ಬೆಂಗಳೂರು, ಜೂ.30 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಇನ್ಮುಂದೆ ಅಕ್ರಮ ಹಾಗೂ ನಿಯಮಬಾಹಿರವಾಗಿ ತಲೆಎತ್ತಿರುವ ಕಟ್ಟಡಗಳಿಗೆ ಬ್ರೇಕ್ ಬೀಳಲಿದೆ.
ಬೆಂಗಳೂರಿನ ಪ್ರಮುಖ ಮತ್ತು ಅತಿ ಜನನಿಬಿಡ ವಾಣಿಜ್ಯ ಪ್ರದೇಶವಾದ ಚಿಕ್ಕಪೇಟೆ ವಿಭಾಗದಲ್ಲಿನ ಎಲ್ಲ ಕಟ್ಟಡಗಳ ಸಮಗ್ರ ಸರ್ವೆ ನಡೆಸಲು ನಗರ ಯೋಜಕರನ್ನೊಳಗೊಂಡ ವಿಶೇಷ ಹೈ-ಪವರ್ ತಂಡವನ್ನು ರಚನೆ ಮಾಡಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅನಧಿಕೃತ ಕಟ್ಟಡಗಳ ಪತ್ತೆ ಹಾಗೂ ಕಟ್ಟುನಿಟ್ಟಿನ ನೋಟಿಸ್ ಜಾರಿ:

ಚಿಕ್ಕಪೇಟೆ ವಿಭಾಗದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಲಾಗಿರುವ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳನ್ನು ಪತ್ತೆ ಹಚ್ಚುವುದು ಈ ವಿಶೇಷ ತಂಡದ ಪ್ರಮುಖ ಜವಾಬ್ದಾರಿಯಾಗಿದೆ. ಸರ್ವೆ ಕಾರ್ಯದ ವೇಳೆ ಅನಧಿಕೃತವಾಗಿ ಅಥವಾ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿ, ತಕ್ಷಣವೇ ಸಂಬಂಧಪಟ್ಟ ಮಾಲೀಕರಿಗೆ ಕಾನೂನುಬದ್ಧ ನೋಟಿಸ್ ಜಾರಿ ಮಾಡಲು ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಕಡ್ಡಾಯ ಫೈರ್ ಆಡಿಟ್: ಅಗ್ನಿ ಅವಘಡಗಳಿಗೆ ಬೀಳಲಿದೆ ಬ್ರೇಕ್:
ಚಿಕ್ಕಪೇಟೆಯಂತಹ ಕಿರಿದಾದ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ಭಾರಿ ಆಸ್ತಿ-ಪಾಸ್ತಿ ನಷ್ಟ ಹಾಗೂ ಜೀವಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹೇಶ್ವರ್ ರಾವ್ ಅವರು, “ಚಿಕ್ಕಪೇಟೆಯ ಎಲ್ಲ ಕಟ್ಟಡಗಳಲ್ಲಿ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ತುರ್ತು ನಿರ್ಗಮನ ಮಾರ್ಗಗಳು (Emergency Exits) ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ತಕ್ಷಣವೇ ‘ಫೈರ್ ಆಡಿಟ್’ ನಡೆಸಬೇಕು,” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಕಾಮಗಾರಿಗಳ ವೇಗ ಹೆಚ್ಚಿಸಲು ಕೆಆರ್ಡಿಸಿಎಲ್ ಗೆ ಗಡುವು:
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL) ವತಿಯಿಂದ ನಗರದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಇರುವ ತಾಂತ್ರಿಕ ಹಾಗೂ ಕಾನೂನು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅವರು ತಾಕೀತು ಮಾಡಿದರು.
ಕೆ-100 ಜಲಮಾರ್ಗ ರಕ್ಷಣೆ ಮತ್ತು ಬೆಸ್ಕಾಂ ಅಂಡರ್ ಗ್ರೌಂಡ್ ಕೇಬಲ್ ಮ್ಯಾಪ್:
ಬೆಂಗಳೂರಿನ ಹೆಮ್ಮೆಯ ಯೋಜನೆಯಾದ ‘ಕೆ-100 ಜಲಮಾರ್ಗ’ದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕೊಳಚೆ ನೀರು (Sewage) ಸೇರ್ಪಡೆಯಾಗುತ್ತಿರುವುದಕ್ಕೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ತಕ್ಷಣವೇ ತಡೆಗಟ್ಟಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.
ಇದಲ್ಲದೆ, ನಗರದಲ್ಲಿ ನಡೆಯುವ ಮೂಲಸೌಕರ್ಯ ಕಾಮಗಾರಿಗಳ ವೇಳೆ ಪರಸ್ಪರ ಸಮನ್ವಯತೆ ಕಾಪಾಡಲು ಮತ್ತು ಕೇಬಲ್ ಕತ್ತರಿ ತಪ್ಪಿಸಲು, ನಗರದ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ಗಳ ಸಮಗ್ರ ನಕ್ಷೆಯನ್ನು (Underground Cable Map) ಶೀಘ್ರದಲ್ಲೇ ಸಲ್ಲಿಸುವಂತೆ ಬೆಸ್ಕಾಂ (BESCOM) ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ವಿವಿಧ ನಗರ ಪಾಲಿಕೆಗಳ ಆಯುಕ್ತರು ವರ್ಚುವಲ್ (ವಿಡಿಯೋ ಕಾನ್ಫರೆನ್ಸ್) ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ಗೇಲ್ (GAIL), ಬೆಸ್ಕಾಂ, ಕೆಆರ್ಡಿಸಿಎಲ್, ಬೆಂಗಳೂರು ಜಲಮಂಡಳಿ (BWSSB) ಹಾಗೂ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಜಂಟಿ ಕಾರ್ಯತಂತ್ರ ರೂಪಿಸಲು ಒಪ್ಪಿಗೆ ಸೂಚಿಸಿದರು.





















