ಬೆಂಗಳೂರು, ಜು.04 www.bengaluruwire.com: ಮೂಡಲಪಾಳ್ಯದ ನಾಗರಬಾವಿ ಮುಖ್ಯರಸ್ತೆಯಲ್ಲಿ ಆರು ತಿಂಗಳಿಂದ ಕುಡಿಯುವ ನೀರು ಪೋಲಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಜಲಮಂಡಳಿ ನಿರ್ಲಕ್ಷ್ಯದ ವಿರುದ್ಧ ಬೆಂಗಳೂರು ವೈರ್ ವರದಿ ಪ್ರಕಟವಾಗುತ್ತಿದ್ದಂತೆ 3.45 ಗಂಟೆಯಲ್ಲಿ ಸಮಸ್ಯೆ ಬಗೆಹರಿದಿದೆ. ಇದು ಬೆಂಗಳೂರು ವೈರ್ ವರದಿ ಫಲಶ್ರುತಿ.

ಜು.03ರ ಸಂಜೆ 7 ಗಂಟೆಗೆ ವರದಿ ಪ್ರಸಾರ ಮಾಡಿತ್ತು. ಈ ವರದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೂಡಲೇ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಧಾವಿಸಿದ ಎಂಜಿನಿಯರ್ ಸರಬರಾಜಾಗುತ್ತಿದ್ದ ಕಾವೇರಿ ನೀರು ನಿಲ್ಲಿಸಿದರು. ಬಳಿಕ ಹಾಳಾದ ಪೈಪ್ ರಿಪೇರಿ ಕಾರ್ಯವನ್ನು ರಾತ್ರಿ 10.47ಕ್ಕೆಲ್ಲಾ ಮುಗಿಸಿ ಮೊದಲಿನಂತೆ ಜಲ್ಲಿ ಹಾಕಿ ರಸ್ತೆ ಸರಿಪಡಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಾಡಿಕೆಯ ಮುಂಗಾರು ಮಳೆ ಕೈಕೊಟ್ಟಿದ್ದು, ನಗರಕ್ಕೆ ನೀರು ಪೂರೈಸುವ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕಡೆಮೆಯಾಗುತ್ತಿದೆ. ಹೀಗಾಗಿ ಬೆಂಗಳೂರು ಜಲಮಂಡಳಿ ಒಂದೆಡೆ ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇನ್ನೊಂದೆಡೆ ಜಲಮಂಡಳಿ ಇಂಜಿನಿಯರ್ ಗಳು, ಸಿಬ್ಬಂದಿ ನಿರ್ಲಕ್ಷ್ಯ, ಬೇಜವಾಬ್ದಾರಿಗೆ ನಗರದ ಹಲವು ಕಡೆ ಹೀಗೆ ದಿನಂಪ್ರತಿ ಸಾವಿರಾರು ಲೀಟರ್ ಕುಡಿಯುವ ನೀರು ವೃಥಾ ಪೋಲಾಗುತ್ತಿದೆ.

ನಿನ್ನೆ ಸಂಜೆ (ಜು.03) 7 ಗಂಟೆ ಸಮಯಲ್ಲಿ “ಬೆಂಗಳೂರು ವೈರ್” “BW Special | ಬೆಂಗಳೂರು: ದೂರು ನೀಡಿ 6 ತಿಂಗಳಾದರೂ ಕಾವೇರಿ ನೀರಿನ ಪೈಪ್ ರಿಪೇರಿ ಮಾಡದ BWSSB; ರಸ್ತೆಯಲ್ಲೇ ಹರಿಯುತ್ತಿದೆ ಜೀವಜಲ!” ಶೀರ್ಷಿಕೆಯಡಿ ವಿಸ್ತ್ರತವಾಗಿ ಸುದ್ದಿ ಪ್ರಸಾರ ಮಾಡಿತ್ತು.


ಮೂಡಲಪಾಳ್ಯ ವೃತ್ತದಿಂದ ಕೂಗಳತೆ ದೂರದಲ್ಲಿರುವ ನಾಗರಬಾವಿ ಮುಖ್ಯರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಹಾಳಾಗಿ ಬರೋಬ್ಬರಿ 6 ತಿಂಗಳು ಕಳೆದಿತ್ತು. ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿರುವ ಬಗ್ಗೆ ಸ್ಥಳೀಯರು ಇದೇ ವರ್ಷದ ಜನವರಿ 8ರಂದೇ ಅಧಿಕಾರಿಗಳಿಗೆ ದೂರು ನೀಡಿದ್ದರು (Complaint number: 269089). ದೂರು ನೀಡಿ ಆರು ತಿಂಗಳು ಕಳೆದರೂ ಯಾರೊಬ್ಬ ಜಲಮಂಡಳಿ ಅಧಿಕಾರಿಗೂ ನಾಗರಬಾವಿ ಮುಖ್ಯರಸ್ತೆಯಲ್ಲಿ ಸಾವುರಾರು ಲೀಟರ್ ನೀರು ಹರಿದು ಹೋಗುತ್ತಿದ್ದರೂ ಕಣ್ಮುಚ್ಚಿ ಕೂತಿದ್ದರು. ಆದರೀಗ ಬೆಂಗಳೂರು ವೈರ್ ವರದಿಯ ಫಲಶ್ರುತಿಯಿಂದ ನೀರಿನ ಪೈಪ್ ಸರಿಪಡಿಸಲಾಗಿದೆ.
ಬೆಂಗಳೂರು ವೈರ್ ಸದಾ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ವತಂತ್ರ ಹಾಗೂ ವಾಸ್ತವ ಸುದ್ದಿಯ ತನ್ನ ಧ್ಯೇಯವನ್ನು ನಿರಂತರವಾಗಿ ಮುನ್ನೆಡಿಸಿಕೊಂಡು ಬರುತ್ತಿರುವುದಕ್ಕೆ ಈ ಪ್ರಕರಣ ಮತ್ತೊಂದು ಸಾಕ್ಷಿಯಾಗಿದೆ.





















