ಬೆಂಗಳೂರು, ಜು.04 www.bengaluruwire.com: ಸಿಲಿಕಾನ್ ಸಿಟಿಯ ಕೆ.ಆರ್. ಸರ್ಕಲ್ ಸಮೀಪ ಶನಿವಾರ ಬೆಳಿಗ್ಗೆ ಎರಡು ಬಿಎಂಟಿಸಿ (BMTC) ಬಸ್ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐದು ಮಂದಿ ಪ್ರಯಾಣಿಕರು ಹಾಗೂ ಓರ್ವ ಚಾಲಕ ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ಬಸ್ನಲ್ಲಿದ್ದ ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಪ್ರಕಟಿಸಿದ್ದಾರೆ.
ಸಿಗ್ನಲ್ ದಾಟುವಾಗ ಹಿಂಬದಿಯಿಂದ ಡಿಕ್ಕಿ ಹೊಡೆದ ಟಾಟಾ ಇ-ಬಸ್:
ಇಂದು (ಜುಲೈ 04, 2026) ಬೆಳಿಗ್ಗೆ ಸುಮಾರು 8.30 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆ.ಬಿ.ಎಸ್.) ಅತ್ತಿಬೆಲೆಗೆ ಸಂಚರಿಸುತ್ತಿದ್ದ ಡಿಪೋ-7ರ ಒಎಚ್ಎಂ ಮೊಬಿಲಿಟಿ (OHM Mobility) ವತಿಯಿಂದ ಕಾರ್ಯಾಚರಣೆಗೊಳಿಸಲಾಗುತ್ತಿದ್ದ ಬಿಎಂಟಿಸಿ ಬಸ್ (ವಾಹನ ಸಂಖ್ಯೆ: AQ 4163, ಷೆಡ್ಯೂಲ್ ಸಂಖ್ಯೆ: 360B/15) ಕೆ.ಆರ್. ಸರ್ಕಲ್ ಸಮೀಪ ಚಲಿಸುತ್ತಿತ್ತು. ಕೆ.ಆರ್. ಸರ್ಕಲ್ ಸಂಚಾರ ಸಿಗ್ನಲ್ನಿಂದ ಈ ಬಸ್ ಮುಂದಕ್ಕೆ ಚಲಿಸುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ಡಿಪೋ-3ರ ಟಾಟಾ ಸ್ಮಾರ್ಟ್ ಮೊಬಿಲಿಟಿ (Tata Smart Mobility) ಎಲೆಕ್ಟ್ರಿಕ್ ಬಸ್ (ನೋಂದಣಿ ಸಂಖ್ಯೆ: KA-03-AJ-6163) ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.



ಪ್ರಯಾಣಿಕರು ಸುರಕ್ಷಿತ, ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ:
ಅಪಘಾತದ ತೀವ್ರತೆಗೆ ಒಎಚ್ಎಂ ಮೊಬಿಲಿಟಿ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಂಭೀರ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ, ಡಿಕ್ಕಿ ಹೊಡೆದ ಟಾಟಾ ಸ್ಮಾರ್ಟ್ ಮೊಬಿಲಿಟಿ ಎಲೆಕ್ಟ್ರಿಕ್ ಬಸ್ನಲ್ಲಿದ್ದ ಸುಮಾರು ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗಾಯಾಳುಗಳನ್ನು ಸಮೀಪದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತದಲ್ಲಿ ಟಾಟಾ ಸ್ಮಾರ್ಟ್ ಮೊಬಿಲಿಟಿ ಬಸ್ನ ಚಾಲಕನಿಗೂ ಗಾಯಗಳಾಗಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ಸಂಚಾರ ಸುಗಮ:
ಘಟನೆ ನಡೆದ ತಕ್ಷಣ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಟಾಟಾ ಸ್ಮಾರ್ಟ್ ಮೊಬಿಲಿಟಿ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ಕ್ರೇನ್ ಬಳಸಿ ಸ್ಥಳದಿಂದ ತಕ್ಷಣವೇ ತೆರವುಗೊಳಿಸಲಾಗಿದ್ದು, ರಸ್ತೆಯಲ್ಲಿದ್ದ ಟ್ರಾಫಿಕ್ ಜ್ಯಾಮ್ ನಿವಾರಿಸಿ ಸಾರ್ವಜನಿಕ ಸಂಚಾರವನ್ನು ಸುಗಮಗೊಳಿಸಲಾಗಿದೆ.
ಆಸ್ಪತ್ರೆಗೆ ಸಾರಿಗೆ ಸಚಿವರ ಭೇಟಿ: ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ:
ವಿಷಯ ತಿಳಿಯುತ್ತಿದ್ದಂತೆಯೇ ಸಾರಿಗೆ ಸಚಿವರಾದ ಬೈರತಿ ಸುರೇಶ್, ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ದೀಪಾ ಚೋಳನ್, ಐಎಎಸ್, ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಘುನಂದನ ಮೂರ್ತಿ, ಐಎಎಸ್, ಅವರು ಜಂಟಿಯಾಗಿ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿದರು.
ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಚಿವರು, ಗಾಯಗೊಂಡ ಎಲ್ಲರಿಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒಡಗಿಸುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್ ಅವರು, “ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ” ಎಂದು ಹೇಳಿದರು. ಪ್ರಸ್ತುತ ಬಿಎಂಟಿಸಿ ಅಧಿಕಾರಿಗಳು ಘಟನೆಯ ತನಿಖೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.





















