ಬೆಂಗಳೂರು, ಡಿ.12 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಜಡಿ ಮಳೆಗೆ ಜನರು ಬೇಸೆತ್ತು ಹೋಗಿದ್ದಾರೆ. ನಗರದಲ್ಲಿ ಸೂರ್ಯನ ಕಿರಣಗಳನ್ನು ಸಂಪೂರ್ಣವಾಗಿ ಕಾಣೋಕೆ ನಗರದ ಜನತೆ ಡಿ.14ರವರೆಗೆ ಕಾಯಬೇಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡಿ.12 ಮತ್ತು 13ರಂದು ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಿದೆ. ಸೋಮವಾರ ಮತ್ತು ಮಂಗಳವಾರವೂ ಮಳೆಯಿರಲಿದ್ದು, ಡಿ.14ರಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಭಾರತೀ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಹವಾಮಾನ ವಿಜ್ಞಾನಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಡಿ.15ರಿಂದ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಪ್ರದೇಶದಲ್ಲಿ ಒಣಹವೆ ಕಂಡುಬರಲಿದೆ. ಆದರೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಚದುರಿದಂತೆ ಮಳೆಯಲಾಗಿದೆ. ಅಂಡಮಾನ್ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಕಂಡು ಬರುವ ಸಾಧ್ಯತೆಯಿದೆ. ಸದ್ಯ ಈ ಭಾಗದಲ್ಲಿ ಸುಳಿಗಾಳಿ ಹೊರಹೊಮ್ಮಿಲ್ಲ. ಡಿ.9ರಂದು ಬಂಗಾಳಕೊಲ್ಲಿಯಲ್ಲಿ ಮಾಂಡಸ್ ಚಂಡಮಾರುತ ಕಂಡುಬಂದಿತ್ತು. ಈ ಚಂಡಮಾರುತ ಪರಿಣಾಮವಾಗಿಯೇ ಬೆಂಗಳೂರು ಹಾಗೂ ರಾಜ್ಯದಾದ್ಯಂತ ವರುಣನ ಆಗಮನವಾಗಿತ್ತು. ದಿನೇ ದಿನೇ ಈ ಚಂಡಮಾರುತದ ಪ್ರಭಾವ ಕಡಿಮೆಯಾಗುತ್ತಿದೆ ಎಂದು ಇಲಾಖೆ ಹವಾಮಾನ ವರದಿಯಲ್ಲಿ ವಿವರಿಸಿದೆ.
ಬೆಂಗಳೂರಿನಲ್ಲಿ ವಾರಾಂತ್ಯವಾದ ಭಾನುವಾರ ಇಡೀ ದಿನ ವ್ಯಾಪಕ ರೀತಿಯಲ್ಲಿ ಒಂದೇ ಸಮನೆ ತುಂತುರು ಮಳೆ ಹನಿ ಹಾಗೂ ಹವಾಮಾನದಲ್ಲಿ ಉಷ್ಣಾಂಶ ಇಳಿಕೆಯಾದ್ದರಿಂದ ತಂಡಿ ಹೆಚ್ಚಾಗಿತ್ತು. ಹಾಗಾಗಿ ರಸ್ತೆಯಲ್ಲಿ ಓಡಾಡುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಬೆಂಗಳೂರು ನಗರದಲ್ಲಿ ಭಾನುವಾರ 2 ಸೆಂಮೀ ಮಳೆಯಾಗಿದ್ದರೆ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 1 ಸೆಂ.ಮೀ ಮಳೆಯಾಗಿತ್ತು.

ಸಿಲಿಕಾನ್ ಸಿಟಿ ಈ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿದೆ :
ಭಾನುವಾರದಿಂದ ಸೋಮವಾರ ಬೆಳಗ್ಗೆ 8.30ರ ತನಕ ಬೆಂಗಳೂರಿನ ಆರ್.ಆರ್.ನಗರ ವಲಯದಲ್ಲಿನ ಕೊಟ್ಟಿಗೆಪಾಳ್ಯದಲ್ಲಿ 75.5 ಮಿ.ಮಿನಷ್ಟು ಮಳೆಯಾಗಿದೆ. ಇದು ಸಿಲಿಕಾನ್ ಸಿಟಿಯಲ್ಲಿ ಭಾನುವಾರ ಸುರಿದ ಅತಿಹೆಚ್ಚು ಮಳೆಯಾಗಿದೆ. ನಾಗಾಪುರ (27 ಮಿ.ಮೀ), ವಿದ್ಯಾಪೀಠ (26 ಮಿ.ಮೀ), ಅಗರ ದಾಸರಹಳ್ಳಿ (25.5 ಮಿ.ಮೀ), ದೊರೆಸಾನಿಪಾಳ್ಯ ( 24 ಮಿ.ಮೀ), ಬಿಳೇಕಳ್ಳಿ (22.5 ಮಿ.ಮೀ), ಸಂಪಂಗಿರಾಮನಗರ (22 ಮಿ.ಮೀ)ನಷ್ಟು ಮಳೆಯಾಗಿದೆ. ಉಳಿದಂತೆ ನಗರದ 28 ಸ್ಥಳಗಳಲ್ಲಿ 10.5 ಮಿಲಿ ಮೀಟರ್ ನಿಂದ 20 ಮೀಟರ್ ವರೆಗೆ ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯು ತಿಳಿಸಿದೆ.
























