ಬೆಂಗಳೂರು, ಅ.10 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮೊತ್ತ ಮೊದಲ ಸಭೆಯಲ್ಲಿ ಸದಸ್ಯರಿಲ್ಲದೇ ಆಸನಗಳು ಖಾಲಿ ಹೊಡೆಯುತ್ತಿದ್ದವು. ಜಿಬಿಎ ಸಭೆಗೆ ಜನಪ್ರತಿನಿಧಿಗಳು ಅಸಡ್ಡೆ ತೋರಿರುವುದು ಮುಖಕ್ಕೆ ರಾಚುವಂತಿತ್ತು.
ಜಿಬಿಎನ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಇಂದು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಜಿಬಿಎ ಸಭೆ ಆರಂಭವಾಗಿದ್ದು 4.45ಕ್ಕೆ. ಈ ಸಭೆ ಆರಂಭವಾದಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ ಸಭೆಗೆ ಸ್ವಾಗತಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್, ಶಾಸಕರುಗಳಾದ ಎನ್.ಎ.ಹ್ಯಾರೀಸ್, ರಿಜ್ವಾನ್ ಅರ್ಷದ್, ಎಂ.ಕೃಷ್ಣಪ್ಪ, ಎಸ್.ಟಿ.ಸೋಮಶೇಖರ್, ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಸಭೆಗೆ ಹಾಜರಾಗಿದ್ದರು. ಬಿಜೆಪಿ ಯಾವೊಬ್ಬ ಶಾಸಕರು ಸಭೆ ಆರಂಭವಾದಾಗ ಸಭೆಯಲ್ಲಿ ಹಾಜರಿರಲಿಲ್ಲ. ಸಂಸದರು, ರಾಜ್ಯಸಭಾ ಸದಸ್ಯರು ಸಭೆಗೆ ಗೈರಾಗಿದ್ದರು.
75 ಜಿಬಿಎ ಸದಸ್ಯರ ಪೈಕೆ ಸಭೆಗೆ ಹಾಜರಾಗಿದ್ದು ಕೇವಲ 35 ಜನ ಮಾತ್ರ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಜಿಬಿಎ ಜನಪ್ರತಿನಿಧಿಗಳೇತರ ಅಧಿಕಾರಿಗಳು ಬಿಟ್ಟರೆ ಉಳಿದ ಜನಪ್ರತಿನಿಧಿಗಳೇ ಸುಳಿವೇ ಇರಲಿಲ್ಲ.
ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿನ ಪ್ರಾಧಿಕಾರದ ಸಭೆಗೆ ಹಲವು ಶಾಸಕರು ಗೈರಾಗಿದಿದ್ದು, ಬೆಂಗಳೂರು ಆಡಳಿತ ಯಂತ್ರದ ಐತಿಹಾಸಿಕ ಕ್ಷಣದ ಕುರ್ಚಿಗಳು ಖಾಲಿ ಖಾಲಿಯಾಗಿದ್ದು, ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಂದೇ ವ್ಯಾಖ್ಯಾನಿಸಲಾಗುತ್ತಿದೆ.

ಕೊನೆಗೆ ಇದ್ದ ಕೆಲವೇ ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಕೆಲವು ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ಆರಂಭಿಸಿದರು.
ಜಿಬಿಎ ಸಭೆಯ ಆರಂಭಕ್ಕೂ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಇವತ್ತು ಬೆಂಗಳೂರಿನ ಮೊದಲ ಸಭೆ ನಡೆಯುತ್ತಿದೆ. ಎಲ್ಲರಿಗೂ ಶುಭಾಶಯಗಳು. 5 ಪಾಲಿಕೆಗಳು ಆಗಿವೆ. ಸಿಎಂ ಅವರೇ ಎಲ್ಲ ಉಸ್ತುವಾರಿ ತಗೊಂಡಿದ್ದಾರೆ ಎಂದರು.
ಬಿಜೆಪಿಯವರು ಸಭೆಗೆ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೂ ಕೂಡ ಅವರು ಸಭೆಗೆ ಬರೋದಕ್ಕೆ ನಾವು ಸ್ವಾಗತ ಮಾಡುತ್ತೇವೆ. ವಿನಮ್ರತೆಯಿಂದ ಮನವಿ ಮಾಡುತ್ತೇವೆ. ಬಿಜೆಪಿ ಅವರು ತಮ್ಮ ಜಿಬಿಎ ಸಭೆಗೆ ಬರಬೇಕು. ಜಿಬಿಎನಲ್ಲಿ ತಮ್ಮಲ್ಲಿ ಇರೋ ಅಹವಾಲು ಕೊಡಬೇಕು. ನಮಗೆ ತಿಳಿಸಬೇಕು ಅದರ ಬಗ್ಗೆ ನಾವು ಮಾತನಾಡುತ್ತೇವೆ. ವಿಪಕ್ಷ ನಾಯಕ ಅಶೋಕ್ ಅವರಿಗೂ ಕೂಡ ಮನವಿ ಮಾಡಿದ್ದೇವೆ. ಅವರು ಸಭೆ ಅಜೆಂಡಾ ನೀಡಿಲ್ಲ ಅಂತಿದ್ದಾರೆ. ಸಭೆಯಲ್ಲೇ ಅಜೆಂಡಾ ಕಾಪಿ ಕೊಡುತ್ತೇವೆ ಎಂದರು.
ಟನಲ್ ರಸ್ತೆಗೆ ಲಾಲ್ ಬಾಗ್ ಮುಖಾಂತರ ಹಾದು ಹೋಗುತ್ತೆ. ಐತಿಹಾಸಿಕ ಬಂಡೆಗೆ ಅಡಿಯಾಗುತ್ತೆ ಅಂತಿದ್ದಾರೆ. ಆದ್ರೆ ಆ ತರಹ ಏನಿಲ್ಲ, ಟನಲ್ ರಸ್ತೆ ಭೂಮಿಯ ಕೆಳಗೆ ಹೋಗುತ್ತೆ. ಐತಿಹಾಸಿಕ ಬಂಡೆಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.





















