ಕಾರವಾರ, ಜೂ.6 www.bengaluruwire.com : ನೌಕಾಪಡೆಯು ತಾಲ್ಲೂಕಿನ ಅರಗಾದಲ್ಲಿರುವ ನೌಕಾನೆಲೆಯ ಐ.ಎನ್.ಎಸ್. ಪತಂಜಲಿ ಆಸ್ಪತ್ರೆ ಆವರಣದಲ್ಲಿದ್ದ ನೂರು ವರ್ಷ ಹಳೆಯದಾದ ಆಲದ ಮರವನ್ನು ಇತ್ತೀಚೆಗೆ ಬುಡ ಸಮೇತ ಯಶಸ್ವಿಯಾಗಿ ಸ್ಥಳಾಂತರಿಸಿದೆ.

ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ ಐ.ಎನ್.ಎಸ್. ಪತಂಜಲಿ ಆಸ್ಪತ್ರೆಯೂ ವಿಸ್ತರಣೆಗೊಳ್ಳುತ್ತಿದೆ. ಹೀಗಾಗಿ ಆಸ್ಪತ್ರೆ ಆವರಣದಲ್ಲಿದ್ದ ಆಲದ ಮರವನ್ನು ತೆರವು ಮಾಡುವ ಅನಿವಾರ್ಯತೆ ಎದುರಾಗಿತ್ತು. ಆದರೆ, ಬೃಹತ್ ಗಾತ್ರದ ಮರವನ್ನು ಸ್ಥಳಾಂತರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ಮರವನ್ನು ಕಡಿದು ಹಾಕುವ ಬದಲು ಬುಡ ಸಮೇತ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ಸ್ಥಳಾಂತರಿಸಲು ನೌಕಾನೆಲೆಯ ಅಧಿಕಾರಿಗಳು ನಿರ್ಧರಿಸಿದರು.
ಅದರ ಭಾಗವಾಗಿ ಮೊದಲಿಗೆ 80 ಚದರ ಮೀಟರ್ ನಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಮರದ ಕೊಂಬೆಗಳು ಕಾರವಾರದ ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಡಿದು ಹಾಕಲಾಯಿತು. ಬಳಿಕ ಎರಡು ಬೃಹತ್ ಜೆಸಿಬಿಗಳನ್ನು ಬಳಸಿ ಮರವನ್ನು ಬುಡ ಸಮೇತ ತೆಗೆದು ಹತ್ತಿರದಲ್ಲಿ ಈಗಾಗಲೇ ಮರವನ್ನು ನೆಡಲು ಸಿದ್ದಗೊಳಿಸಿದ್ದ ಸ್ಥಳಕ್ಕೆ ಯಶಸ್ವಿಯಾಗಿ ನೌಕಾಪಡೆಯ ಸಿಬ್ಬಂದಿ ಸ್ಥಳಾಂತರಗೊಳಿಸಿದರು ಎಂದು ರಕ್ಷಣಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಮರವನ್ನು ಕತ್ತರಿಸದೆ ಅತ್ಯಾಧುನಿಕ ವಿಧಾನಗಳಿಂದ ಸ್ಥಳಾಂತರಿಸುವ ಮಾದರಿ ಕೆಲಸವನ್ನು ನೌಕಾದಳವು ಮಾಡಿದೆ.





















