ಬೆಂಗಳೂರು, ಜು.03 www.bengaluruwire.com: ರಾಜ್ಯದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Voter Roll Revision) ಕಾರ್ಯವು ಸಂಪೂರ್ಣವಾಗಿ ಕನ್ನಡದಲ್ಲಿಯೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.
ಸ್ಥಳನಾಮಗಳನ್ನು ಇಂಗ್ಲಿಷ್ಗೆ ಅವೈಜ್ಞಾನಿಕವಾಗಿ ಅನುವಾದಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದ್ದು, ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವ ಎಚ್ಚರಿಕೆ ನೀಡಿದ್ದಾರೆ.
‘ಮುರ’ ಗ್ರಾಮ ‘Tree’ ಆದ ಅವಾಂತರ:
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕನ್ನಡದ ಗ್ರಾಮಗಳ ಹೆಸರುಗಳನ್ನು ಇಂಗ್ಲಿಷ್ಗೆ ಭಾಷಾಂತರಿಸುವಾಗ ಗಂಭೀರ ಎಡವಟ್ಟುಗಳು ಸೃಷ್ಟಿಯಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ “ಮುರ” ಎಂಬ ಗ್ರಾಮದ ಹೆಸರನ್ನು ಮೊದಲು “ಮರ” ಎಂದು ತಪ್ಪಾಗಿ ದಾಖಲಿಸಿ, ನಂತರ ಮತದಾರರ ಪಟ್ಟಿಯಲ್ಲಿ ಇಂಗ್ಲಿಷ್ಗೆ ಅನುವಾದಿಸುವಾಗ “Tree” ಎಂದು ನಮೂದಿಸಲಾಗಿದೆ. ಇದು ಆಯೋಗದ ಅತ್ಯಂತ ಬೇಜವಾಬ್ದಾರಿತನಕ್ಕೆ ಕನ್ನಡಿ ಹಿಡಿದಿದ್ದು, ಕೇವಲ ಒಂದು ಸ್ಪೆಲ್ಲಿಂಗ್ ತಪ್ಪಿದ್ದರೂ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ಕರವೇ ಆತಂಕ ವ್ಯಕ್ತಪಡಿಸಿದೆ. ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಇಂತಹ ಸಣ್ಣ ತಪ್ಪುಗಳಿಂದಾಗಿ ಅನೇಕರು ಹಕ್ಕು ವಂಚಿತರಾದ ಉದಾಹರಣೆಗಳಿವೆ ಎಂದು ವೇದಿಕೆ ನೆನಪಿಸಿದೆ.

ಸ್ಥಳನಾಮಗಳ ಅನುವಾದ ಸಲ್ಲದು:
ಗ್ರಾಮ, ಕೆರೆ, ಕೋಟೆ, ಪಾಳ್ಯ, ಪೇಟೆ, ಬೀದಿ ಮುಂತಾದ ಸ್ಥಳನಾಮಗಳು ಭೌಗೋಳಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುತ್ತವೆ. ಇವುಗಳನ್ನು ಕೃತಕ ಬುದ್ಧಿಮತ್ತೆ (AI) ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಲೇಟರ್ ಬಳಸಿ ಇಂಗ್ಲಿಷ್ಗೆ ಅನುವಾದಿಸುವುದು ಅಧಿಕೃತ ದಾಖಲೆಗಳ ಮೂಲಸ್ವರೂಪವನ್ನೇ ನಾಶ ಮಾಡುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಆಡಳಿತ ಭಾಷೆಯಾಗಿರುವುದರಿಂದ ಎಲ್ಲ ದತ್ತಾಂಶ ನಮೂದು, ಪರಿಶೀಲನೆ ಕನ್ನಡದಲ್ಲೇ ನಡೆಯಬೇಕು. ಅನಿವಾರ್ಯವಾದರೆ ಇಂಗ್ಲಿಷ್ಗೆ ‘ಲಿಪ್ಯಂತರ’ (Transliteration) ಮಾಡಬಹುದೇ ಹೊರತು, ಯಾವುದೇ ಕಾರಣಕ್ಕೂ ಅರ್ಥಾನುವಾದ ಮಾಡಬಾರದು ಎಂದು ನಾರಾಯಣಗೌಡರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಆಗ್ರಹಗಳು:
ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಪ್ರಕ್ರಿಯೆ ಕಡ್ಡಾಯವಾಗಿ ಕನ್ನಡದಲ್ಲಿಯೇ ನಡೆಯಬೇಕು.
ಗ್ರಾಮ, ಪಟ್ಟಣ, ಮತಗಟ್ಟೆ ಹಾಗೂ ವ್ಯಕ್ತಿಗಳ ಹೆಸರುಗಳನ್ನು ಇಂಗ್ಲಿಷ್ಗೆ ಅನುವಾದಿಸಬಾರದು; ಬದಲಿಗೆ ಲಿಪ್ಯಂತರ ಮಾತ್ರ ಮಾಡಬೇಕು.
ಈಗಾಗಲೇ ಪ್ರಕಟವಾಗಿರುವ ಮತದಾರರ ಪಟ್ಟಿಯಲ್ಲಿರುವ ಇಂತಹ ಎಡವಟ್ಟುಗಳನ್ನು ರಾಜ್ಯವ್ಯಾಪಿ ಪರಿಶೀಲಿಸಿ, ತಕ್ಷಣವೇ ತಿದ್ದುಪಡಿ ಮಾಡಬೇಕು.
ದತ್ತಾಂಶ ಸಿದ್ಧಪಡಿಸುವ ಸಿಬ್ಬಂದಿಗೆ ಕನ್ನಡ ಭಾಷೆ ಮತ್ತು ಸ್ಥಳನಾಮಗಳ ಮಹತ್ವದ ಕುರಿತು ಸೂಕ್ತ ತರಬೇತಿ ನೀಡಬೇಕು.
ಸಾರ್ವಜನಿಕರು ತಪ್ಪುಗಳನ್ನು ವರದಿ ಮಾಡಲು ವಿಶೇಷ ಸಹಾಯವಾಣಿ ಮತ್ತು ತ್ವರಿತ ತಿದ್ದುಪಡಿ ವ್ಯವಸ್ಥೆಯನ್ನು ಜಾರಿಗೆ ತರಬೇಕು.
ಕನ್ನಡದ ಪದಗಳನ್ನು ವಿಕೃತಗೊಳಿಸಿ, ಜನರ ಗುರುತು ಹಾಗೂ ಊರಿನ ಇತಿಹಾಸವನ್ನು ಬದಲಿಸುವ ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಚುನಾವಣಾ ಆಯೋಗ ಕೂಡಲೇ ನಿಲ್ಲಿಸಬೇಕು. ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ರೂಪಿಸಲಾಗುವುದು ಎಂದು ಕರವೇ ಎಚ್ಚರಿಸಿದೆ.





















