ಬೆಂಗಳೂರು, ಜು.6 www.bengaluruwire.com: ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ಕಾರ್ಖಾನೆಯಾಗಿದ್ದ ಹೆಚ್ಎಂಟಿ (HMT) ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ, ರಾಜ್ಯ ಕಾಂಗ್ರೆಸ್ ಸರಕಾರವು ಅರಣ್ಯ ಇಲಾಖೆಯನ್ನು ಛೂ ಬಿಟ್ಟು ಅಡ್ಡಿಪಡಿಸಲು ಸಂಚು ರೂಪಿಸಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಎಂಟಿ ವಶದಲ್ಲಿರುವ 430 ಎಕರೆ ಜಮೀನು ಅರಣ್ಯ ಪ್ರದೇಶವಾಗಿದ್ದು, ಅದನ್ನು ಕೂಡಲೇ ಅರಣ್ಯ ಇಲಾಖೆಗೆ ಬಿಟ್ಟುಕೊಡುವಂತೆ ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎನ್.ರವೀಂದ್ರ ಕುಮಾರ್ ನೀಡಿರುವ ನೋಟಿಸ್ ಅನ್ನು ತೀವ್ರವಾಗಿ ಖಂಡಿಸಿದರು.
ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಕ್ರಮ:
“ಈಗಾಗಲೇ ಜಮೀನಿಗೆ ಸಂಬಂಧಿಸಿದ ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮೂಲಕ ಗಡುವು ವಿಧಿಸಿ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಕ್ರಮವಾಗುತ್ತದೆ. ನಿಗದಿತ ಸಮಯದೊಳಗೆ ಭೂಮಿ ತೆರವು ಮಾಡುವಂತೆ ಆದೇಶ ನೀಡುವ ಅಧಿಕಾರ ವ್ಯಾಪ್ತಿ ಈ ಅಧಿಕಾರಿಗಿಲ್ಲ. ಈ ಬಗ್ಗೆ ಹೆಚ್ಎಂಟಿ ನ್ಯಾಯಾಲಯದಲ್ಲಿಯೇ ಪ್ರಶ್ನೆ ಮಾಡಲಿದೆ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಅನೇಕ ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿದ್ದ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವರೊಂದಿಗೆ ಚರ್ಚಿಸಿ, ಮುಂದಿನ ವಾರ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸನಿಹದಲ್ಲಿತ್ತು. ಪ್ಯಾಕೇಜ್ ಘೋಷಣೆ ಹತ್ತಿರದಲ್ಲಿರುವಾಗಲೇ ದುರುದ್ದೇಶದಿಂದ ಈ ನೋಟಿಸ್ ನೀಡಲಾಗಿದೆ ಎಂದು ಕುಮಾರಸ್ವಾಮಿ ದೂರಿದರು.
175 ಎಕರೆ ಗುಳುಂ: ದಾಖಲೆ ಪ್ರದರ್ಶಿಸಿದ ಸಚಿವರು:
“ಸುಮಾರು ₹15,000 ಕೋಟಿ ಬೆಲೆಬಾಳುವ ಈ ಭೂಮಿಯ ಮೇಲೆ ಯಾರದ್ದೋ ವಕ್ರದೃಷ್ಟಿ ಬಿದ್ದಿದೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೊರಟವರ ಸರಕಾರದಲ್ಲಿಯೇ ಹೆಚ್ಎಂಟಿಯ 175 ಎಕರೆ ಭೂಮಿಯನ್ನು ರಣಹದ್ದುಗಳಂತೆ ಕಿತ್ತು ತಿನ್ನಲಾಯಿತು. ಲೂಟಿ ಹೊಡೆದ ಭೂಮಿಯಲ್ಲಿ ಇಂದು ಬಹುಮಹಡಿ ಕಟ್ಟಡಗಳು, ಬೃಹತ್ ಅಪಾರ್ಟ್ಮೆಂಟ್ಗಳು ಎದ್ದು ನಿಂತಿವೆ. ಆಗ ಅರಣ್ಯ ಇಲಾಖೆ ನೋಟಿಸ್ ನೀಡಿತ್ತಾ?” ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು. 2006ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಭೂಮಿಯ ಕ್ರಯಕ್ಕೆ ತಡೆ ನೀಡಿದ್ದನ್ನು ಅವರು ಸ್ಮರಿಸಿದರು.
ಸರಕಾರಿ ಸ್ವಾಮ್ಯದ ಉದ್ಯಮಗಳೆಂದರೆ ರಾಜ್ಯಕ್ಕೆ ಅಲರ್ಜಿ:
ರಾಜ್ಯ ಸರಕಾರ ಆಡಳಿತ ಮಾಡುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದೆ ಎಂದು ಕಿಡಿಕಾರಿದ ಸಚಿವರು, “ರಾಜ್ಯದಲ್ಲಿ ಸರಕಾರಿ ಸ್ವಾಮ್ಯದ ಕೈಗಾರಿಕೆ ಉಳಿಯಬಾರದು ಎನ್ನುವುದು ಇವರ ಉದ್ದೇಶ. ಈಗಾಗಲೇ ಎನ್ಜಿಎಫ್ (NGF), ಮೈಸೂರು ಪೇಪರ್ ಮಿಲ್ಸ್ ಮುಂತಾದ ಕಾರ್ಖಾನೆಗಳನ್ನು ನುಂಗಿ ನೀರು ಕುಡಿದಾಗಿದೆ. ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ (KIOCL) ಗಣಿಗಾರಿಕೆಗೂ ನಾನಾ ತೊಂದರೆ ನೀಡುತ್ತಿದ್ದು, ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಭೀತಿ ಎದುರಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆರೆಯ ರಾಜ್ಯಗಳ ಅಭಿವೃದ್ಧಿ ಮಾದರಿ ಅನುಸರಿಸಿ:
ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಉದಾಹರಣೆ ನೀಡಿದ ಕುಮಾರಸ್ವಾಮಿ, “ವಿಶಾಖಪಟ್ಟಣದ ಉಕ್ಕು ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ತರಲು ಅಲ್ಲಿನ ಮುಖ್ಯಮಂತ್ರಿಗಳು ಎಷ್ಟು ಶ್ರಮಪಟ್ಟರು ಎಂಬುದನ್ನು ನಾನು ಬಲ್ಲೆ. ತೆಲಂಗಾಣ ಮುಖ್ಯಮಂತ್ರಿಗಳು ಹಾಗೂ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರು ಕೇಂದ್ರದಿಂದ ತಮ್ಮ ರಾಜ್ಯಕ್ಕೆ ಬೃಹತ್ ಯೋಜನೆಗಳನ್ನು ತರುವಲ್ಲಿ ತೋರುತ್ತಿರುವ ಆಸಕ್ತಿಯನ್ನು ನಮ್ಮ ರಾಜ್ಯ ಸರಕಾರ ಕಲಿಯಬೇಕಿದೆ,” ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಎಷ್ಟೇ ಅಡ್ಡಿಪಡಿಸಿದರೂ, ಹೆಚ್ಎಂಟಿ ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಖಾನೆಗೆ ಮರುಜೀವ ಕೊಡುವ ಕೆಲಸ ಮಾಡಿಯೇ ಮಾಡುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.




















