್ತರ ಕೊಡಲಿದೆ: “ಎಲ್ಲದ್ದಕ್ಕೂ ಮದ್ದಿದೆ, ಆದರೆ ಹೊಟ್ಟೆಕಿಚ್ಚಿಗೆ ಇಲ್ಲ! ಇದಕ್ಕೆ ಕಾಲವೇ ಉತ್ತರ ಕೊಡಲಿದೆ” ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಒಕ್ಕಲಿಗ ಸಮುದಾಯದ ನಾಯಕತ್ವ ಮತ್ತು ಬಿಡದಿ ಟೌನ್ಶಿಪ್ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ರಾಜಕೀಯ ಮೇಲಾಟ, ಮುಂಬರುವ ದಿನಗಳಲ್ಲಿ ಇನ್ನಷ್ಟು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.





















