ವಯನಾಡು(ಕೇರಳ), ಜು.07 www.bengaluruwire.com: ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ ಬಳಿಯ ಮೇಪ್ಪಾಡಿ ಎಂಬಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕಾಮಗಾರಿ ಪ್ರದೇಶದಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ.
ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಇನ್ನು 7 ಜನ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದ್ದು, ಮಣ್ಣಿನಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಗುತ್ತಿಗೆದಾರರ ನಿರ್ಲಕ್ಷ್ಯ, ಮಾನವ ನಿರ್ಮಿತ ದುರಂತ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ಇದೊಂದು “ಮಾನವ ನಿರ್ಮಿತ ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಆನಕ್ಕೊಂಪೊಯಿಲ್-ಮೇಪ್ಪಾಡಿ (Anakkompoyil-Meppadi) ಸುರಂಗ ಯೋಜನೆಯ ಕಾಮಗಾರಿ ಮೀನಾಕ್ಷಿ ಸೇತುವೆ ಬಳಿ ನಡೆಯುತ್ತಿತ್ತು.

ಕಾಮಗಾರಿ ಸ್ಥಳದಲ್ಲಿ ಗುಡ್ಡೆಯಾಗಿ ಬಿದ್ದಿದ್ದ ಅಪಾರ ಪ್ರಮಾಣದ ಮಣ್ಣನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಮೊದಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ಗುತ್ತಿಗೆದಾರರು ಮಣ್ಣು ತೆರವುಗೊಳಿಸುವಲ್ಲಿ ವಿಫಲರಾದ ಕಾರಣ ಮಳೆಯ ನೀರಿನೊಂದಿಗೆ ಮಣ್ಣು ದಿಢೀರನೆ ಕುಸಿದು ಈ ಅವಘಡ ಸಂಭವಿಸಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಭಾರಿ ಮಳೆ, ಗುಡ್ಡ ಕುಸಿತದ ಭೀಕರತೆ:
ವಯನಾಡು ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ 225 ಎಂ.ಎಂ. ಗೂ ಅಧಿಕ ಮಳೆಯಾಗಿದ್ದು, ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ನಿರಂತರ ಮಳೆಯಿಂದಾಗಿ ಮೀನಾಕ್ಷಿ ಸೇತುವೆ ಬಳಿ ಸಂಗ್ರಹಿಸಿಡಲಾಗಿದ್ದ ಮಣ್ಣು ದಿಢೀರನೆ ಕುಸಿದು ಕಾರ್ಮಿಕರ ತಾತ್ಕಾಲಿಕ ಟೆಂಟ್ಗಳು ಮತ್ತು ವಾಹನಗಳ ಮೇಲೆ ಬಿದ್ದಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭೀಕರತೆಯ ದೃಶ್ಯಗಳು ಸೆರೆಯಾಗಿವೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ:
ಘಟನೆ ನಡೆದ ತಕ್ಷಣ ಸ್ಥಳೀಯರು ಕಾರ್ಯಾಚರಣೆಗಿಳಿದು ಕೆಲವರನ್ನು ರಕ್ಷಿಸಿದ್ದಾರೆ. ಪ್ರಸ್ತುತ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎನ್ಡಿಆರ್ಎಫ್ (NDRF) ನ 60ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಮತ್ತು ಕೃಷಿ ಸಚಿವ ಟಿ. ಸಿದ್ದೀಕ್ ಅವರಿಗೆ ತುರ್ತಾಗಿ ವಯನಾಡಿಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಗಾಯಾಳುಗಳನ್ನು ಮೇಪ್ಪಾಡಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.




















