ನವದೆಹಲಿ, ಡಿ.12 www.bengaluruwire.com : ದೇಶದಲ್ಲಿ ಬಿಡಿಯಾಗಿ ಸಿಗರೇಟ್ (Single Cigarette) ಮಾರಾಟಕ್ಕೆ ಶೀಘ್ರದಲ್ಲೇ ಬ್ರೇಕ್ ಬೀಳುವ ಸಾಧ್ಯತೆಯಿದೆ. ಬಿಡಿ ಬಿಡಿಯಾಗಿ ಸಿಗರೇಟ್ ಮಾರಾಟ ಮಾಡುತ್ತಿರುವುದರಿಂದ ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಹಿನ್ನಲೆಯಲ್ಲಿ ಸಂಸದೀಯ ಸ್ಥಾಯಿ ಸಮಿತಿ (Standing Committee of Parliament) ಇಂತದ್ದೊಂದು ಶಿಫಾರಸ್ಸು ಮಾಡುವ ಪ್ರಸ್ತಾವಿಟ್ಟಿದೆ ಎಂದು ವರದಿಯಾಗಿದೆ.
ಬಿಡಿ ಸಿಗರೇಟ್ ಮತ್ತು ಬಿಡಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಕಡಿಮೆ ಆದಾಯ ಹೊಂದಿದ ಜನರಿಗೆ ಹಾಗೂ ಯುವಜನತೆಗೆ ಇವುಗಳನ್ನು ಸುಲಭವಾಗಿ ಕೊಳ್ಳಲು ಸಾಧ್ಯವಾಗುತ್ತದೆ. ದೇಶದಲ್ಲಿ ಬಹುತೇಕ ಧೂಮಪಾನಿಗಳು ಸಿಗರೇಟ್ ಪ್ಯಾಕ್ ಗಳ ಬದಲಿಗೆ ಒಂದೋ, ಎರಡೋ ಸಿಗರೇಟ್ ಗಳನ್ನು ಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದಾಗಿ ಸಿಗರೇಟ್ ಸೇವಿಸುವವರ ಹಾಗೂ ಅದರ ಚಟಕ್ಕೆ ಒಳಗಾಗುವವರ ಸಂಖ್ಯೆಯು ಹೆಚ್ಚಾಗಿ ಅವರಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದನ್ನು ತಪ್ಪಿಸಲು ಸಂಸತ್ತಿನ ಸ್ಥಾಯಿ ಸಮಿತಿಯು ಬಿಡಿಯಾಗಿ ಸಿಗರೇಟ್ ನಿಷೇಧ ಮಾಡುವುದರ ಬಗ್ಗೆ ಶಿಫಾರಸ್ಸು ಮಾಡಿದೆ.
ಇದಲ್ಲದೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ವಲಯಗಳನ್ನು ತೆಗೆದು ಹಾಕಲು ಸಮಿತಿಯು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ. ತಂಬಾಕು ಪದಾರ್ಥಗಳ ಮೇಲೆ ವಿಧಿಸುವ ಅಬಕಾರಿ ಸುಂಕವನ್ನು ಹೆಚ್ಚಿಗೆ ಮಾಡಲು ಪ್ರಸ್ತಾಪಿಸಲಾಗಿದೆ. ಸುಂಕ ಹೆಚ್ಚಳದಿಂದಾಗಿ ಒಂದೆಡೆ ಸರ್ಕಾರಕ್ಕೆ ಹೆಚ್ಚಿನ ಹಣ ಹರಿದು ಬರಲಿದೆ. ಇನ್ನೊಂದೆಡೆ ತಂಬಾಕು ಪದಾರ್ಥಗಳು ದುಬಾರಿಯಾಗಿ ಯುವಕರಿಗೆ ಕೈಗೆಟುಕುವುದು ಕಷ್ಟವಾಗಲಿದೆ. ಇದರಿಂದಾಗಿ ಯುವಜನತೆ ತಂಬಾಕು ಪದಾರ್ಥಗಳ ಸೇವನೆ ಚಟಕ್ಕೆ ಬೀಳುವುದು ಕಡಿಮೆಯಾಗಲಿದೆ ಎಂದು ಸಮಿತಿ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಆರೋಗ್ಯ ಸಚಿವಾಲಯದ ಶಿಫಾರಸಿನ ಮೇರೆಗೆ ಮೂರು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಇ-ಸಿಗರೇಟ್ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ. ಜಿಎಸ್ಟಿ ಜಾರಿಯಾದ ನಂತರವೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂಬುದನ್ನು ಸ್ಥಾಯಿ ಸಮಿತಿ ಅವಲೋಕಿಸಿದೆ. ಮಧ್ಯಪಾನ ಮತ್ತು ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಮಿತಿಯು ಒತ್ತಿ ಹೇಳಿದೆ.

























