ಬೆಂಗಳೂರು, ಜು.7 www.bengaluruwire.com : ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ 10 ಮಹಾನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರು ಜುಲೈ 8 ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷ ಎ.ಅಮೃತ್ ರಾಜ್ ತಿಳಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಬಿಬಿಎಂಪಿ ಅಧಿಕಾರಿ, ನೌಕರರ ಜೊತೆಗೆ ರಾಜ್ಯದ ಇತರ ಮಹಾನಗರ ಪಾಲಿಕೆ ನೌಕರರೂ ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾಸಂಘ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳ ಸ್ವಚ್ಛತಾ ಕಾರ್ಮಿಕರ ಮಹಾಸಂಘವು ಸಂಪೂರ್ಣ ಬೆಂಬಲ ನೀಡಿದೆ.
“ಕಳೆದ ಹಲವು ದಿನಗಳಿಂದ 12ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಈಗ ಹೋರಾಟಕ್ಕೆ ಇಳಿಯಲು ತೀರ್ಮಾನಿಸಲಾಗಿದೆ. ನಾಳೆ ನಮ್ಮ ಬೇಡಿಕೆಗಳ ಈಡೇರಿಕೆ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗದಿದ್ದರೆ, ನಮ್ಮ ಪ್ರತಿಭಟನೆ ಮುಂದುವರೆಯಲಿದೆ” ಎಂದು ಅಮೃತ್ ರಾಜ್ ಸ್ಪಷ್ಟಪಡಿಸಿದ್ದಾರೆ.


ನಾಳೆ ಪ್ರತಿ ಮಹಾನಗರ ಪಾಲಿಕೆಗಳ ಎದುರು ಕರ್ತವ್ಯಕ್ಕೆ ಹಾಜರಾಗದೆ ಅಧಿಕಾರಿ ಮತ್ತು ನೌಕರರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಮತ್ತೊಂದು ಸಂಘಟನೆಗೂ ಧರಣಿ ನಡೆಸಲು ಅವಕಾಶ ನೀಡಿರುವುದರಿಂದ 2 ರಿಂದ 3 ಸಾವಿರ ನಮ್ಮ ಪಾಲಿಕೆ ಅಧಿಕಾರಿ ಹಾಗೂ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದರು.
ಪ್ರಮುಖ ಬೇಡಿಕೆಗಳೇನು? :
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:
* 6000 ಖಾಲಿ ಹುದ್ದೆಗಳ ಭರ್ತಿ: ಸುಮಾರು 6000 ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿಕೊಳ್ಳಬೇಕು.
* ಇಲಾಖಾ ವಿಚಾರಣೆ ಕೈಬಿಡುವಿಕೆ: ಸಿಬ್ಬಂದಿಯ ಮೇಲೆ ಅಸಮರ್ಪಕ ಕಾರಣಗಳಿಗಾಗಿ ನಡೆಸುತ್ತಿರುವ ಕಾನೂನುಬಾಹಿರ ಇಲಾಖಾ ವಿಚಾರಣೆಗಳನ್ನು ಕೈಬಿಡಬೇಕು.
* ವಿಶೇಷ ಆಯುಕ್ತರ ನೇಮಕಾತಿ ನಿಲುಗಡೆ: ಯಾವುದೇ ವಲಯಕ್ಕೆ ವಿಶೇಷ ಆಯುಕ್ತರನ್ನು ನೇಮಿಸಬಾರದು.
* ಎರವಲು ಸೇವೆ ಅಧಿಕಾರಿಗಳ ವಾಪಸಾತಿ: ಕಾನೂನುಬಾಹಿರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಅವರ ಮಾತೃ ಇಲಾಖೆಗಳಿಗೆ ಹಿಂತಿರುಗಿಸಬೇಕು.
* ಆರೋಗ್ಯ ಸೌಲಭ್ಯ ಯೋಜನೆ ವಿಸ್ತರಣೆ: ಸರ್ಕಾರಿ ನೌಕರರಿಗೆ ಜಾರಿಗೊಳಿಸಲಾಗಿರುವ ಆರೋಗ್ಯ ಸೌಲಭ್ಯ ಯೋಜನೆಯನ್ನು ಜಿಬಿಎ ಅಧಿಕಾರಿ ಮತ್ತು ನೌಕರರಿಗೂ ವಿಸ್ತರಿಸಬೇಕು.
ಅಮಾನತು ಆದೇಶ ರದ್ದುಪಡಿಸಲು ಆಗ್ರಹ :
ಕಂದಾಯ ಇಲಾಖೆಯ ಅಧಿಕಾರಿ ಮತ್ತು ನೌಕರರು ತೀವ್ರ ಒತ್ತಡದಲ್ಲಿದ್ದು, ವ್ಯವಸ್ಥಿತವಾಗಿ ಸಮೀಕ್ಷೆ ನಡೆಸಲು ಕಾರ್ಯಯೋಜನೆ ರೂಪಿಸಬೇಕಾಗಿತ್ತು. ಆದರೆ, ಐಎಎಸ್ ಅಧಿಕಾರಿಗಳು ದಿನಕ್ಕೊಂದು ಹೊಸ ಕಾನೂನು ತಂದು ಗೊಂದಲ ಸೃಷ್ಟಿಸಿದ್ದಾರೆ. ಜಾತಿಗಣತಿ ಸಮೀಕ್ಷೆ ಗೊಂದಲವಾಗಲು ಅಧಿಕಾರಿಗಳೇ ಕಾರಣ ಎಂದು ಆರೋಪಿಸಲಾಗಿದೆ.
ಮೇಲಾಧಿಕಾರಿಗಳ ದಬ್ಬಾಳಿಕೆಯಿಂದ ನೌಕರರು ಬೇಸತ್ತಿದ್ದಾರೆ. ಆದ್ದರಿಂದ, ಅಮಾನತು ಮಾಡಲಾದ ಕಂದಾಯ ಇಲಾಖೆಯ ನೌಕರರ ಆದೇಶಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ತೀವ್ರವಾಗಿ ಆಗ್ರಹಿಸಿದ್ದಾರೆ.
ಕಚೇರಿಗೆ ಬರದಂತೆ ಉಚಿತ ಪ್ರವಾಸ, ಸಿನಿಮಾ ಟಿಕೆಟ್ ಆಫರ್ :
ಬಿಬಿಎಂಪಿಯ ಅಧಿಕಾರಿ ಹಾಗೂ ನೌಕರರು ಜು.08ರಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಹಿರಿಯ ಅಧಿಕಾರಿಗಳು ಕಚೇರಿಗೆ ಕರೆತರಲು ಬಿಬಿಎಂಪಿಯ ಚಾಲಕರು ಅಗತ್ಯ ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳ ಕೆಲಸಕ್ಕೆ ಜರೂರಾಗಿ ನಾಲ್ಕನೇ ದರ್ಜೆ ನೌಕರರು ಅವಶ್ಯಕ.
ಈ ಹಿನ್ನಲೆಯಲ್ಲಿ ಅವರುಗಳು ನಾಳೆ ಪರೋಕ್ಷವಾಗಿ ಸಂಘದ ಧರಣಿಗೆ ಬೆಂಬಲ ಸೂಚಿಸಿ ಕರ್ತವ್ಯಕ್ಕೆ ಹಾಜರಾಗದಂತೆ ನಿಯಂತ್ರಿಸಲು ಸಂಘದ ವತಿಯಿಂದ ಖಾಯಂ ಚಾಲಕರು ಹಾಗೂ ನಾಲ್ಕನೇ ದರ್ಜೆ ನೌಕರರಿಗೆ ನಿಮಿಷಾಂಭ ದೇವಸ್ಥಾನ, ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇವಸ್ಥಾನ, ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನಗಳಿಗೆ ಒಂದು ದಿನದ ಉಚಿವ ಪ್ರವಾಸ ಏರ್ಪಡಿಸಿದೆ. ಇನ್ನು ಕೆಲವು ನೌಕರರಿಗೆ ಉಚಿತ ಸಿನಿಮಾ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.























