ಬೆಂಗಳೂರು, ಜು.06 www.bengaluruwire.com: ನಗರದಲ್ಲಿರುವ ಕಿದ್ವಾಯಿ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ (KMIO) ನಿರ್ವಹಣೆಯಲ್ಲಿನ ವೈಫಲ್ಯ, ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅನಾಮಧೇಯ ದೂರಿನ ಆಧಾರದ ಮೇಲೆ ದಾಖಲಾದ ಈ ಪ್ರಕರಣದ ಕುರಿತು ಕಾಲಕಾಲಕ್ಕೆ ವಿಚಾರಣೆ ನಡೆಸುತ್ತಿದ್ದು, ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗುತ್ತಿದೆ.
ಔಷಧಿ ಕೊರತೆ ಬಗ್ಗೆ ತೀವ್ರ ಅಸಮಾಧಾನ:
ಜೂನ್ 29 ರಂದು ನಡೆದ ಮುಂದುವರೆದ ವಿಚಾರಣೆ ವೇಳೆ, ಕ್ಯಾನ್ಸರ್ ರೋಗಿಗಳಿಗೆ ಅತ್ಯಗತ್ಯವಾಗಿರುವ ‘ಟ್ರಾಸ್ಟುಜುಮಾಬ್’ (Trastuzumab) ನಂತಹ ಪ್ರಮುಖ ಔಷಧಿಗಳ ಲಭ್ಯತೆಯಿಲ್ಲದಿರುವ ಬಗ್ಗೆ ಬೆಳಕು ಚೆಲ್ಲಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಈ ಔಷಧಿಯನ್ನು ಹೆಲ್ತ್ ಬೆನಿಫಿಟ್ ಪ್ಯಾಕೇಜ್ (HBP)-2022 ರ ಅಡಿಯಲ್ಲಿ ಸೇರಿಸಲಾಗಿದೆ ಮತ್ತು ಅದಕ್ಕಾಗಿ ಬಜೆಟ್ ಘೋಷಣೆಯಾಗಿದೆ ಎಂದು ತಿಳಿಸಿದರು.

ಆದರೆ, ಸಲ್ಲಿಸಿರುವ ದಾಖಲಾತಿಗಳ ಪ್ರಕಾರ ಇದರ ಅನುಷ್ಠಾನವು ಇನ್ನೂ ಪ್ರಕ್ರಿಯೆಯಲ್ಲಿದೆ ಎಂಬುದು ಸಾಬೀತಾಗಿದ್ದು, ಈ ವಿಷಯದಲ್ಲಿ ಸರ್ಕಾರ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ತ ಅನುಪಾಲನಾ ವರದಿಯೊಂದಿಗೆ ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದಾಗಿ ಹಾಜರಿರಬೇಕೆಂದು ಪ್ರಧಾನ ಕಾರ್ಯದರ್ಶಿಗಳಿಗೆ ಲೋಕಾಯುಕ್ತರು ಆದೇಶಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸಾ ವೆಚ್ಚ ಮಿತಿ:
ವಿಚಾರಣೆ ವೇಳೆ ಅಧಿಕಾರಿಗಳು ಒದಗಿಸಿದ ಮಾಹಿತಿಯಂತೆ:
ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB-PMJAY CM’s ArK) ಯೋಜನೆಯಡಿ, ಬಿಪಿಎಲ್ (BPL) ಮತ್ತು ಪಿಎಚ್ಎಚ್ (PHH) ಕಾರ್ಡ್ ಹೊಂದಿದ ಕುಟುಂಬಗಳಿಗೆ ವಾರ್ಷಿಕ ಗರಿಷ್ಠ ರೂ. 5,00,000 ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ.
ಎಪಿಎಲ್ (APL) ಕುಟುಂಬಗಳಿಗೆ ವಾರ್ಷಿಕ ರೂ. 1,50,000 ವರೆಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಪ್ಯಾಕೇಜ್ನ ಶೇಕಡಾ 30 ರಷ್ಟನ್ನು ಮಾತ್ರ ಸರ್ಕಾರ ಭರಿಸಲಿದ್ದು, ಬಾಕಿ ಶೇಕಡಾ 70 ರಷ್ಟನ್ನು ಫಲಾನುಭವಿಯೇ ಭರಿಸಬೇಕಾಗುತ್ತದೆ.
ಔಷಧಿಗಳ ಸಂಗ್ರಹಣೆ ಅಥವಾ ಪೂರೈಕೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ವಿಚಾರಣೆಯಲ್ಲಿ ಹಾಜರಿದ್ದ ಅಧಿಕಾರಿಗಳು ಲೋಕಾಯುಕ್ತರಿಗೆ ತಿಳಿಸಿದರು.
ದುಬಾರಿ ಚಿಕಿತ್ಸೆಗಳ ಸೇರ್ಪಡೆಗೆ ಸರ್ಕಾರದ ಮೀನಮೇಷ?:
ಉದ್ದೇಶಿತ ಕೀಮೋಥೆರಪಿ ಮತ್ತು ಇಮ್ಯುನೊಥೆರಪಿ ಸೇರಿದಂತೆ ಹೆಚ್ಚಿನ ವೆಚ್ಚದ ಚಿಕಿತ್ಸೆಗಳನ್ನು ಸೇರ್ಪಡೆಗೊಳಿಸುವ ಕುರಿತು ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಚಿಕಿತ್ಸೆಯ ವೆಚ್ಚವು ನಿಗದಿತ ಹಣಕಾಸಿನ ಮಿತಿಯನ್ನು ಮೀರುವ ಸಾಧ್ಯತೆಯಿರುವುದರಿಂದ, ಸಮಗ್ರ ಮೌಲ್ಯಮಾಪನ, ವೆಚ್ಚ-ಲಾಭದ ವಿಶ್ಲೇಷಣೆ ಮತ್ತು ವೈದ್ಯಕೀಯ ಸಮರ್ಥನೆಯ ಅಗತ್ಯವಿದೆ ಎಂದು ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕಿದ್ವಾಯಿ ಸಂಸ್ಥೆಯಿಂದ ಈ ಬಗ್ಗೆ ಮಾಹಿತಿಗಳನ್ನು ಕೋರಲಾಗಿದ್ದು, ತಾಂತ್ರಿಕ ತಜ್ಞರ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕಿದ್ವಾಯಿ ಅಧಿಕಾರಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು, ಅಸಹಾಯಕ ಬಡ ಸಂತ್ರಸ್ತರಿಗೆ ಸಹಾಯದ ಹಸ್ತವನ್ನು ಚಾಚುವ ಅಗತ್ಯವನ್ನು ಆದ್ಯತೆಯ ಮೇರೆಗೆ ನೋಡಬೇಕಾಗಿದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಪಿಇಟಿ ಸ್ಕ್ಯಾನ್ನಂತಹ (PET scan) ಉನ್ನತ ಮಟ್ಟದ ತಪಾಸಣೆಗಳು ಪ್ರಸ್ತುತ ಸ್ವತಂತ್ರ ಘಟಕವಾಗಿ ಲಭ್ಯವಿಲ್ಲದಿದ್ದರೂ, ಇದನ್ನು ಎಚ್ಬಿಪಿ-2022 ರ ಅಡಿಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಂತಿಮವಾಗಿ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 25 ಕ್ಕೆ ಮುಂದೂಡಲಾಯಿತು.




















