ಮಿಯಾಮಿ/ಬೆಂಗಳೂರು, ಆ.25 www.bengaluruwire.com: ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಫೊರೆನ್ಸಿಕ್ಸ್, ರೋಬೋಟಿಕ್ಸ್ ಹಾಗೂ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಜಾಗತಿಕ ಪ್ರವರ್ತಕ ಸಂಶೋಧಕರಾದ ಪ್ರೊ. ಎಸ್. ಎಸ್. ಅಯ್ಯಂಗಾರ್ ಅವರಿಗೆ ಅಮೆರಿಕದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ (FIU) ಪ್ರತಿಷ್ಠಿತ ‘President’s Council Outstanding Faculty Award – 2026’ ಲಭಿಸಿದೆ.
ಸಂಶೋಧನೆ, ಉನ್ನತ ಮಟ್ಟದ ಬೋಧನೆ, ಯುವ ಸಂಶೋಧಕರಿಗೆ ಮಾರ್ಗದರ್ಶನ ಹಾಗೂ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯವು ಈ ಗೌರವ ಸಮರ್ಪಿಸಿದೆ. ಪ್ರೊ. ಅಯ್ಯಂಗಾರ್ ಅವರ ಕಾರ್ಯಕ್ಷಮತೆಯು ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಪರಿವರ್ತನೆಗೆ ಕಾರಣವಾಗಿದೆ ಎಂದು FIU ಪ್ರೆಸಿಡೆಂಟ್ಸ್ ಕೌನ್ಸಿಲ್ ಪ್ರಶಂಸಿಸಿದೆ.
ಸಂಶೋಧನಾ ಲೋಕದ ಧ್ರುವತಾರೆ:
ಪ್ರಸ್ತುತ FIU ನ ನೈಟ್ ಫೌಂಡೇಶನ್ ಸ್ಕೂಲ್ ಆಫ್ ಕಂಪ್ಯೂಟಿಂಗ್ ಅಂಡ್ ಇನ್ಫರ್ಮೇಷನ್ ಸೈನ್ಸಸ್ನಲ್ಲಿ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಅಯ್ಯಂಗಾರ್, ಹಲವು ದಶಕಗಳಿಂದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಂಶೋಧನಾ ಪ್ರಬಂಧಗಳು: 600ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಲೇಖನಗಳು
ಕೃತಿಗಳು: 30ಕ್ಕೂ ಹೆಚ್ಚು ತಾಂತ್ರಿಕ ಮತ್ತು ವೈಜ್ಞಾನಿಕ ಪುಸ್ತಕಗಳು
ಮಾರ್ಗದರ್ಶನ: 65ಕ್ಕೂ ಹೆಚ್ಚು ಸಂಶೋಧಕರಿಗೆ ಯಶಸ್ವಿ ಪಿಎಚ್.ಡಿ. ಗೈಡೆನ್ಸ್
ಪ್ರಮುಖ ಕ್ಷೇತ್ರಗಳು: AI, ಸೆನ್ಸರ್ ನೆಟ್ವರ್ಕ್, ಸೆನ್ಸರ್ ಫ್ಯೂಷನ್, ರೋಬೋಟಿಕ್ಸ್, ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೊರೆನ್ಸಿಕ್ಸ್
ಇತ್ತೀಚೆಗಷ್ಟೇ ಅವರು ‘Florida Inventors Hall of Fame 2026’ ಗೌರವಕ್ಕೂ ಆಯ್ಕೆಯಾಗಿದ್ದು, ಬೆನ್ನಲ್ಲೇ ಈ ಅತ್ಯುನ್ನತ ಫ್ಯಾಕಲ್ಟಿ ಪ್ರಶಸ್ತಿ ಲಭಿಸಿರುವುದು ಅವರ ವೈಜ್ಞಾನಿಕ ಕೊಡುಗೆಗೆ ಸಂದ ಮತ್ತೊಂದು ಗರಿಷ್ಠ ಮನ್ನಣೆಯಾಗಿದೆ.
ಕನ್ನಡದಲ್ಲಿ ಎಐ ಜ್ಞಾನ ವಿಸ್ತರಣೆ: ಗ್ರಾಮೀಣ ಜನತೆಗೆ ತಂತ್ರಜ್ಞಾನದ ಸ್ಪರ್ಶ:
ಜಾಗತಿಕ ಮಟ್ಟದ ವಿಜ್ಞಾನಿಯಾಗಿದ್ದರೂ ಪ್ರೊ. ಅಯ್ಯಂಗಾರ್ ಅವರು ಕನ್ನಡ ನಾಡಿನಲ್ಲಿ ಎಐ ತಂತ್ರಜ್ಞಾನದ ಸಾಕ್ಷರತೆ ಮೂಡಿಸಲು ಕೈಜೋಡಿಸಿದ್ದಾರೆ. ಅವರ ಈ ಮಹತ್ವದ ಉಪಕ್ರಮದ ಕುರಿತು ಹಿರಿಯ ಪತ್ರಕರ್ತ ಹಾಗೂ ಎಐ ಲೇಖಕ ಡಾ. ರಮೇಶ್ ನಿಂಬೆಮರದಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.
“ಪ್ರೊ. ಎಸ್. ಎಸ್. ಅಯ್ಯಂಗಾರ್ ಅವರಂತಹ ಮೇರು ವಿಜ್ಞಾನಿ ಕನ್ನಡದ ಎಐ ಕೃತಿಯೊಂದರಲ್ಲಿ ನನ್ನೊಂದಿಗೆ ಸಹಲೇಖಕರಾಗಿರುವುದು ಕನ್ನಡಿಗರೆಲ್ಲರೂ ಹೆಮ್ಮೆಪಡುವ ವಿಷಯ. ‘Iyengar Educational and Medical Foundation’ ಜತೆಗೂಡಿ ಕರ್ನಾಟಕದ ಸರ್ಕಾರಿ ಶಾಲಾ ಮಕ್ಕಳು, ಗ್ರಾಮೀಣ ಯುವಜನರು ಮತ್ತು ಸಾರ್ವಜನಿಕರಲ್ಲಿ ಎಐ ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನ ಕೇವಲ ತಜ್ಞರಿಗೆ ಸೀಮಿತವಾಗದೆ ಸಾಮಾನ್ಯ ಜನರಿಗೂ ಕನ್ನಡದಲ್ಲೇ ಸುಲಭವಾಗಿ ಅರ್ಥವಾಗುವಂತೆ ಮಾಡುವುದೇ ಈ ಸಹಯೋಗದ ಮುಖ್ಯ ಉದ್ದೇಶ,” ಎಂದು ಡಾ. ರಮೇಶ್ ತಿಳಿಸಿದ್ದಾರೆ.

















