ನವದೆಹಲಿ, ಆ.26 www.bengaluruwire.com: ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು (Regional Rural Banks – RRBs) 2025-26ನೇ ಹಣಕಾಸು ವರ್ಷದಲ್ಲಿ ಅಭೂತಪೂರ್ವ ಆರ್ಥಿಕ ಯಶಸ್ಸು ಕಂಡಿದೆ.
ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 28 ಆರ್ಆರ್ಬಿಗಳ ಕ್ರೋಢೀಕೃತ ನಿವ್ವಳ ಲಾಭವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹10,176 ಕೋಟಿಗೆ ತಲುಪಿದ್ದು, ಒಟ್ಟು ವ್ಯವಹಾರವು ₹13.5 ಲಕ್ಷ ಕೋಟಿಯ ಮೈಲಿಗಲ್ಲನ್ನು ದಾಟಿದೆ.
ಹಣಕಾಸು ಸೇವೆಗಳ ಇಲಾಖೆಯ (DFS) ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಆರ್ಆರ್ಬಿಗಳ ಕಾರ್ಯಕ್ಷಮತೆ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ಅಂಕಿ-ಅಂಶಗಳನ್ನು ಪ್ರಕಟಿಸಲಾಗಿದೆ. ಈ ಉನ್ನತ ಮಟ್ಟದ ಸಭೆಯಲ್ಲಿ ನಬಾರ್ಡ್ (NABARD) ಅಧ್ಯಕ್ಷರು, 28 ಆರ್ಆರ್ಬಿಗಳ ಮುಖ್ಯಸ್ಥರು, ಪ್ರಾಯೋಜಕ ಬ್ಯಾಂಕುಗಳು, ಆರ್ಬಿಐ (RBI) ಹಾಗೂ ಸಿಡ್ಬಿ (SIDBI) ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಮುಖ ಮುಖ್ಯಾಂಶಗಳು & ಆರ್ಥಿಕ ಪ್ರಗತಿ:

ಲಾಭದಲ್ಲಿ ಭಾರೀ ಏರಿಕೆ: 2024-25ನೇ ಸಾಲಿನಲ್ಲಿ ₹6,820 ಕೋಟಿ ಇದ್ದ ಆರ್ಆರ್ಬಿಗಳ ಒಟ್ಟು ನಿವ್ವಳ ಲಾಭವು, 2025-26ನೇ ಸಾಲಿನಲ್ಲಿ ಶೇ. 49ಕ್ಕೂ ಅಧಿಕ ಏರಿಕೆ ಕಂಡು ₹10,176 ಕೋಟಿಗೆ ತಲುಪಿದೆ.
ವ್ಯವಹಾರ ವಿಸ್ತರಣೆ: ಒಟ್ಟು ₹13.5 ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸುವ ಮೂಲಕ ಹಲವು ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳ (PSBs) ವಹಿವಾಟನ್ನೇ ಮೀರಿಸುವ ಮಟ್ಟಕ್ಕೆ ಗ್ರಾಮೀಣ ಬ್ಯಾಂಕುಗಳು ಬೆಳೆದು ನಿಂತಿವೆ.
ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದ ಎನ್ಪಿಎ: ಬ್ಯಾಂಕುಗಳ ಆಸ್ತಿ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದ್ದು, ಒಟ್ಟು ವಾಪಸ್ಸಾಗದ ಸಾಲದ ಪ್ರಮಾಣ (GNPA) ಶೇ. 5.3ಕ್ಕೆ ಹಾಗೂ ನಿವ್ವಳ ವಾಪಸ್ಸಾಗದ ಸಾಲದ ಪ್ರಮಾಣ (Net NPA) ಶೇ. 2.1ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ದಾಖಲೆಯ ಸಾಲ-ಠೇವಣಿ ಅನುಪಾತ (CD Ratio): ಬ್ಯಾಂಕುಗಳ ಸಾಲ-ಠೇವಣಿ ಅನುಪಾತವು ಶೇ. 75.2ರ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಸಾಲ ವಿತರಣೆ ಚುರುಕಾಗಿರುವುದನ್ನು ಸಾಬೀತುಪಡಿಸಿದೆ.
54.98 ಲಕ್ಷ ಹೊಸ ಜನ್ಧನ್ ಖಾತೆಗಳು: ಹಣಕಾಸು ಸೇರ್ಪಡೆ (Financial Inclusion) ಯೋಜನೆಯಡಿ 2025-26ರಲ್ಲಿ ಬರೋಬ್ಬರಿ 54.98 ಲಕ್ಷಕ್ಕೂ ಅಧಿಕ ಹೊಸ ಪ್ರಧಾನಮಂತ್ರಿ ಜನ್ ಧನ್ ಯೋಜನೆ (PMJDY) ಖಾತೆಗಳನ್ನು ತೆರೆಯಲಾಗಿದೆ.
ಆದ್ಯತಾ ವಲಯದ ಸಾಲ ಗುರಿ ಸಾಧನೆ: ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಸಮಾಜದ ಹಿಂದುಳಿದ-ದುರ್ಬಲ ವರ್ಗಗಳಿಗೆ ನಿಗದಿತ ಆದ್ಯತಾ ವಲಯ ಸಾಲದ (Priority Sector Lending) ಎಲ್ಲಾ ಗುರಿಗಳನ್ನು ಯಶಸ್ವಿಯಾಗಿ ತಲುಪಲಾಗಿದೆ.
ವ್ಯಾಪ್ತಿ ಮತ್ತು ಡಿಜಿಟಲ್ ಬ್ಯಾಂಕಿಂಗ್ಗೆ ಒತ್ತು:
ಪ್ರಸ್ತುತ ದೇಶದ 26 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 700 ಜಿಲ್ಲೆಗಳಲ್ಲಿ 22,273 ಶಾಖೆಗಳ ಬೃಹತ್ ಜಾಲವನ್ನು ಆರ್ಆರ್ಬಿಗಳು ಹೊಂದಿವೆ.
ಸಭೆಯಲ್ಲಿ ಮಾತನಾಡಿದ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿಗಳು, “ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ಹಾಗೂ ಬ್ಯಾಂಕಿಂಗ್ ಸೌಲಭ್ಯಗಳು ತಲುಪಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಸುಧಾರಿತ ಐಟಿ ಮೂಲಸೌಕರ್ಯಗಳನ್ನು ಬಲಪಡಿಸಲು ಪ್ರಾಯೋಜಕ ಬ್ಯಾಂಕುಗಳು ಆರ್ಆರ್ಬಿಗಳಿಗೆ ಸಂಪೂರ್ಣ ತಾಂತ್ರಿಕ ಬೆಂಬಲ ನೀಡಬೇಕು” ಎಂದು ಕರೆ ನೀಡಿದ್ದಾರೆ.


















