ಬೆಂಗಳೂರು, ಜೂ.27 www.bengaluruwire.com: ರಾಜ್ಯದ ಮಾವು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿರುವ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (PDPS – ಬೆಲೆ ವ್ಯತ್ಯಾಸ ಪಾವತಿ ಯೋಜನೆ) ಅಡಿಯಲ್ಲಿ 2026-27ನೇ ಸಾಲಿಗೆ ತೋತಾಪುರಿ ಮಾವು ಖರೀದಿಸಲು ತೀರ್ಮಾನಿಸಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂದಿನಿಂದ (ಜೂನ್ 27) ರೈತರ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಿರುವ ಸರ್ಕಾರ, ಪ್ರತಿ ಕ್ವಿಂಟಾಲ್ ತೋತಾಪುರಿ ಮಾವಿಗೆ ರೂ. 1,750 ಗಳ ಮಾರುಕಟ್ಟೆ ಮಧ್ಯಪ್ರವೇಶ ದರವನ್ನು (MIP) ನಿಗದಿಪಡಿಸಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1,30,000 ಮೆಟ್ರಿಕ್ ಟನ್ ಮಾವು ಖರೀದಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.
ರೈತರಿಗೆ ಮತ್ತು ದರಕ್ಕೆ ಇರುವ ಮಿತಿಗಳೇನು?
ದರದ ಮಿತಿ: ಮಾರುಕಟ್ಟೆ ಮಧ್ಯಪ್ರವೇಶ ದರ (MIP) ಮತ್ತು ಪ್ರಸ್ತುತ ಮಾರುಕಟ್ಟೆ ಧಾರಣೆಯು ಶೇ. 25 ರ ಮಿತಿಗೆ ಒಳಪಟ್ಟಿರತಕ್ಕದ್ದು.

ರೈತರ ಮಿತಿ: ಈ ಯೋಜನೆಯಡಿ ಪ್ರತಿ ಎಕರೆಗೆ 40 ಕ್ವಿಂಟಾಲ್ನಂತೆ ಗರಿಷ್ಟ 5 ಎಕರೆಗೆ (ಗರಿಷ್ಠ 200 ಕ್ವಿಂಟಾಲ್ಗಳಿಗೆ) ಮಾತ್ರ ವ್ಯತ್ಯಾಸದ ಮೊತ್ತವನ್ನು ರೈತರಿಗೆ ನೀಡಲಾಗುತ್ತದೆ.
ಎಲ್ಲೆಲ್ಲಿ ಖರೀದಿ ನಡೆಯಲಿದೆ?:
ತೋಟಗಾರಿಕೆ ಇಲಾಖೆಯ ‘ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ’ ಸಂಸ್ಥೆಯ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಆಯಾ ಜಿಲ್ಲೆಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)
ಮಾರುಕಟ್ಟೆ ಉಪ ಪ್ರಾಂಗಣ / ಉಪ ಮಾರುಕಟ್ಟೆ
ಡಿ.ಪಿ.ಸಿ (DPC)
ಕೃಷಿ ಮಾರಾಟ ಇಲಾಖೆಯಿಂದ ಘೋಷಿಸಲ್ಪಟ್ಟ ಮಾವು ಸಂಸ್ಕರಣಾ ಘಟಕಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ.
ಯೋಜನೆಯ ಪಾರದರ್ಶಕತೆಗಾಗಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಕೃಷಿ ಮಾರಾಟ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ಮೇಲುಸ್ತುವಾರಿ ತಂಡವನ್ನು ರಚಿಸಲಾಗಿದೆ.
ನೋಂದಣಿ ಹೇಗೆ? ಯೋಜನೆಯ ಅವಧಿ ಎಷ್ಟು?:
ಯೋಜನೆಯಡಿ ಪ್ರಯೋಜನ ಪಡೆಯಲು ಇಚ್ಛಿಸುವ ರೈತರು ಮಾವನ್ನು ಮಾರಾಟ ಮಾಡುವ ಮುನ್ನ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು NeML ಸಂಸ್ಥೆಯ ಸಹಯೋಗದೊಂದಿಗೆ, ‘MIS-PDPS’ ತಂತ್ರಾಂಶದ ಮೂಲಕ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಿದೆ. ಆಯ್ದ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಜೂನ್ 27 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಿದೆ.
ರೈತರೇ ಗಮನಿಸಿ: ತಂತ್ರಾಂಶದಲ್ಲಿ ಮಾವು ಉತ್ಪನ್ನದ ಮೊದಲ ವಹಿವಾಟು (Transaction) ಆದ ದಿನಾಂಕದಿಂದ ಕೇವಲ ಒಂದು ತಿಂಗಳ ಅವಧಿಯವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಹೀಗಾಗಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅರ್ಹ ತೋತಾಪುರಿ ಮಾವು ಬೆಳೆಗಾರರು ನಿಗದಿತ ಕೇಂದ್ರಗಳಲ್ಲಿ ಶೀಘ್ರವೇ ನೋಂದಣಿ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆಯುವಂತೆ ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಗೂರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.




















