ಬೆಂಗಳೂರು, ಜೂ. 27 www.bengaluruwire.com: ಕೈಗಾರಿಕಾ ಪ್ರದೇಶ, ಶಾಲೆಗಳು, ಕೆರೆ ಹಾಗೂ ರಸ್ತೆ ನಿರ್ಮಾಣದಂತಹ ಜನಪರ ಯೋಜನೆಗಳಿಗೆ ಯಾವುದೇ ತಕರಾರು ಮಾಡದೇ ಭೂಮಿ ನೀಡುವ ಮಾಲೀಕರ ತ್ಯಾಗವನ್ನು ಸ್ಮರಿಸಲು ರಾಜ್ಯ ಸರ್ಕಾರ ‘ವಾಲ್ ಆಫ್ ಗ್ರಾಟಿಟ್ಯೂಡ್’ (ಕೃತಜ್ಞತಾ ಫಲಕ) ನಿರ್ಮಿಸಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಶನಿವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೂತನವಾಗಿ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಆಯೋಜಿಸಿದ್ದ 517ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಇಂದು ಬೆಳಗ್ಗೆ “ಬೆಂಗಳೂರು ನಿರ್ಮಿಸಿದ, ಪೇಟೆಗಳನ್ನು ಕಟ್ಟಿದ, ಕೆರೆಗಳನ್ನು ನಿರ್ಮಿಸಿ ಹೊಸ ಚರಿತ್ರೆ ಸೃಷ್ಟಿಸಿದ, ದೂರದೃಷ್ಟಿಯ ಮಣ್ಣಿನ ಮಗ ಕಲಿವೀರ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕಂಚಿನ ಪ್ರತಿಮೆಗೆ ಮೊದಲಿಗೆ ಪುಷ್ಪಾರ್ಚನೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಯಂತಿಗೆ ಚಾಲನೆ ನೀಡಿದರು.
ಬೃಹತ್ ಪ್ರತಿಮೆಯ ಪಾದವನ್ನು ಮುಟ್ಟಿ ನಮಸ್ಕಿರಿಸಿದ ಮುಖ್ಯಮಂತ್ರಿಯವರು ಪ್ರತಿಮೆಯ ಪಾದಗಳಿಗೆ ಭಕ್ತಿಯಿಂದ ಪುಷ್ಪಾರ್ಚನೆ ಮಾಡಿ ನಮಿಸಿದರು. ನಂತರ ಪ್ರತಿಮೆಯ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಥೀಮ್ ಪಾರ್ಕ್ ಅನ್ನು ವೀಕ್ಷಿಸಿದರು.
ಇದಾದ ಬಳಿಕ ಬೆಂಗಳೂರು ಉತ್ತರ ಯಲಹಂಕ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆನಂತರ ವೇದಿಕೆ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘಕ್ಕೆ ರಿಯಾಯಿತಿ ದರದಲ್ಲಿ ಕೆಎಚ್ ಬಿ ನಿವೇಶನ ನೀಡುವುದಾಗಿ ಘೋಷಣೆ ಮಾಡಿದರು. ನಂತರ ವಿಧಾನಸೌಧದ ಮುಂದಿರುವ ಕುದುರೆಯ ಮೇಲೆ ವಿರಾಜಮಾನರಾಗಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಗಮನ ಸೆಳೆದ ವಾಲ್ ಆಫ್ ಗ್ರಾಟಿಟ್ಯೂಡ್:
ಎಸ್.ಎಂ. ಕೃಷ್ಣ ರಸ್ತೆ (ಬೆಂಗಳೂರು-ಮೈಸೂರು ದಶಪಥ ರಸ್ತೆ) ಅಭಿವೃದ್ಧಿಗಾಗಿ ಯಾವುದೇ ವಿವಾದವಿಲ್ಲದೆ ಸ್ವಯಂಪ್ರೇರಿತವಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ರೈತರು ಮತ್ತು ಸ್ಥಳೀಯರನ್ನು ಗೌರವಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ‘ವಾಲ್ ಆಫ್ ಗ್ರಾಟಿಟ್ಯೂಡ್’ (ಕೃತಜ್ಞತಾ ಫಲಕ) ನಿರ್ಮಿಸಿದೆ. ಮೈಸೂರು ರಸ್ತೆಯಲ್ಲಿರುವ ಈ ವಿಶೇಷ ಗೋಡೆಯು ರೈತರ ತ್ಯಾಗವನ್ನು ಸ್ಮರಿಸುತ್ತದೆ. ರಸ್ತೆ ಉದ್ಘಾಟನೆ ನಂತರ ಈ ಫಲಕವನ್ನು ಸಿಎಂ ಗಣ್ಯರ ಜೊತೆಗೂಡಿ ಲೋಕಾರ್ಪಣೆ ಮಾಡಿದರು. ಇದು ಎಲ್ಲರ ಗಮನ ಸೆಳೆಯಿತು.
ತದನಂತರ ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿ ಎಸ್.ಎಂ.ಕೃಷ್ಣ ದಶಪಥ ರಸ್ತೆಯ ಬಳಿ ಬೆಂಗಳೂರಿನ ನಾಲ್ಕು ದಿಕ್ಕುಗಳಿಂದಲೂ ಸಚಿವರುಗಳ ನೇತೃತ್ವದಲ್ಲಿ ತಂದಂತಹ ಪುರಜ್ಯೋತಿಗಳನ್ನು ಡಿ.ಕೆ.ಶಿವಕುಮಾರ್ ಅವರು ಸ್ವೀಕರಿಸಿದರು. ನಂತರ ಕೆಂಪೇಗೌಡರ ಕೋಟೆಯ ಪ್ರತಿಕೃತಿ ಎದುರು ಎಲ್ಲಾ ಪುರಜ್ಯೋತಿಗಳನ್ನು ಇಡಲಾಯಿತು.

ಎಸ್.ಎಂ. ಕೃಷ್ಣ ರಸ್ತೆ ಹಾಗೂ ವಾಲ್ ಆಫ್ ಗ್ರಾಟಿಟ್ಯೂಡ್:
ಇದಾದ ಬಳಿಕ ನೂತನ ರಸ್ತೆ ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ 10 ಪಥಗಳ ರಸ್ತೆಗೆ ಚಾಲನೆ ನೀಡಲಾಗಿದೆ. ಪ್ರಸ್ತುತ 11 ಕಿ.ಮೀ. ಇರುವ ಈ ರಸ್ತೆಯು ಮುಂಬರುವ ದಿನಗಳಲ್ಲಿ 123 ಕಿ.ಮೀ. ಉದ್ದದ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಆಗಿ ವಿಸ್ತರಣೆಯಾಗಲಿದೆ. ಈ ಕಾರಿಡಾರ್ ಉದ್ದಕ್ಕೂ ಭೂಮಿ ನೀಡಿದವರ ಹೆಸರನ್ನು ವಾಲ್ ಆಫ್ ಗ್ರಾಟಿಟ್ಯೂಡ್ನಲ್ಲಿ ಅಜರಾಮರವಾಗಿ ಉಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಅಭಿವೃದ್ಧಿಗಾಗಿ ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ಶೇ.35ರಷ್ಟು ವಾಣಿಜ್ಯ ಭೂಮಿ, ಶೇ.40ರಷ್ಟು ವಸತಿ ಪ್ರದೇಶ ಹಾಗೂ ಟಿಡಿಆರ್ (TDR) ನೀಡಲು ಸರ್ಕಾರ ಸಿದ್ಧವಿದ್ದು, ತಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಸಿರು ಬೆಂಗಳೂರು ಹಾಗೂ ಜಿಬಿಎ ಉಪಕ್ರಮ:
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯನ್ನು ಉಳಿಸುವ ನಿಟ್ಟಿನಲ್ಲಿ ಬಿಡಿಎ ವತಿಯಿಂದ ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ, ಬೆಂಗಳೂರಿನ ಪ್ರತಿ ಶಾಲೆಯು ನಿರ್ದಿಷ್ಟ ಪ್ರದೇಶದ ಉಸ್ತುವಾರಿ ವಹಿಸಿಕೊಂಡು ಮಕ್ಕಳಿಂದ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಈ ಪರಿಸರ ಸಂರಕ್ಷಣಾ ಕಾರ್ಯಕ್ಕೆ ಉತ್ತೇಜನ ನೀಡಲು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವತಿಯಿಂದ ವಿಶೇಷ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಮೂರು ‘ಕೆ’ಗಳ ಸ್ಮರಣೆ ಹಾಗೂ ಹೆಬ್ಬಾಳ ಟನಲ್ ರಸ್ತೆ:
ಬೆಂಗಳೂರಿನ ಇತಿಹಾಸದಲ್ಲಿ ಮೂರು ‘K’ ಗಳನ್ನು ಸದಾ ನೆನಪಿನಲ್ಲಿಡಬೇಕು ಎಂದು ಸಿಎಂ ಪ್ರತಿಪಾದಿಸಿದರು. ಬೆಂಗಳೂರು ಕಟ್ಟಿದ ಕೆಂಪೇಗೌಡರು, ಭವ್ಯವಾದ ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಹಾಗೂ ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಎಸ್.ಎಂ. ಕೃಷ್ಣ ಅವರ ಕೊಡುಗೆ ಅಪಾರ. ಆದರ್ಶವಿಲ್ಲದ ಬದುಕು ಹಾಗೂ ಸಾಧನೆಯಿಲ್ಲದ ಸಾವು ಎರಡೂ ಅಪಮಾನವಿದ್ದಂತೆ ಎಂದು ಅವರು ನುಡಿದರು.

ಬೆಂಗಳೂರು ವಿಶ್ವದ ಪ್ರಮುಖ ನಗರವಾಗಿದ್ದು, ಇಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಹೆಬ್ಬಾಳದ ಬಳಿ ಶೀಘ್ರದಲ್ಲೇ ಟನಲ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಜೊತೆಗೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು 9.5 ಎಕರೆ ಜಾಗ ಮೀಸಲಿಡಲಾಗಿದ್ದು, ಹುತ್ರಿದುರ್ಗದ ಸಮಗ್ರ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬಸವನ ಪಾದ ಸಸಿ ನೆಟ್ಟ ಸಿಎಂ ಡಿ.ಕೆ.ಶಿವಕುಮಾರ್:
ಶನಿವಾರ ಬೆಳಿಗ್ಗೆಯಿಂದಲೇ 50-60 ಸಾವಿರ ಸ್ವಯಂ ಸೇವಕರು ಉತ್ಸಾಹದಿಂದ ಕೆಂಪೇಗೌಡ ಬಡಾವಣೆ, ಶಿವರಾಂ ಕಾರಂತ ಬಡಾವಣೆ ಸೇರಿದಂತೆ ಇತರೆಡೆ ಸುಮಾರು 15 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಕೇವಲ 12 ಗಂಟೆಗಳ ಅವಧಿಯಲ್ಲಿ ಇಷ್ಟೊಂದು ಸಸಿಗಳನ್ನು ನೆಟ್ಟು ದಾಖಲೆ ನಿರ್ಮಿಸಲಾಯಿತು.
ದಶಪಥ ರಸ್ತೆ ಉದ್ಘಾಟನೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ವತಃ ಸಲಿಕೆ ಹಿಡಿದು ಸ್ಥಳೀಯ ಸಸಿಯಾದ “ಬಸವನ ಪಾದ” ಗಿಡ ನೆಟ್ಟು ನೀರೆರೆದರು.

ಉದ್ಯಾನ ನಗರಿ, ಏರ್ ಕಂಡೀಷನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರು ತನ್ನ ಉದ್ಯಾನಗಳಿಂದಲೇ ಹೆಸರಾಗಿದೆ. ಈ ಗರಿಮೆಯನ್ನು ಉಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಬಿಡಿಎ ವತಿಯಿಂದ ಆಯೋಜಿಸಲಾಗಿತ್ತು. ಮಿಯಾವಾಕಿ ಅರಣ್ಯ ಮಾದರಿಯಲ್ಲಿ ಸುಮಾರು 250 ಎಕರೆ ಪ್ರದೇಶದಲ್ಲಿ ಸ್ಥಳೀಯ ಜಾತಿಯ ವಿವಿಧ ಸಸಿಗಳನ್ನು ನೆಡಲಾಯಿತು.
ಇದಕ್ಕೂ ಮೊದಲು ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿ ಎಸ್.ಎಂ.ಕೃಷ್ಣ ದಶಪಥ ರಸ್ತೆಯಲ್ಲಿ 10 ಕೆ ರನ್, 5 ಕೆ ವಾಕಥಾನ್ ಏರ್ಪಡಿಸಲಾಗಿತ್ತು. ಸಾವಿರಾರು ಜನರು ನೂತನ ರಸ್ತೆಯಲ್ಲಿ ಓಡಿ ಸಂತಸಪಟ್ಟರು. ಈ ರಸ್ತೆ ಅಂತರರಾಷ್ಟ್ರೀಯ ಗುಣಮಟ್ಟದಿಂದ ಕೂಡಿದೆ ಎಂದು ಅಭಿಪ್ರಾಯ ಹಂಚಿಕೊಂಡರು. ಆನಂತರ ಪ್ರೇಮಾ ಕೃಷ್ಣ ಅವರು ಹಾಗೂ ಸಂಪುಟ ಸಹೋದ್ಯೋಗಿಗಳು, ಪರಿಷತ್ ಸದಸ್ಯರ ಜೊತೆಗೂಡಿ ನೂತನ ರಸ್ತೆಯನ್ನು ಉದ್ಘಾಟಿಸಿದರು.
ಜಿಕೆವಿಕೆ, ಎಂಜಿನಿಯರ್ ವಿಶ್ವನಾಥ್, ಕ್ರಿಕೆಟಿಗ ದ್ರಾವಿಡ್ ಅವರಿಗೆ ಅಂತರರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ:

ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ದೇಶದ ಪ್ರಮುಖ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ಸಂಸ್ಥೆಯಾಗಿ, ಆಧುನಿಕ ಕೃಷಿ ಹಾಗೂ ನವೀನ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸುವ ಮೂಲಕ ಹೆಸರು ಮಾಡಿರುವ ಜಿಕೆವಿಕೆ, ನಗರ ಯೋಜನಾ ತಜ್ಞರಾಗಿ ಪ್ರಸಿದ್ಧಿ ಹೊಂದಿರುವ ಎಂಜಿನಿಯರ್ ಎಸ್. ವಿಶ್ವನಾಥ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಹುಲ್ ದ್ರಾವಿಡ್ ಅವರೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರು ವಿದೇಶದಲ್ಲಿ ಇದ್ದ ಕಾರಣಕ್ಕೆ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಜಿಕೆವಿಕೆ ಸಂಸ್ಥೆಯ ಪರವಾಗಿ ಉಪಕುಲಪತಿಗಳಾದ ಎಸ್.ವಿ.ಸುರೇಶ್ ಅವರು ಪಡೆದುಕೊಂಡರು.





















