ಬೆಂಗಳೂರು ಜು.22 www.bengaluruwire.com: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಹತ್ವಾಕಾಂಕ್ಷಿ ‘ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ’ಯ 2026-27ನೇ ಸಾಲಿಗೆ ಅರ್ಜಿ ಆಹ್ವಾನಿಸುವ ಕರಪತ್ರವನ್ನು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಗಳವಾರ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.
ಆರ್ಥಿಕವಾಗಿ ಹಿಂದುಳಿದ ವಿಪ್ರ ಸಮುದಾಯದ ಬಡವರ ಸ್ವಯಂ ಉದ್ಯೋಗದ ಕನಸಿಗೆ ಈ ಯೋಜನೆ ಆಸರೆಯಾಗಲಿದೆ.
ವಿಪ್ರ ಸ್ವ-ಉದ್ಯಮ ಸಾಲ ಯೋಜನೆಯ ಪ್ರಮುಖ ಅಂಶಗಳು:
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಂತ ಉದ್ಯೋಗ ಪ್ರಾರಂಭಿಸಲು ಈ ಸಾಲ ನೆರವಾಗಲಿದೆ.


ಸಾಲದ ಮೊತ್ತ: ಕನಿಷ್ಠ 1 ಲಕ್ಷ ರೂ. ನಿಂದ ಗರಿಷ್ಠ 2 ಲಕ್ಷ ರೂ. ಗಳವರೆಗೆ.
ಸಬ್ಸಿಡಿ ಹಾಗೂ ಬಡ್ಡಿ ದರ: ಸಾಲದ ಮೊತ್ತದಲ್ಲಿ ಶೇ. 20ರಷ್ಟು ಸಬ್ಸಿಡಿ (ಸಹಾಯಧನ) ಲಭ್ಯವಿದ್ದು, ಉಳಿದ ಶೇ. 80ರಷ್ಟು ಸಾಲದ ಮೊತ್ತಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಮರುಪಾವತಿ ನಿಯಮ: ಸಾಲವನ್ನು ಒಟ್ಟು 34 ಸುಲಭ ಕಂತುಗಳಲ್ಲಿ ಮರುಪಾವತಿಸುವ ಅವಕಾಶ ಕಲ್ಪಿಸಲಾಗಿದೆ.
ಯಾವ ಉದ್ಯೋಗಗಳಿಗೆ ಲಭ್ಯ?: ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ ಹಾಗೂ ಹೈನುಗಾರಿಕೆ (ಹಸು ಸಾಕಾಣಿಕೆ) ಆರಂಭಿಸಲು ಈ ಆರ್ಥಿಕ ನೆರವು ಸಿಗಲಿದೆ.
”ಎಲ್ಲ ವರ್ಗದ ಬಡವರ ಅಭಿವೃದ್ಧಿಗೆ ಸರ್ಕಾರ ಬದ್ಧ”:
ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಡಿಸಿಎಂ ಜಿ. ಪರಮೇಶ್ವರ, “ಬ್ರಾಹ್ಮಣ ಸಮುದಾಯದ ಬಡವರ ಸರ್ವತೋಮುಖ ಅಭಿವೃದ್ಧಿಗಾಗಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲು ಈ ಮಂಡಳಿಯನ್ನು ಸ್ಥಾಪಿಸಲಾಗಿದೆ. ನಮ್ಮ ಸರ್ಕಾರವು ಎಲ್ಲ ವರ್ಗದ ಬಡವರ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರು ಈ ಸಾಲ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು,” ಎಂದು ಕರೆ ನೀಡಿದರು.
98% ಸಾಲ ಮರುಪಾವತಿ: ಮಂಡಳಿಗೆ ಹೆಮ್ಮೆ:
2025-26ನೇ ಸಾಲಿನಲ್ಲಿ ಈ ಸಾಲ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಒಟ್ಟು 1333 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 1048 ಫಲಾನುಭವಿಗಳಿಗೆ ಒಟ್ಟು 20.60 ಕೋಟಿ ರೂ. ಸಾಲ ಸಹಾಯಧನ ಮಂಜೂರು ಮಾಡಲಾಗಿತ್ತು. ವಿಶೇಷವೆಂದರೆ, ಫಲಾನುಭವಿಗಳು ಮೊದಲ ಹಾಗೂ ಎರಡನೇ ಕಂತಿನಲ್ಲಿ ಶೇ. 98ರಷ್ಟು ಸಾಲ ಮರುಪಾವತಿಸಿದ್ದು, ಇದು ಮಂಡಳಿಯ ಯಶಸ್ಸಿಗೆ ಸಾಕ್ಷಿಯಾಗಿದೆ. “ಸಕಾಲದಲ್ಲಿ ಸಾಲ ಮರುಪಾವತಿಯಾದರೆ, ಮುಂದಿನ ದಿನಗಳಲ್ಲಿ ಸಮುದಾಯದ ಇನ್ನಷ್ಟು ಜನರಿಗೆ ಯೋಜನೆ ತಲುಪಿಸಲು ಸಾಧ್ಯವಾಗುತ್ತದೆ,” ಎಂದು ಮಂಡಳಿ ಆಶಿಸಿದೆ.
ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ:
2026-27ನೇ ಸಾಲಿನ ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಹಾಗೂ ಅರ್ಹರು ಶೀಘ್ರವೇ ಅರ್ಜಿ ಸಲ್ಲಿಸಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: – ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ – Index https://share.google/UPodeYOSQz04wPKUI
ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ ಹಾಗೂ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.




















