ಬೆಂಗಳೂರು/ದಾವಣಗೆರೆ, ಜೂ.30 www.bengaluruwire.com: ದಾವಣಗೆರೆಯ ಪ್ರತಿಷ್ಠಿತ ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ (Operation Theatre) ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಸಂಭವಿಸಿದ ಈ ಸ್ಫೋಟದಿಂದಾಗಿ ಆಪರೇಷನ್ ಥಿಯೇಟರ್ನಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಸುಟ್ಟು ಕರಕಲಾಗಿವೆ.
ಅದೃಷ್ಟವಶಾತ್, ಯಾವುದೇ ರೋಗಿಗಳು ಆಪರೇಷನ್ ಥಿಯೇಟರ್ನಲ್ಲಿ ಇರದ ಕಾರಣ ಬಹುದೊಡ್ಡ ಪ್ರಾಣಹಾನಿ ತಪ್ಪಿದೆ. ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಸಚಿವ ಯು.ಟಿ. ಖಾದರ್:
ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, “ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಲು ರಾಜ್ಯಮಟ್ಟದ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ, ಕೂಲಂಕುಶ ತನಿಖೆಗೆ ಆದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.

ಇದರ ಜೊತೆಗೆ, ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರತ್ಯೇಕ ತನಿಖೆ ನಡೆಯಲಿದ್ದು, ಎರಡೂ ವರದಿಗಳು ಬಂದ ಬಳಿಕ ಇಲಾಖೆಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ವೈದ್ಯರ ಮಾಹಿತಿ:
ಬೆಳಗ್ಗೆ 8:30ರ ಸುಮಾರಿಗೆ ಇಎನ್ಟಿ (ಕಿವಿ, ಮೂಗು, ಗಂಟಲು) ಆಪರೇಷನ್ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಆಸ್ಪತ್ರೆಯ ಡಿಎಸ್ ಡಾ. ನಾಗೇಂದ್ರಪ್ಪ ಅವರ ಪ್ರಕಾರ, “ವರ್ಕ್ ಸ್ಟೇಷನ್ನಲ್ಲಿ ಸಣ್ಣ ಕಿಡಿ ಹೊತ್ತಿಕೊಂಡು ಬೆಂಕಿ ಆವರಿಸಿದೆ. ಆಕ್ಸಿಜನ್ ಮತ್ತು ನೈಟ್ರೋಜನ್ ಅನಿಲಗಳಿದ್ದ ಕಾರಣ ಬೆಂಕಿ ಬೇಗನೇ ವ್ಯಾಪಿಸಿರಬಹುದು. ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು, ತಜ್ಞ ಇಂಜಿನಿಯರ್ಗಳು ಪರಿಶೀಲನೆ ನಡೆಸಲಿದ್ದಾರೆ” ಎಂದರು.
ಕ್ಷಣಾರ್ಧದಲ್ಲಿ ಪಾರಾದ ವೈದ್ಯಕೀಯ ಸಿಬ್ಬಂದಿ:
ಬೆಳಗ್ಗೆ 9 ಗಂಟೆಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. 8:45ಕ್ಕೆ ಆಪರೇಷನ್ ಥಿಯೇಟರ್ ಪ್ರವೇಶಿಸಿ ಉಪಕರಣಗಳನ್ನು ಪರಿಶೀಲಿಸುತ್ತಿದ್ದ ಅರಿವಳಿಕೆ ತಜ್ಞೆ ಡಾ. ಶಿಲ್ಪಾಶ್ರೀ ಹಾಗೂ ಇತರ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
”ನಾವು ಆಕ್ಸಿಜನ್ ಪರಿಶೀಲಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ನಾವೆಲ್ಲರೂ ಹೊರಗೆ ಓಡಿಬಂದೆವು. ಕೆಲವೇ ನಿಮಿಷಗಳಲ್ಲಿ ಎರಡು ಆಕ್ಸಿಜನ್ ಸಿಲಿಂಡರ್ಗಳು ಸ್ಫೋಟಗೊಂಡವು. ರೋಗಿಗಳನ್ನು ಪಕ್ಕದ ಸಿದ್ಧತಾ ಕೋಣೆಯಲ್ಲಿ ಇರಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ” ಎಂದು ಡಾ. ಶಿಲ್ಪಾಶ್ರೀ ಆತಂಕದ ಕ್ಷಣಗಳನ್ನು ವಿವರಿಸಿದರು.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಪರೇಷನ್ ಥಿಯೇಟರ್ ಸುತ್ತಮುತ್ತಲಿನ ಕೊಠಡಿಗಳಿಗೂ ಹಾನಿಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ.





















