ಬೆಂಗಳೂರು, ಆ.23 www.bengaluruwire.com: ರಾಜಧಾನಿ ಬೆಂಗಳೂರಿನ ಶೈಕ್ಷಣಿಕ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಸಲುವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ‘ನಮ್ಮೂರ ಹೆಮ್ಮೆ’ ಪೌರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಪ್ರತಿಭಾವಂತ ಯುವಕರು ನಮ್ಮೂರಿನ ನಿಜವಾದ ಹೆಮ್ಮೆ ಹಾಗೂ ಸಮಾಜದ ಬಹುದೊಡ್ಡ ಆಸ್ತಿ. ಅವರ ಕಠಿಣ ಪರಿಶ್ರಮವನ್ನು ಗುರುತಿಸಿ ಸನ್ಮಾನಿಸುವುದು ನಮಗೆ ಹೆಮ್ಮೆಯ ವಿಚಾರ. ಈ ಕಾರ್ಯಕ್ರಮವು ಸಮಾಜದ ಇತರೆ ಯುವಜನತೆಗೂ ಉನ್ನತ ಸಾಧನೆ ಮಾಡಲು ದೊಡ್ಡ ಪ್ರೇರಣೆಯಾಗಲಿದೆ,” ಎಂದು ಹೇಳಿದ್ದಾರೆ.
ಅರ್ಹತೆಯ ಮಾನದಂಡಗಳು:
ಬೆಂಗಳೂರಿನಲ್ಲಿ ನೆಲೆಸಿರುವ ಈ ಕೆಳಗಿನ ಶೈಕ್ಷಣಿಕ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಸನ್ಮಾನಕ್ಕೆ ಅರ್ಹರಾಗಿರುತ್ತಾರೆ:

ಎಸ್ಎಸ್ಎಲ್ಸಿ (SSLC): 621 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು.
ದ್ವಿತೀಯ ಪಿಯುಸಿ (PUC): 596 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು.
ಸೆಂಟ್ರಲ್ ಸಿಲಬಸ್ (CBSE/ICSE 10 & 12ನೇ ತರಗತಿ): 496 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು.
ಅರ್ಜಿ ಸಲ್ಲಿಕೆ ಮತ್ತು ಕಾರ್ಯಕ್ರಮದ ವಿವರ:
ಅರ್ಹ ವಿದ್ಯಾರ್ಥಿಗಳು ಆಗಸ್ಟ್ 25ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿ ವಿನಂತಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಗಸ್ಟ್ 29ರಂದು ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರು ಮತ್ತು ಕುಟುಂಬದವರಿಗೂ ಗೌರವಪೂರ್ವಕ ಆಹ್ವಾನ ನೀಡಲಾಗಿದ್ದು, ನಗರದ ನಾಗರಿಕರು ಪ್ರತಿಭೆಗಳ ಸಾಧನೆಯನ್ನು ಸಂಭ್ರಮಿಸಲು ಭಾಗಿಯಾಗಬೇಕೆಂದು ಸಚಿವರು ಕರೆ ನೀಡಿದ್ದಾರೆ.

















