ಬೆಂಗಳೂರು, ಆ. 21 www.bengaluruwire.com: ಸರ್ಕಾರಿ ಸಾಫ್ಟ್ವೇರ್ ಮತ್ತು ಡಿಜಿಟಲ್ ಸಹಿ (DSC) ದುರುಪಯೋಗಪಡಿಸಿಕೊಂಡು ಅಂದಾಜು 500 ಕೋಟಿ ರೂಪಾಯಿ ಮೌಲ್ಯದ 62.20 ಎಕರೆ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವ ಬೃಹತ್ ಭೂ ಹಗರಣವನ್ನು ಕರ್ನಾಟಕ ಲೋಕಾಯುಕ್ತ ಭೇದಿಸಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ಉಪವಿಭಾಗದ ಮಾಜಿ ಉಪವಿಭಾಗಾಧಿಕಾರಿ (AC) ದುರ್ಗಾಶ್ರೀ ಹಾಗೂ ಎಫ್ಡಿಎ ಮನೋಜ್ ಎಸ್. ಅವರಿಗೆ ಲೋಕಾಯುಕ್ತ ಪೀಠ ಸಮನ್ಸ್ ಜಾರಿ ಮಾಡಿದೆ.
ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈ ಗಂಭೀರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ (COMPT/UPLOK/BD/2430/2026) ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಉಮಾಮಹೇಶ್ ಹಾಗೂ ಹಾಲಪ್ಪ ವೈ. ಬಾಲದಂಡಿ ಅವರ ನೇತೃತ್ವದ ತಂಡ ದೊಡ್ಡಬಳ್ಳಾಪುರ ಎಸಿ ಕಚೇರಿ ಮತ್ತು ದೇವನಹಳ್ಳಿ ತಹಶೀಲ್ದಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹಗರಣದ ಪ್ರಮುಖ ಅಂಶಗಳು:

ಸ್ಥಳ ಮತ್ತು ಮೌಲ್ಯ: ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಮತ್ತು ಪ್ರಸನ್ನಹಳ್ಳಿ ಗ್ರಾಮಗಳ ಒಟ್ಟು 84 ಸರ್ವೇ ನಂಬರ್ಗಳ ಜಮೀನು. ಇದರ ಉಪ-ನೋಂದಣಾಧಿಕಾರಿ ಮೌಲ್ಯ ರೂ. 103.68 ಕೋಟಿ ಹಾಗೂ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು ರೂ. 500 ಕೋಟಿ.
ನಕಲಿ ಆದೇಶ ಸೃಷ್ಟಿ: ಇ-ಆಫೀಸ್ನಲ್ಲಿ ಸೃಷ್ಟಿಯಾಗದ ನಕಲಿ ಕಡತಗಳನ್ನು ಸಿದ್ಧಪಡಿಸಿ, ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ‘ಭೂಮಿ’ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲು ರವಾನಿಸಲಾಗಿತ್ತು.
ಕೋರ್ಟ್ ಆದೇಶಗಳ ದುರ್ಬಳಕೆ: ನಕಲಿ ಆದೇಶಗಳಲ್ಲಿ ಉಲ್ಲೇಖಿಸಲಾಗಿದ್ದ ಹೈಕೋರ್ಟ್ ರಿಟ್ ಅರ್ಜಿಗಳು ಮತ್ತು ಕೆಎಟಿ (KAT) ಕೇಸ್ ನಂಬರ್ಗಳು ಪರಿಶೀಲನೆ ವೇಳೆ ನಕಲಿ ಎಂದು ಸಾಬೀತಾಗಿದೆ.
ಡಿಜಿಟಲ್ ಸಿಗ್ನೇಚರ್ ದುರುಪಯೋಗ: ಎಫ್ಡಿಎ ಮನೋಜ್ ಲಾಗಿನ್ ಮೂಲಕ RTC ಮ್ಯಾನೇಜ್ಮೆಂಟ್ ಟೂಲ್ನಲ್ಲಿ ಅಪ್ಲೋಡ್ ಮಾಡಿ, ಎಸಿ ದುರ್ಗಾಶ್ರೀ ಅವರ ಬಯೋಮೆಟ್ರಿಕ್ ಹಾಗೂ ಡಿಜಿಟಲ್ ಸಹಿ ಬಳಸಿ ಯಾವುದೇ ಅಧಿಕೃತ ಅರ್ಜಿಗಳಿಲ್ಲದೆ ಖಾತೆ ಅನುಮೋದನೆ ನೀಡಲಾಗಿತ್ತು.
ಖಾಸಗಿ ಲ್ಯಾಪ್ಟಾಪ್: ಕಚೇರಿ ಕೆಲಸಕ್ಕೆ ಅಧಿಕೃತ ಕಂಪ್ಯೂಟರ್ ಬದಲಿಗೆ ಖಾಸಗಿ ಲ್ಯಾಪ್ಟಾಪ್ ಬಳಕೆ ಮಾಡಿರುವುದು ಪತ್ತೆಯಾಗಿದೆ.
ಭೂ ಅಕ್ರಮದ ವಿಸ್ತೀರ್ಣ:
ಒಟ್ಟು ಅಕ್ರಮ ಯತ್ನ: 84 ಸರ್ವೇ ನಂಬರ್ಗಳ 62 ಎಕರೆ 22 ಗುಂಟೆ.
ಅಕ್ರಮವಾಗಿ ಖಾತೆಯಾದ ಜಮೀನು: 72 ಸರ್ವೇ ನಂಬರ್ಗಳ 57 ಎಕರೆ 04.08 ಗುಂಟೆ.
ತಕರಾರಿನಿಂದ ಬಾಕಿ ಉಳಿದದ್ದು: 06 ಸರ್ವೇ ನಂಬರ್ಗಳ 03 ಎಕರೆ 01.08 ಗುಂಟೆ.
ಆದೇಶವಿಲ್ಲದೆ ನೇರ ಖಾತೆಯಾದದ್ದು: 06 ಸರ್ವೇ ನಂಬರ್ಗಳ 02 ಎಕರೆ 16 ಗುಂಟೆ.
ಸರ್ಕಾರಿ ವ್ಯವಸ್ಥೆ ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಆಸ್ತಿಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಮಾಜಿ ಎಸಿ ದುರ್ಗಾಶ್ರೀ ಹಾಗೂ ಎಫ್ಡಿಎ ಮನೋಜ್ ಸೆಪ್ಟೆಂಬರ್ 22 ರಂದು ಲೋಕಾಯುಕ್ತ ಪೀಠದ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಲಾಗಿದೆ.

















