ಬೆಂಗಳೂರು, ಜುಲೈ 01 www.bengaluruwire.com: “ಪತ್ರಕರ್ತರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸಮಾಜಕ್ಕೆ ನೈಜ ಸುದ್ದಿಗಳನ್ನು ನೀಡಬೇಕು. ಮಾಧ್ಯಮಗಳು ಕೇವಲ ಆಡಳಿತ ಪಕ್ಷವನ್ನು ವಿರೋಧಿಸುವುದನ್ನೇ ಗುರಿಯಾಗಿಸದೇ, ತಪ್ಪು ಮಾಡಿದಾಗ ಎಚ್ಚರಿಸುವ ಜೊತೆಗೆ ಸರ್ಕಾರ ಮಾಡುವ ಉತ್ತಮ ಕೆಲಸಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು,” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪತ್ರಕರ್ತರಿಗೆ ಕರೆ ನೀಡಿದರು.
ನಗರದಲ್ಲಿ ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಪತ್ರಿಕಾ ದಿನಾಚರಣೆ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
’ಫೇಕ್ ನಶೆ’ಯ ಸುದ್ದಿಗಳಿಂದ ವೈಯಕ್ತಿಕ ಜೀವನಕ್ಕೆ ಹಾನಿ: ಸಿಎಂ ಆತಂಕ:
ಇತ್ತೀಚಿನ ದಿನಗಳಲ್ಲಿ ಸತ್ಯಾಸತ್ಯತೆ ಪರಿಶೀಲಿಸದೆ ಸುದ್ದಿ ಪ್ರಕಟಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, “ಯಾವುದೇ ‘ಫೇಕ್ ನಶೆ’ಯ ಸುದ್ದಿಗಳನ್ನು ಬರೆಯುವ ಮುನ್ನ ಸತ್ಯಾಂಶವನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಕೈಗಡಿಯಾರ, 24 ಗಂಟೆಗಳ ಕಾಲ ಓಡುವ ಟಿವಿ ಹಾಗೂ ಸಾಲಕ್ಕೆ ನೀಡಿದ ಬಡ್ಡಿ ಎಂದಿಗೂ ನಿಲ್ಲುವುದಿಲ್ಲ. ಅದೇ ರೀತಿ, ಸುದ್ದಿ ನೀಡುವ ಅವಸರದಲ್ಲಿ ಸತ್ಯ ತಿಳಿಯದೇ ಹಾಕುವ ಸುಳ್ಳು ಸುದ್ದಿಗಳಿಂದ ಬೇರೆಯವರ ವೈಯಕ್ತಿಕ ಜೀವನಕ್ಕೆ ತುಂಬಲಾರದ ಹಾನಿಯಾಗುತ್ತದೆ. ದಯವಿಟ್ಟು ಸತ್ಯಾಂಶ ತಿಳಿದು ಬರೆಯಿರಿ,” ಎಂದು ಕಿವಿಮಾತು ಹೇಳಿದರು.

ಮೇಕೆದಾಟು ಪಾದಯಾತ್ರೆಯ ಹಳೇ ನೆನಪು ಹಂಚಿಕೊಂಡ ಡಿ.ಕೆ.ಶಿವಕುಮಾರ್:
ತಮ್ಮ ರಾಜಕೀಯ ಜೀವನದಲ್ಲಿ ಮಾಧ್ಯಮಗಳು ಸೃಷ್ಟಿಸಿದ ತಪ್ಪು ಸುದ್ದಿಯೊಂದನ್ನು ನೆನಪಿಸಿಕೊಂಡ ಸಿಎಂ, “ಕರೋನಾ ಸೋಂಕಿನ ಸಂದರ್ಭದಲ್ಲಿ ನಾವು ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಸಂಗಮ ರಸ್ತೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದೆವು. ಆ ಸಮಯದಲ್ಲಿ ನಮ್ಮ ಕಾರ್ಯಕರ್ತರು ತಳ್ಳಿದಾಗ ನಾನು ಆಯತಪ್ಪಿ ವಾಲಿಕೊಂಡು ಬರುತ್ತಿದ್ದೆ. ಆದರೆ, ಟಿವಿ ಮಾಧ್ಯಮಗಳು ನಾನು ಕುಡಿದು ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಎಷ್ಟೋ ದಿನಗಳ ಕಾಲ ತಪ್ಪು ಸುದ್ದಿಯನ್ನು ಬಿತ್ತರಿಸಿದವು,” ಎಂದು ವಿಷಾದಿಸಿದರು.
”ಸುದ್ದಿ ಎನ್ನುವುದು ನೀವು ಬರೆಯುವ ತನಕ ಮಾತ್ರ ನಿಮ್ಮ ಸ್ವತ್ತು, ಬರೆದ ಮೇಲೆ ಅದು ಸಾರ್ವಜನಿಕ ಆಸ್ತಿಯಾಗುತ್ತದೆ. ಇಂತಹ ಸುಳ್ಳು ಸುದ್ದಿಗಳ (Fake News) ಹಾವಳಿಯಿಂದ ಸಮಾಜಕ್ಕೆ ದೊಡ್ಡ ತೊಡಕಾಗುತ್ತಿದ್ದು, ಇದನ್ನು ನಿವಾರಿಸಬೇಕಿದೆ. ಇದಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ತಂದಿವೆ. ನಾನು ಇಂದಿಗೂ ಪ್ರತಿನಿತ್ಯ ನಾಲ್ಕೈದು ದಿನಪತ್ರಿಕೆಗಳನ್ನು ಓದುವ ಮೂಲಕ ಸಮಾಜದ ಸಮಸ್ಯೆಗಳು, ಜನರ ನೋವು ಹಾಗೂ ದೇಶದ ಆಗುಹೋಗುಗಳನ್ನು ತಿಳಿದುಕೊಳ್ಳುತ್ತೇನೆ,” ಎಂದು ಅವರು ತಿಳಿಸಿದರು.
ಮಾಧ್ಯಮಗಳ ಮುಂದಿರುವ ಸವಾಲುಗಳು: ದಿನೇಶ್ ಗುಂಡೂರಾವ್ ವಿಶ್ಲೇಷಣೆ:
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ದಿನೇಶ್ ಗುಂಡೂರಾವ್, “ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲೆ ಕಣ್ಣಿಡುವ ಚತುರ್ಥ ಅಂಗವಾದ ಪತ್ರಿಕಾರಂಗ ಪಾರದರ್ಶಕವಾಗಿದ್ದರೆ ಮಾತ್ರ ದೇಶದ ಹಕ್ಕುಗಳು ಸುರಕ್ಷಿತವಾಗಿರುತ್ತವೆ. ಜನರಿಗೆ ಉತ್ತಮ ನಾಯಕತ್ವ ಸಿಗಲು ಮತ್ತು ಪ್ರಜಾಪ್ರಭುತ್ವ ಬಲಯುತವಾಗಲು ಮಾಧ್ಯಮಗಳೇ ಮಾನದಂಡ,” ಎಂದರು.
ತಂತ್ರಜ್ಞಾನದ ಬೆಳವಣಿಗೆಯಿಂದ ಮಾಧ್ಯಮ ವಲಯ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ ಅವರು, “ಕಳೆದ ಒಂದು ದಶಕದಲ್ಲಿ ಸಾಮಾಜಿಕ ಮಾಧ್ಯಮಗಳ (Social Media) ಹಾವಳಿ ಹೆಚ್ಚಾಗಿದ್ದು, ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬುದನ್ನು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಜನರಲ್ಲಿ ಸುದ್ದಿಯನ್ನು ಪೂರ್ಣವಾಗಿ ಓದದೆ ತಕ್ಷಣವೇ ಪ್ರತಿಕ್ರಿಯಿಸುವ ಜಾಯಮಾನ ಜಾಸ್ತಿಯಾಗಿದೆ. ಅಲ್ಪ ಕಾಲದಲ್ಲಿ ಜನರನ್ನು ಸೆಳೆಯಲು ವ್ಯಾಪಾರೀಕರಣ ಹೆಚ್ಚಾಗುತ್ತಿರುವುದು ಮಾಧ್ಯಮ ವಲಯದ ಆತಂಕಕ್ಕೆ ಕಾರಣವಾಗಿದೆ,” ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಕೂಗಿನ ನಡುವೆಯೂ, ನೈಜ ಬಂಡವಾಳ ಹೂಡಿ ನೈಜ ಪತ್ರಕರ್ತರು ಡಿಜಿಟಲ್ ಮಾಧ್ಯಮದ ಮೂಲಕ ಸ್ವತಂತ್ರ ವೃತ್ತಿಪತ್ರಿಕೋದ್ಯಮ ನಡೆಸಲು ಹೊಸ ಅವಕಾಶಗಳು ಲಭಿಸಿವೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಮುದ್ರಣ ಮಾಧ್ಯಮಕ್ಕೆ ಸಾವಿಲ್ಲ: ಅಬ್ದುಸ್ಸಲಾಂ ಪುತ್ತಿಗೆ ಪ್ರತಿಪಾದನೆ:
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಹಿರಿಯ ಪತ್ರಕರ್ತ ಅಬ್ದುಸ್ಸಲಾಂ ಪುತ್ತಿಗೆ ಅವರು, “ಹಿಂದೆ ಮುದ್ರಣ ಮಾಧ್ಯಮದ ಮೂಲಕ ಕೇವಲ ಒಂದು ಲಕ್ಷ ಮಂದಿ ಓದುತ್ತಿದ್ದ ವಿಚಾರವನ್ನು ಇಂದು ಮೊಬೈಲ್ ಹಾಗೂ ಕಂಪ್ಯೂಟರ್ಗಳ ಮೂಲಕ ಕೋಟ್ಯಾಂತರ ಜನರು ಓದುತ್ತಿದ್ದಾರೆ. ಪ್ರಜ್ಞಾವಂತ ಮತ್ತು ಸಂವೇದನಾಶೀಲ ಪತ್ರಕರ್ತ ಹೊಸ ತಂತ್ರಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುತ್ತಾನೆ. ರೇಡಿಯೋ, ಟಿವಿ ಬಂದಾಗ ಮುದ್ರಣ ಮಾಧ್ಯಮದ ಯುಗ ಮುಗಿಯಿತು ಎಂದ ಕಲ್ಪನೆ ಸುಳ್ಳಾಗಿದೆ, ದಿನಪತ್ರಿಕೆಗಳು ಎಂದಿಗೂ ಕೊನೆಯಾಗುವುದಿಲ್ಲ,” ಎಂದು ವಿಶ್ಲೇಷಿಸಿದರು.
ಮುಂದುವರಿದು ಮಾತನಾಡಿದ ಅವರು, “ಮುದ್ರಣ ಮಾಧ್ಯಮವು ದ್ವಿಶತಾಯುಷಿಯಾಗಿದ್ದು, ಪ್ರಸ್ತುತ ಜಾಗತಿಕವಾಗಿ 300 ಬಿಲಿಯನ್ ಮಾರುಕಟ್ಟೆಯನ್ನು ಹೊಂದಿದೆ. 2030ರ ವೇಳೆಗೆ ಈ ವಲಯವು ಶೇಕಡಾ 10 ರಿಂದ 15 ರಷ್ಟು ಪ್ರಗತಿ ಸಾಧಿಸಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ,” ಎಂದು ಮಾಹಿತಿ ನೀಡಿದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ‘ಡಿಜಿಟಲ್ ಯುಗದಲ್ಲಿ ನಿಜ ಪತ್ರಕರ್ತರು ಯಾರು?’ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತೆಲಂಗಾಣ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರಾದ ಡಾ. ಆರ್. ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




















