ಬೆಂಗಳೂರು, ಜೂ.17 www.bengaluruwire.com: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ತಾಪಮಾನ ಏರಿಕೆಯ ಪರಿಣಾಮ ಜಲಾಶಯಗಳ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಜೂನ್ 1 ರಿಂದ 15ನೇ ತಾರೀಖಿನವರೆಗೆ ರಾಜ್ಯದಲ್ಲಿ ಶೇ. 21 ರಷ್ಟು ಮಳೆ ಕೊರತೆ ದಾಖಲಾಗಿದೆ.
ಇದರ ನೇರ ಪರಿಣಾಮ ರಾಜ್ಯದ 14 ಪ್ರಮುಖ ಜಲಾಶಯಗಳ ಮೇಲಾಗಿದ್ದು, ಜೂನ್ 15ರ ಅಂಕಿ-ಅಂಶಗಳ ಪ್ರಕಾರ ಡ್ಯಾಂಗಳಲ್ಲಿ ಕೇವಲ 23% ನೀರು ಮಾತ್ರ ಸಂಗ್ರಹವಾಗಿದೆ.
ಕರ್ನಾಟಕದ 14 ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯ 896 ಟಿಎಂಸಿ ಆಗಿದ್ದು, ಪ್ರಸ್ತುತ ಕೇವಲ 206 ಟಿಎಂಸಿ ನೀರು ಮಾತ್ರ ಉಳಿದುಕೊಂಡಿದೆ. ಇದು ಮುಂಬರುವ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಜಲಾನಯನ ಪ್ರದೇಶವಾರು ನೀರಿನ ಸಂಗ್ರಹದ ವಿವರ:

ಕೃಷ್ಣಾ ಜಲಾನಯನ ಪ್ರದೇಶ: ಉತ್ತರ ಕರ್ನಾಟಕ ಭಾಗದ ಜೀವನಾಡಿಯಾಗಿರುವ ಕೃಷ್ಣಾ ಜಲಾನಯನ ಪ್ರದೇಶದ 6 ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯ 423 ಟಿಎಂಸಿ. ಆದರೆ ಪ್ರಸ್ತುತ ಇಲ್ಲಿ ಕೇವಲ 94 ಟಿಎಂಸಿ ನೀರು ಮಾತ್ರ ಲಭ್ಯವಿದೆ.
ಕಾವೇರಿ ಜಲಾನಯನ ಪ್ರದೇಶ: ದಕ್ಷಿಣ ಕರ್ನಾಟಕದ 4 ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಕೇವಲ 34 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ದಿನ ಈ ಡ್ಯಾಂಗಳಲ್ಲಿ 77 ಟಿಎಂಸಿ ನೀರಿತ್ತು ಎಂಬುದನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ.
ಪ್ರಮುಖ ಜಲಾಶಯಗಳ ಇಂದಿನ ಸ್ಥಿತಿಗತಿ:
ಕರ್ನಾಟಕ ಜಲಸಂಪನ್ಮೂಲ ಮಾಹಿತಿ ವ್ಯವಸ್ಥೆ (KWRIS) ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬಿಡುಗಡೆ ಮಾಡಿರುವ ದೈನಂದಿನ ವರದಿಯ ಪ್ರಕಾರ ಪ್ರಮುಖ ಡ್ಯಾಂಗಳ ಸ್ಥಿತಿ ಈ ಕೆಳಗಿನಂತಿದೆ:
ಕೆಆರ್ ಎಸ್ (KRS) ಅಣೆಕಟ್ಟು: 124.8 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್ ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 81.32 ಅಡಿಗೆ ಕುಸಿದಿದೆ. ಹೀಗಾಗಿ ಜಲಾಶಯದಲ್ಲಿರುವ ಉಳಿಕೆ ನೀರನ್ನು ಬೆಂಗಳೂರು, ಮೈಸೂರು ಮತ್ತು ಮಂಡ್ಯದ ಕುಡಿಯುವ ನೀರಿನ ಅಗತ್ಯಗಳಿಗಾಗಿ ಮಾತ್ರ ಬಳಸಲು ಸರ್ಕಾರ ಆದ್ಯತೆ ನೀಡಿದೆ.
ತುಂಗಭದ್ರಾ ಡ್ಯಾಂ: 105.78 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಪ್ರಸ್ತುತ ಕೇವಲ 9.91 ಟಿಎಂಸಿ ನೀರಿದೆ. ಕೇವಲ 329 ಕ್ಯೂಸೆಕ್ಸ್ ಒಳಹರಿವು ಮಾತ್ರ ದಾಖಲಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಕಬಿನಿ ಜಲಾಶಯ: 65 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದ ನೀರಿನ ಮಟ್ಟ 33.69 ಅಡಿಗೆ ಭಾರೀ ಕುಸಿತ ಕಂಡಿದೆ.
ಹಾರಂಗಿ ಜಲಾಶಯ: ಒಟ್ಟು 129 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಸದ್ಯ 94.38 ಅಡಿ ನೀರಿದೆ.
ಸರ್ಕಾರದಿಂದ ಮುನ್ನೆಚ್ಚರಿಕಾ ಕ್ರಮ:
ಒಳಹರಿವು ಗಣನೀಯವಾಗಿ ಕಡಿಮೆಯಾಗಿರುವ ಕಾರಣ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕೃಷಿ ಚಟುವಟಿಕೆಗಳು ಹಾಗೂ ನಗರ ಪ್ರದೇಶದ ಕುಡಿಯುವ ನೀರಿನ ಪೂರೈಕೆಯನ್ನು ನಿರ್ವಹಿಸಲು ಕೃಷಿ ಮತ್ತು ನಗರಾಭಿವೃದ್ಧಿ ಇಲಾಖೆಗಳಾದ್ಯಂತ ಅಧಿಕೃತ ತುರ್ತು ಕಾರ್ಯಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಸಹ ಮುಂಗಾರು ಮಳೆ ಕೊರತೆ ಮುನ್ಸೂಚನೆ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವವಿದೆ.
ಈ ಹಿನ್ನಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಲಿ ನೀರು ಪೂರೈಕೆ ಮಾಡುತ್ತಿರುವ ಜಲಮೂಲಗಳ ಜೊತೆಗೆ ಪರ್ಯಾಯ ಜಲಮೂಲಗಳನ್ನು ಗುರ್ತಿಸಿ, ಅವುಗಳನ್ನು ಪರೀಕ್ಷೆ ಒಳಪಡಿಸಿ, ಸನ್ನದ್ಧ ಸ್ಥಿತಿಯಲ್ಲಿಡಲು ಹಾಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಚಿತ್ರ ಕೃಪೆ: ಜೆಮಿನಿ ಎಐ ಚಿತ್ರ)




















