ಬೆಂಗಳೂರು, ಅ.10 www.bengaluruwire.com : ದೇಶದ ಪ್ರತಿಷ್ಠಿತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (Kidwai Memorial Institute of Oncology) ಯಲ್ಲಿ ಹೆಚ್ಚುತ್ತಿರುವ ರೋಗಿಗಳ ಒತ್ತಡ ನಿವಾರಣೆ ಮತ್ತು ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ, ಶೀಘ್ರದಲ್ಲೇ 450 ಹಾಸಿಗೆಗಳ ಹೊಸ ಬ್ಲಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರು ಪ್ರಕಟಿಸಿದ್ದಾರೆ.
ವಿಕಾಸ ಸೌಧದಲ್ಲಿ ಮಂಗಳವಾರ ನಡೆದ ಕಿದ್ವಾಯಿ ಆಸ್ಪತ್ರೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಪಾಟೀಲ್ ಅವರು, ಹೊಸ ಯೋಜನೆಯ ನೀಲನಕ್ಷೆಯನ್ನು ಕೂಡಲೇ ಸಿದ್ಧಪಡಿಸಿ ಸಲ್ಲಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಡವರಿಗೆ ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ :
ಪ್ರಸ್ತುತ ಕಿದ್ವಾಯಿಯಲ್ಲಿ 720 ಹಾಸಿಗೆಗಳು ಲಭ್ಯವಿದ್ದರೂ, ರೋಗಿಗಳ ಒಳಹರಿವು ಹೆಚ್ಚಿರುವುದರಿಂದ ಚಿಕಿತ್ಸೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ 450 ಹಾಸಿಗೆಯ ಬ್ಲಾಕ್ ನಿರ್ಮಾಣವಾದರೆ, ಒಟ್ಟು ಹಾಸಿಗೆಗಳ ಸಂಖ್ಯೆ 1170ಕ್ಕೆ ಏರಿಕೆಯಾಗಲಿದೆ. ಇದರಿಂದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಸಾರ್ವಜನಿಕ ಆರೋಗ್ಯ ಚಿಕಿತ್ಸೆ ಲಭ್ಯವಾಗಲಿದ್ದು, ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಸಚಿವರು ವಿವರಿಸಿದರು.


“ಆರ್ಥಿಕವಾಗಿ ಹಿಂದುಳಿದ ರೋಗಿಗಳು ಕಿದ್ವಾಯಿಗೆ ದೂರದೂರುಗಳಿಂದ ಆಗಮಿಸುತ್ತಾರೆ. ಕೆಲವರು ಚಿಕಿತ್ಸೆಗಾಗಿ ತಮ್ಮ ಭೂಮಿ ಅಥವಾ ಮನೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಿಸುತ್ತಾರೆ. ಎಲ್ಲರಿಗೂ ಉತ್ತಮ ಆರೋಗ್ಯ ಒದಗಿಸಬೇಕೆಂಬ ನಮ್ಮ ಸರ್ಕಾರದ ಆಶಯದಂತೆ ಹೆಚ್ಚುವರಿ ಸೌಲಭ್ಯ ಒದಗಿಸಲಾಗುತ್ತಿದೆ” ಎಂದು ಡಾ. ಪಾಟೀಲ್ ಹೇಳಿದರು.
ಸಚಿವರು ಇನ್ನೊಂದು ಮಹತ್ವದ ಸೂಚನೆ ನೀಡಿದ್ದು, ರೋಗನಿರ್ಣಯಕ್ಕಾಗಿ ಬರುವವರು ಅಂತಿಮ ವರದಿಗಳು ದೊರೆಯುವವರೆಗೆ ಆಸ್ಪತ್ರೆಯ ವಾರ್ಡ್ಗಳಲ್ಲಿಯೇ ಒಳರೋಗಿಗಳಾಗಿ ಇರುವಂತೆ ವ್ಯವಸ್ಥೆ ಕಲ್ಪಿಸಬೇಕು. ವಿಶೇಷವಾಗಿ ಉತ್ತರ ಕರ್ನಾಟಕದಂತಹ ದೂರದ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಇದು ಅತ್ಯಗತ್ಯ ಎಂದು ತಿಳಿಸಿದರು.
ಜಿಲ್ಲೆಗಳಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರ ವಿಸ್ತರಣೆ :
ರಾಜ್ಯದಾದ್ಯಂತ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಂಬರುವ ತಿಂಗಳುಗಳಲ್ಲಿ ತುಮಕೂರು, ಮೈಸೂರು, ಮಂಡ್ಯ ಮತ್ತು ಕಾರವಾರದಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು (Peripheral Cancer Centers – PCCs) ಆರಂಭಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಈಗಾಗಲೇ 80 ಹಾಸಿಗೆಗಳನ್ನು ಹೊಂದಿರುವ ಕಲಬುರಗಿಯ ಪಿಸಿಸಿಯಲ್ಲಿ ಹೆಚ್ಚುವರಿಯಾಗಿ 210 ಹಾಸಿಗೆಗಳನ್ನು ಅಳವಡಿಸಲು ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ, ಬಳ್ಳಾರಿ, ಶಿವಮೊಗ್ಗ, ರಾಯಚೂರು, ಬೀದರ್ ಮತ್ತು ಬೆಳಗಾವಿಯಲ್ಲಿಯೂ ಹೆಚ್ಚುವರಿ ಕ್ಯಾನ್ಸರ್ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಡಾ. ಪಾಟೀಲ್ ಮಾಹಿತಿ ನೀಡಿದರು.
ದಾದಿಯರ ವೇತನ ಬಿಡುಗಡೆಗೆ ಸೂಚನೆ :
ಇದೇ ಸಂದರ್ಭದಲ್ಲಿ, 2021ರಿಂದಲೂ ಗುತ್ತಿಗೆ ಮತ್ತು ಹೊರ ಗುತ್ತಿಗೆ ದಾದಿಯರಿಗೆ ಪೂರ್ಣ ವೇತನವನ್ನು ನಿರಾಕರಿಸಲಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಚಿವರು ತಕ್ಷಣವೇ ಪ್ರತಿಕ್ರಿಯಿಸಿದರು. ಹೆರಿಗೆ ರಜೆಯಲ್ಲಿದ್ದ ದಾದಿಯರನ್ನೂ ಒಳಗೊಂಡಂತೆ ಬಾಕಿ ಇರುವ ಪೂರ್ಣ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ಅವರಿಗೆ ಡಾ. ಪಾಟೀಲ್ ಸೂಚನೆ ನೀಡಿದರು.





















