ಬೆಂಗಳೂರು, ಜೂ.21 www.bengaluruwire.com: ಕುಡಿಯುವ ನೀರಿನ ಮೂಲಗಳನ್ನು ಹಾಗೂ ಪರಿಸರವನ್ನು ಹಾಳು ಮಾಡುವವರ ವಿರುದ್ಧ ಸರ್ಕಾರ ಕಠಿಣ ಹೆಜ್ಜೆ ಇರಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಂಟಗಾನಹಳ್ಳಿ ಕೆರೆಗೆ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕ್ಲಿನಿಕ್ ವೈದ್ಯರೊಬ್ಬರ ವಿರುದ್ಧ ಇದೀಗ ಎಫ್.ಐ.ಆರ್. ದಾಖಲಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರ ಖಡಕ್ ಸೂಚನೆ ಮೇರೆಗೆ ಅಧಿಕಾರಿಗಳು ಈ ತ್ವರಿತ ಕ್ರಮ ಕೈಗೊಂಡಿದ್ದಾರೆ.
ಸಚಿವ ಈಶ್ವರ ಖಂಡ್ರೆ ಹಠಾತ್ ಭೇಟಿ ಮತ್ತು ಜನರ ದೂರು:
ಇತ್ತೀಚೆಗೆ ಯಂಟಗಾನಹಳ್ಳಿ ಗ್ರಾಮ ಪಂಚಾಯ್ತಿಗೆ ಸಚಿವ ಈಶ್ವರ ಖಂಡ್ರೆ ಅವರು ಹಠಾತ್ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಸ್ಥಳೀಯ ಸಾರ್ವಜನಿಕರು ಕೆರೆಗೆ ವೈದ್ಯಕೀಯ ತ್ಯಾಜ್ಯವನ್ನು ಸುರಿಯುತ್ತಿರುವ ಗಂಭೀರ ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದರು. ವಿಷಯದ ಗಾಂಭೀರ್ಯತೆಯನ್ನು ಅರಿತ ಸಚಿವರು, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಜಲಮೂಲವನ್ನು ಕಲುಷಿತಗೊಳಿಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ (ಇಓ) ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಅಪಾಯಕಾರಿ ತ್ಯಾಜ್ಯ ಪತ್ತೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು:
ಸಚಿವರ ಸೂಚನೆಯಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿಂದು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆರೆಗೆ ನೀರು ಹರಿಯುವ ಕಾಲುವೆಯಲ್ಲಿ ಸಿಮೆಂಟ್ ಬ್ಯಾಗ್ಗಳಲ್ಲಿ ತುಂಬಿದ್ದ ಬಳಸಿದ ಸಿರೆಂಜ್ಗಳು, ರಕ್ತಸಿಕ್ತವಾಗಿದ್ದ ಹತ್ತಿ ಹಾಗೂ ಬ್ಯಾಂಡೇಜ್ಗಳನ್ನು ಎಸೆದಿರುವುದು ಪತ್ತೆಯಾಗಿತ್ತು.
ಇದರ ಸಚಿತ್ರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ ತರುವಾಯ, ತಾಲೂಕು ವೈದ್ಯಾಧಿಕಾರಿ ಡಾ. ಪದ್ಮಿನಿ ಅವರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ತಪ್ಪೊಪ್ಪಿಕೊಂಡ ವೈದ್ಯ: ಎಫ್.ಐ.ಆರ್. ದಾಖಲು:
ಜನ ಹಾಗೂ ಜಾನುವಾರುಗಳು ಪ್ರತಿನಿತ್ಯ ಈ ಕೆರೆಯ ನೀರನ್ನು ಬಳಸುವುದರಿಂದ, ಇಂತಹ ತ್ಯಾಜ್ಯದಿಂದ ಭಯಾನಕ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಅಪಾಯವನ್ನು ಮನಗಂಡು, ತ್ಯಾಜ್ಯ ಸುರಿದಿದ್ದ ಖಾಸಗಿ ಕ್ಲಿನಿಕ್ ವೈದ್ಯ ಡಾ. ಅರುಣ್ ಗಿರೀಶ್ ಸಾಗರ್ ವಿರುದ್ಧ ಇದೀಗ ಪ್ರಕರಣ ದಾಖಲಿಸಲಾಗಿದೆ. ಅಚ್ಚರಿಯ ವಿಚಾರವೆಂದರೆ, ಇದು ತಮ್ಮದೇ ಆಸ್ಪತ್ರೆಯ ತ್ಯಾಜ್ಯ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ ಎಂಬ ಅಂಶವನ್ನು ಎಫ್.ಐ.ಆರ್.ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಜಲಮೂಲ ಕಲುಷಿತ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆ:
ಕುಡಿಯುವ ನೀರಿನ ಪ್ರಮುಖ ಮೂಲಗಳಾದ ಕೆರೆ, ಕುಂಟೆ, ಬಾವಿ ಮತ್ತು ನದಿಗಳಿಗೆ ಅಪಾಯಕಾರಿ ತ್ಯಾಜ್ಯವನ್ನು, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ತ್ಯಾಜ್ಯವನ್ನು ಎಸೆದು ಹೋಗುವ ಕಿಡಿಗೇಡಿಗಳಿಗೆ ಈ ಪ್ರಕರಣವೊಂದು ಎಚ್ಚರಿಕೆಯ ಗಂಟೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯವೆಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವ ಸ್ಪಷ್ಟ ಸಂದೇಶವನ್ನು ಆಡಳಿತ ಯಂತ್ರ ರವಾನಿಸಿದೆ. (ಸಾಂದರ್ಭಿಕ ಚಿತ್ರ: Gemini AI)



















