ಬೆಂಗಳೂರು, ಜು.24 www.bengaluruwire.com: ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಒಳಪಡುವ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ತಲೆ ಎತ್ತಿರುವ ವಾಣಿಜ್ಯ ಮಳಿಗೆಗಳು ಮತ್ತು ಬೃಹತ್ ಜಾಹೀರಾತು ಫಲಕಗಳಿಗೆ ಶೀಘ್ರದಲ್ಲೇ ತೆರಿಗೆಯ ಬಿಸಿ ತಟ್ಟಲಿದೆ.
ಈ ಸಂಬಂಧ ನಿಯಮಾನುಸಾರ ಶುಲ್ಕ ವಿಧಿಸಲು ಸಮಿತಿಯೊಂದನ್ನು ರಚಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖಾ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೆದ್ದಾರಿ ಬದಿಯಲ್ಲಿರುವ ಕಂದಾಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ಗ್ರಾನೈಟ್, ಮಾರ್ಬಲ್ ಮಾರಾಟ ಮಾಡುವ ಮಳಿಗೆಗಳು, ಢಾಬಾಗಳು ಹಾಗೂ ಹೋಟೆಲ್ಗಳು ಭರ್ಜರಿ ವಹಿವಾಟು ನಡೆಸುತ್ತಿವೆ. ಆದರೆ, ಭೂಪರಿವರ್ತನೆಯಾಗದ (Land Conversion) ಈ ಜಾಗಗಳಿಂದ ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಯಾವುದೇ ಸೂಕ್ತ ಆದಾಯ ಬರುತ್ತಿಲ್ಲ. ಪಂಚಾಯತಿಗಳ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲು ಇಲಾಖೆ ಮುಂದಾಗಿದೆ.
ಜಾಹೀರಾತು ಫಲಕಗಳಿಗೂ ಬೀಳಲಿದೆ ಶುಲ್ಕ:

ಕೇವಲ ವಾಣಿಜ್ಯ ಮಳಿಗೆಗಳು ಮಾತ್ರವಲ್ಲದೆ, ಗ್ರಾ.ಪಂ. ವ್ಯಾಪ್ತಿಯ ಆಯಕಟ್ಟಿನ ಜಾಗಗಳಲ್ಲಿ ಅಳವಡಿಸಿರುವ ಬೃಹತ್ ಜಾಹೀರಾತು ಫಲಕಗಳು (ಹೋರ್ಡಿಂಗ್ಸ್) ಹಾಗೂ ಖಾಸಗಿ ಮನೆಗಳ ಗೋಡೆಗಳಿಗೆ ಬಣ್ಣ ಬಳಿದು ಪ್ರದರ್ಶಿಸುವ ಜಾಹೀರಾತುಗಳಿಗೂ ಕಡಿವಾಣ ಬೀಳಲಿದೆ.
ಇವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದರೂ ಪಂಚಾಯತಿಗೆ ಶುಲ್ಕ ಪಾವತಿಸುತ್ತಿಲ್ಲ. ಈ ನಿಟ್ಟಿನಲ್ಲಿ ತಕ್ಷಣವೇ ಸಮಿತಿ ರಚಿಸಿ, ವರದಿ ಪಡೆದು ವಾಣಿಜ್ಯ ವಹಿವಾಟು ಮತ್ತು ಜಾಹೀರಾತು ಪ್ರದರ್ಶನದ ಭೂಮಿಗೆ ಶುಲ್ಕ ವಿಧಿಸಲು ನಿಯಮ ರೂಪಿಸುವಂತೆ ಸಚಿವರು ತಮ್ಮ ಲಿಖಿತ ನಿರ್ದೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ.





















