ಬೆಂಗಳೂರು, ಜು.08 www.bengaluruwire.com: ರಾಜ್ಯ ಅರಣ್ಯ ಇಲಾಖೆಯು ತನ್ನ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಸಂದರ್ಶನ ಅಥವಾ ವನ್ಯಜೀವಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ನೀಡುವಂತಿಲ್ಲ ಎಂದು ಖಡಕ್ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಆನೆ, ಹುಲಿ, ಚಿರತೆ ಸೆರೆ ಕಾರ್ಯಾಚರಣೆಯ ವಿಡಿಯೋಗಳು, ಕ್ಯಾಮೆರಾ ಟ್ರ್ಯಾಪ್ ಚಿತ್ರಗಳು ಮತ್ತು ಸ್ಥಳದ ಮಾಹಿತಿಯನ್ನು (Location data) ಕೆಲ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ವೈಯಕ್ತಿಕ ಪ್ರಸಿದ್ಧಿಗಾಗಿ (Personal publicity) ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್ ರೀಲ್ಸ್ ಮುಂತಾದ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ವರ್ತನೆಗಳು ಇಲಾಖೆಯ ಗೌರವ, ಭದ್ರತೆ ಹಾಗೂ ಸಂವೇದನಾಶೀಲ ಮಾಹಿತಿಯ ರಕ್ಷಣೆಗೆ ವಿರುದ್ಧವಾಗಿವೆ ಎಂದು ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.
ಸೇವಾ ನಿಯಮ ಉಲ್ಲಂಘನೆ (Misconduct):
ಮಾಧ್ಯಮಗಳಿಗೆ, ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುವುದು ಹಾಗೂ ಇಲಾಖೆಯ ಕಾರ್ಯಾಚರಣೆಗಳ ಮಾಹಿತಿಗಳನ್ನು ಅನುಮತಿಯಿಲ್ಲದೆ ಪ್ರಸಾರ ಮಾಡುವುದನ್ನು ‘ಸೇವಾ ನಿಯಮ ಉಲ್ಲಂಘನೆ’ ಎಂದು ಪರಿಗಣಿಸಲಾಗುವುದು. ಇಂತಹ ಕೃತ್ಯವೆಸಗುವ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಅವರು ಜುಲೈ 06 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.

ಯಾವುದೇ ಮಾಹಿತಿ ಹಂಚಿಕೊಳ್ಳುವ ಮುನ್ನ ಅಥವಾ ಸಂದರ್ಶನ ನೀಡುವ ಮುನ್ನ ಸಂಬಂಧಪಟ್ಟ ಕಾರ್ಯಕ್ಷೇತ್ರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಪೂರ್ವಾನುಮತಿಯನ್ನು ನಿಯಮಾನುಸಾರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.




















