ತಿರುಪತಿ, ಆ.08 www.bengaluruwire.com : ತಿರುಚನೂರಿನ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ದಿನದಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಅಮ್ಮನವರ ದರ್ಶನ ಪಡೆದರು.
ದೇವಸ್ಥಾನದ ಆಸ್ಥಾನ ಮಂಟಪದಲ್ಲಿ ಶ್ರೀ ಪದ್ಮಾವತಿ ದೇವಿಯನ್ನು ವಿವಿಧ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಈ ವೈಭವೋಪೇತ ಅಲಂಕಾರದ ನಡುವೆ ದೇವಿಯ ದರ್ಶನ ಪಡೆದ ಭಕ್ತರು ಪುನೀತರಾದರು. ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಟಿಟಿಡಿ ವತಿಯಿಂದ ಸೌಭಾಗ್ಯಂ ಕಾರ್ಯಕ್ರಮ :
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವತಿಯಿಂದ ಈ ವರ್ಷ ‘ಸೌಭಾಗ್ಯಂ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಡಿ, ಆಂಧ್ರಪ್ರದೇಶ ಮತ್ತು ತೆಲಂಗಾಣದ 51 ಟಿಟಿಡಿ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ವ್ರತ ಆಚರಿಸುವ ಮಹಿಳಾ ಭಕ್ತರಿಗೆ ವಿಶೇಷ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ. ಈ ಕಿಟ್ನಲ್ಲಿ ಅಕ್ಷತೆ, ಅರ್ಶಿನ- ಕುಂಕುಮ, ಕಂಕಣ, ಶ್ರೀ ಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಪುಸ್ತಕ ಮತ್ತು ಬಳೆಗಳು ಸೇರಿವೆ.


ಚಿನ್ನದ ರಥದಲ್ಲಿ ದೇವಿಯ ಮೆರವಣಿಗೆ :
ಸಂಜೆ, ಶ್ರೀ ಪದ್ಮಾವತಿ ಅಮ್ಮನವರ ಉತ್ಸವ ಮೂರ್ತಿಯನ್ನು ಚಿನ್ನದ ರಥದಲ್ಲಿ ದೇಗುಲದ ಸುತ್ತಲಿನ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಶ್ರೀ ದೇವಿಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಭಾರಿ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಜಮಾಯಿಸುತ್ತಾರೆ.






















