ಬೆಂಗಳೂರು, ಆ.29 www.bengaluruwire.com: ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ವ್ಯಾಪ್ತಿಯ ವಾರ್ಡ್ ಸಂಖ್ಯೆ 1 (ರಾಜಾ ಕೆಂಪೇಗೌಡ ವಾರ್ಡ್) ಅನ್ನು ಸ್ವಚ್ಛ ಹಾಗೂ ಸುಂದರ ‘ಮಾದರಿ ವಾರ್ಡ್’ ಆಗಿ ರೂಪಿಸುವ ಮಹತ್ವಾಕಾಂಕ್ಷೆಯ ‘ಮಾಡೆಲ್ ವಾರ್ಡ್’ ಯೋಜನೆಗೆ ಬಿಎನ್ಸಿಸಿ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಯೋಜನೆಯ ಅಂಗವಾಗಿ ನಾಲೆಡ್ಜ್ ಹ್ಯಾಬಿಟಾಟ್ ಶಾಲೆಯ (Knowledge Habitat School) ವಿದ್ಯಾರ್ಥಿಗಳು ರೈತರ ಸಂತೆ ರಸ್ತೆಯವರೆಗೆ ಬೃಹತ್ ಸ್ವಚ್ಛತಾ ಜಾಗೃತಿ ಜಾಥಾ ಮತ್ತು ಪ್ಲಾಗಿಂಗ್ ಕಾರ್ಯಕ್ರಮ ನಡೆಸಿದರು. ವಿದ್ಯಾರ್ಥಿಗಳು ಸ್ವತಃ ರಚಿಸಿದ ಸ್ವಚ್ಛತಾ ಗೀತೆ ಮತ್ತು ನೃತ್ಯ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಹಸಿ-ಒಣ ಕಸ ವಿಂಗಡಣೆಯ ಮಹತ್ವವನ್ನು ಸಾರಿದರು.
ಮಾಡೆಲ್ ವಾರ್ಡ್ ಯೋಜನೆಯ ಪ್ರಮುಖ ಆದ್ಯತೆಗಳು:
ಕಸದ ಬ್ಲ್ಯಾಕ್ಸ್ಪಾಟ್ ನಿರ್ಮೂಲನೆ: ರಸ್ತೆ ಬದಿಯ ಕಸದ ರಾಶಿಗಳು ಹಾಗೂ ಕಟ್ಟಡ ತ್ಯಾಜ್ಯಗಳ (C&D Waste) ತ್ವರಿತ ತೆರವು.

ಮೂಲಸೌಕರ್ಯ ನಿರ್ವಹಣೆ: ಗುಂಡಿ ಮುಕ್ತ ರಸ್ತೆ, ಉದ್ಯಾನವನಗಳ ಸುಸ್ಥಿರ ನಿರ್ವಹಣೆ ಹಾಗೂ ಬೀದಿ ದೀಪಗಳ ದುರಸ್ತಿ.
ಒತ್ತುವರಿ ತೆರವು: ಸಾರ್ವಜನಿಕ ಸ್ಥಳಗಳ ಒತ್ತುವರಿ ತೆರವುಗೊಳಿಸಿ ರಸ್ತೆಗಳ ನಿರಂತರ ಸ್ವಚ್ಛತೆಗೆ ಕ್ರಮ.
ಸಾರ್ವಜನಿಕ ಜಾಗೃತಿ: ಅಂಗಡಿಗಳು, ಅಪಾರ್ಟ್ಮೆಂಟ್ಗಳು ಹಾಗೂ ಶಾಲೆಗಳ ಸಹಯೋಗದೊಂದಿಗೆ ಮೂಲದಲ್ಲೇ ತ್ಯಾಜ್ಯ ವಿಂಗಡಣೆಗೆ ಪ್ರೋತ್ಸಾಹ.
ಕಾರ್ಯಕ್ರಮದಲ್ಲಿ ಮೀನಾಕ್ಷಿ ಕೃಷ್ಣ ಬೈರೇಗೌಡ, ಜಂಟಿ ಆಯುಕ್ತರಾದ ಪಲ್ಲವಿ, ಮೊಹಮ್ಮದ್ ನಯೀಮ್ ಮೊಮಿನ್, ಡಿಜಿಎಂ ರಶ್ಮಿ, ಶಾಲಾ ಪ್ರಾಂಶುಪಾಲರು, ಎನ್ಜಿಒ ಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.




















