ಬೆಂಗಳೂರು ಜೂ.30 www.bengaluruwire.com: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ‘ಗೃಹ ಜ್ಯೋತಿ’ (Gruha Jyothi) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯವನ್ನು ರಾಜ್ಯದ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ. ಉಚಿತ ವಿದ್ಯುತ್ ಯೋಜನೆಯ ದುರ್ಬಳಕೆ ತಡೆಯುವ ಹಾಗೂ ನೈಜ ಫಲಾನುಭವಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಜಾರಿಗೆ ಬಂದಿದ್ದ ಗೃಹ ಜ್ಯೋತಿ ಯೋಜನೆಗೆ ಇದೀಗ ಒಂದು ವರ್ಷ ತುಂಬುವ ಹೊತ್ತಿಗೆ ಪುನರ್ ಪರಿಶೀಲನಾ (Re-verification) ಕಾರ್ಯ ನಡೆಯಲಿದೆ. ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಇತರೆ ಸಿಬ್ಬಂದಿಗಳು ಖುದ್ದಾಗಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ, ಅವರ ನಿಖರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಮೊಬೈಲ್ ಆಪ್ (Mobile App) ಹಾಗೂ ಘೋಷಣಾ ಪತ್ರದ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಸ್ಥಳದಲ್ಲೇ ಪೂರ್ಣಗೊಳಿಸಲಿದ್ದಾರೆ.
ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳು ಯಾವುವು?:

ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಹಕರು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಬೇಕಿದೆ:
ಆಧಾರ್ ಕಾರ್ಡ್ (Aadhaar Card)
ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಮತದಾರರ ಗುರುತಿನ ಚೀಟಿ (Voter ID)
ಪ್ಯಾನ್ ಕಾರ್ಡ್ (PAN Card)
ಬಾಡಿಗೆ ಒಪ್ಪಂದದ ಪತ್ರಗಳು (ಬಾಡಿಗೆದಾರರಾಗಿದ್ದರೆ ಮಾತ್ರ ಅನ್ವಯ)
ರೇಷನ್ ಕಾರ್ಡ್ (Ration Card)
ಜಾತಿ ಪ್ರಮಾಣ ಪತ್ರ (Caste Certificate)
ಸಾರ್ವಜನಿಕರಲ್ಲಿ ಇಂಧನ ಇಲಾಖೆಯ ಮನವಿ:
ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದೆ. ಹೀಗಾಗಿ, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಗ್ರಾಹಕರು ಮತ್ತು ಫಲಾನುಭವಿಗಳು ಮನೆಗೆ ಬರುವ ಮೀಟರ್ ರೀಡರ್ ಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ, ಸಂಪೂರ್ಣ ಸಹಕಾರ ನೀಡಬೇಕು ಎಂದು ಇಂಧನ ಇಲಾಖೆ ಕೋರಿದೆ.
ಈ ಬೃಹತ್ ಪರಿಶೀಲನಾ ಕಾರ್ಯವು ರಾಜ್ಯದ ಪ್ರಮುಖ ಐದು ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ (BESCOM), ಹೆಸ್ಕಾಂ (HESCOM), ಮೆಸ್ಕಾಂ (MESCOM), ಜೆಸ್ಕಾಂ (GESCOM) ಹಾಗೂ ಸೆಸ್ಕ್ (CESC) ವ್ಯಾಪ್ತಿಯಾದ್ಯಂತ ಏಕಕಾಲದಲ್ಲಿ ನಡೆಯಲಿದೆ.




















