ಬೆಂಗಳೂರು, ಜೂ.25 www.bengaluruwire.com: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ ಸಿಐ) ತನ್ನ ಚೊಚ್ಚಲ ‘ಪಿಆರ್ ಸಿಐ ನೆಕ್ಸ್ಟ್ ಜೆನ್ ಗವರ್ನೆನ್ಸ್ ಅವಾರ್ಡ್ಸ್’ ಪ್ರಕಟಿಸಿದೆ.
ನಾಗರಿಕ ಸ್ನೇಹಿ ನಗರಾಡಳಿತದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಈ ಪ್ರತಿಷ್ಠಿತ ಪ್ರಶಸ್ತಿಯು ಒಲಿದಿದೆ. ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಪ್ರಾಧಿಕಾರವು ಈ ಸಾಧನೆ ಮಾಡಿದ್ದು, ‘ನಾಗರಿಕ ಕೇಂದ್ರಿತ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ’ಗೆ ಭಾಜನವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆ.1 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯಲಿದೆ. ಇದೇ ವೇಳೆ ಹಿರಿಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕೈಗಾರಿಕಾ ನಾಯಕರನ್ನು ಒಳಗೊಂಡ ‘ಪಿಆರ್ ಸಿಐ ಟ್ರಾನ್ಸ್ಫಾರ್ಮೇಟಿವ್ ಗವರ್ನೆನ್ಸ್ ಸಿಂಪೋಸಿಯಂ’ ಕೂಡ ಆಯೋಜನೆಗೊಂಡಿದೆ.
ಬಿಡಿಎಗೆ ಪ್ರಶಸ್ತಿ ಏಕೆ ದೊರೆತಿದೆ?:

ಬಿಡಿಎ ಆಡಳಿತದಲ್ಲಿ ತಂದಿರುವ ವಿನೂತನ ‘ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’ (PGRS) ಈ ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ. August 2025 ರಲ್ಲಿ ಆರಂಭವಾದ ಈ ವ್ಯವಸ್ಥೆಯು ಪಾರದರ್ಶಕತೆ, ತಂತ್ರಜ್ಞಾನ, ಉತ್ತಮ ಆಡಳಿತ ಮತ್ತು ನಾಗರಿಕ ದೃಷ್ಟಿಕೋನದ ಮೇಲೆ ಸಂಪೂರ್ಣವಾಗಿ ರೂಪುಗೊಂಡಿದೆ. ಇದು ದೂರವಾಣಿ, ವಾಟ್ಸಾಪ್, ಎಕ್ಸ್ (ಟ್ವಿಟರ್), ಜನಾಸ್ಪಂದನ ಸೇರಿದಂತೆ ಬಹು ವೇದಿಕೆಗಳ ಮೂಲಕ ದಿನದ 24 ಗಂಟೆಯೂ ದೂರುಗಳನ್ನು ಸ್ವೀಕರಿಸುತ್ತದೆ. ಸ್ವೀಕರಿಸಿದ ಪ್ರತಿಯೊಂದು ದೂರಿಗೂ ಒಂದು ಪ್ರತ್ಯೇಕ ಐಡಿ ನೀಡಲಾಗುತ್ತದೆ ಹಾಗೂ ನಿಗದಿತ ಸಮಯದೊಳಗೆ ಅಂದರೆ 30 ಅಥವಾ 60 ದಿನಗಳಲ್ಲಿ ದೂರುಗಳನ್ನು ಪರಿಹರಿಸುವುದು ಕಡ್ಡಾಯವಾಗಿದೆ. ಅಂಚೆ ಇಲಾಖೆ ಸಹಯೋಗದೊಂದಿಗೆ ‘ಯೂನಿಫೈಡ್ ಟಪಾಲ್ ಸಿಸ್ಟಮ್’ ಮೂಲಕ ದೂರು ದಾಖಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲಾಗಿದೆ.
ಯೂಟ್ಯೂಬ್ ನಲ್ಲಿ ಬಿಡಿಎ ನಿರ್ಧಾರದ ನೇರ ಪ್ರಸಾರ:
ಸಾರ್ವಜನಿಕರ ಬಗೆಹರಿಯದ ಅಥವಾ ಸಂಕೀರ್ಣ ಸಮಸ್ಯೆಗಳನ್ನು ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರ ನೇತೃತ್ವದ ‘ಓಪನ್ ಹೌಸ್ ಮೀಟಿಂಗ್’ (OHM) ನಲ್ಲಿ ಆಲಿಸಲಾಗುತ್ತದೆ. ಈ ವಿಚಾರಣೆಗಳನ್ನು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡುವುದರಿಂದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಬಹುದಾಗಿದೆ. ಇದು ಭಾರತದ ನಗರಾಡಳಿತ ಪ್ರಾಧಿಕಾರಗಳ ಇತಿಹಾಸದಲ್ಲಿಯೇ ಮೊಟ್ಟಮೊದಲ ಪ್ರಯೋಗವಾಗಿದೆ. ಈವರೆಗೂ 4,797 ದೂರುಗಳನ್ನು ದಾಖಲಿಸಿಕೊಂಡು, 54 ಓಪನ್ ಹೌಸ್ ಮೀಟಿಂಗ್ ಗಳನ್ನು ನಡೆಸುವ ಮೂಲಕ 1,544 ದೂರುಗಳನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ.
ಇತರ ಪ್ರಶಸ್ತಿ ಪುರಸ್ಕೃತರ ವಿವರ:
ಬಿಡಿಎ ಜೊತೆಗೆ ಇತರ ನಾಲ್ಕು ಮಂದಿ ಗಣ್ಯ ಅಧಿಕಾರಿಗಳಿಗೂ ಮುಂದಿನ ಪೀಳಿಗೆಯ ಆಡಳಿತ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಜಲ ಸಂಪನ್ಮೂಲ ವಿಭಾಗದಲ್ಲಿ ಅಸ್ಸಾಂನ ವಿಶೇಷ ಮುಖ್ಯ ಕಾರ್ಯದರ್ಶಿ ಸೈಯದೈನ್ ಅಬ್ಬಾಸಿ, ತಂತ್ರಜ್ಞಾನ ಆಧಾರಿತ ಆಡಳಿತಕ್ಕಾಗಿ ಬಿಹಾರದ ರಾಜ್ಯಪಾಲರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್, ಶಿಕ್ಷಣ ಕ್ಷೇತ್ರಕ್ಕಾಗಿ ಎನ್ಐಒಎಸ್ ನಿರ್ದೇಶಕ ರಾಜೀವ್ ಕುಮಾರ್ ಸಿಂಗ್ ಮತ್ತು ನೈತಿಕ ಆಡಳಿತಕ್ಕಾಗಿ ಛತ್ತೀಸ್ಗಢದ ಡಿಜಿಪಿ ಅರುಣ್ ದೇವ್ ಗೌತಮ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭವಿಷ್ಯದ ಭಾರತದ ನಿರ್ಮಾಣದಲ್ಲಿ ಪಾರದರ್ಶಕ ಹಾಗೂ ಉತ್ತಮ ಆಡಳಿತ ನೀಡುತ್ತಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.




















