ಬೆಂಗಳೂರು / ನವದೆಹಲಿ, ಆ.28 www.bengaluruwire.com: ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬ ಹರಿದಿನಗಳು ಹಾಗೂ ಮದುವೆ ಸಮಾರಂಭಗಳ ಸರಣಿಯೇ ಶುರುವಾಗಿದೆ.
ಈ ಋತುವಿನಲ್ಲಿ ಮಾರುಕಟ್ಟೆಯಲ್ಲಿ ನಿತ್ಯಬಳಕೆಯ ಪದಾರ್ಥಗಳ ದರ ಏರಿಕೆಯಾಗುವುದನ್ನು ತಡೆಯಲು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಂಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಹಾಲು, ಬೇಳೆಕಾಳು ಹಾಗೂ ತರಕಾರಿಗಳು ಸೇರಿದಂತೆ ಒಟ್ಟು 41 ಅಗತ್ಯ ವಸ್ತುಗಳ ಬೆಲೆ ಸ್ಥಿರೀಕರಣಕ್ಕೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
₹35 ದರದಲ್ಲಿ ಈರುಳ್ಳಿ ಲಭ್ಯತೆ:
ಹಬ್ಬದ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರ್ಕಾರ ಬಫರ್ ಸ್ಟಾಕ್ನಿಂದ ಮಾರುಕಟ್ಟೆಗೆ ಈರುಳ್ಳಿ ಬಿಡುಗಡೆ ಮಾಡುತ್ತಿದೆ. NCCF, NAFED, ಕೇಂದ್ರೀಯ ಭಂಡಾರ್ ಹಾಗೂ ಸಫಲ್ ಮಳಿಗೆಗಳ ಮೂಲಕ ಪ್ರತಿ ಕೆಜಿಗೆ ಕೇವಲ ₹35 ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ 122 ಮಳಿಗೆಗಳು ಹಾಗೂ 90 ಮೊಬೈಲ್ ವ್ಯಾನ್ಗಳನ್ನು ನಿಯೋಜಿಸಲಾಗಿದೆ. ನಾಸಿಕ್ನಿಂದ ‘ಕಾಂದಾ ಎಕ್ಸ್ಪ್ರೆಸ್’ ರೈಲು ಹಾಗೂ ರಸ್ತೆ ಮಾರ್ಗಗಳ ಮೂಲಕ ದೆಹಲಿ, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಗೆ ಈರುಳ್ಳಿ ಪೂರೈಕೆ ಚುರುಕುಗೊಂಡಿದೆ.

579 ಕೇಂದ್ರಗಳ ಮೂಲಕ ನಿರಂತರ ನಿಗಾ:
ದೇಶದ 579 ಆಯಕಟ್ಟಿನ ಕೇಂದ್ರಗಳಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯು ನಿತ್ಯದ ದರಗಳ ಮೇಲೆ ಕಣ್ಣಿಟ್ಟಿದೆ. ಟೊಮೆಟೊ, ಆಲೂಗಡ್ಡೆ, ತೊಗರಿಬೇಳೆ, ಕಡಲೆಬೇಳೆ ಮುಂತಾದ ಪ್ರಮುಖ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದ್ದು, ಅಖಿಲ ಭಾರತ ಮಟ್ಟದಲ್ಲಿ ಟೊಮೆಟೊ ಸರಾಸರಿ ₹38.33, ಆಲೂಗಡ್ಡೆ ₹22.63, ಕಡಲೆಬೇಳೆ ₹86.71, ಅಟ್ಟಾ ₹40.48 ಹಾಗೂ ಹಾಲು ಪ್ರತಿ ಲೀಟರ್ಗೆ ₹60.82 ದರದಲ್ಲಿದೆ.
”ಹಬ್ಬಗಳ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ತಡೆಯಲು 41 ದಿನಬಳಕೆ ವಸ್ತುಗಳ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಬಫರ್ ಸ್ಟಾಕ್ ಬಿಡುಗಡೆ ಮಾಡಿ ಗ್ರಾಹಕರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ.”
— ಪ್ರಲ್ಹಾದ ಜೋಶಿ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು




















