ಬೆಂಗಳೂರು, ಜೂ.19 www.bengaluruwire.com: ಕರ್ನಾಟಕದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ (Parallel Electricity Distribution License) ಪಡೆಯಲು ಟಾಟಾ ಪವರ್ (Tata Power) ಸಂಸ್ಥೆ ಸಲ್ಲಿಸಿರುವ ಅರ್ಜಿಗಳು, ಅನುಬಂಧಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿವೆ.
ಈ ವಿಚಾರದಲ್ಲಿ ಕನ್ನಡಿಗರ ಭಾಷಾ ಹಿತಾಸಕ್ತಿ ಕಾಪಾಡುವಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿಫಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಟಾಟಾ ಪವರ್ ನಿರ್ಲಕ್ಷ್ಯ: ಸಾಮಾಜಿಕ ಹೊಣೆಗಾರಿಕೆ ಮರೆತ ಸಂಸ್ಥೆ:
ಈ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ ಅಧಿಕೃತ ಪತ್ರ ಬರೆದಿರುವ ಬಿಳಿಮಲೆ, “ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುವ ಯಾವುದೇ ಸಂಸ್ಥೆಯು ಈ ನೆಲದ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಭಾಷಾ ಹಕ್ಕುಗಳಿಗೆ ಗೌರವ ನೀಡುವುದು ಅದರ ಪ್ರಮುಖ ಸಾಮಾಜಿಕ ಹೊಣೆಗಾರಿಕೆಯಾಗಿರಬೇಕು. ಆದರೆ, ಟಾಟಾ ಪವರ್ ಸಂಸ್ಥೆ ಈ ನಿಟ್ಟಿನಲ್ಲಿ ಕನ್ನಡಿಗರ ಭಾಷಾ ಹಕ್ಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ,” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮನೆ-ಮನೆ ಸಮೀಕ್ಷೆಯಲ್ಲೂ ಇಂಗ್ಲಿಷ್: ಸಾಮಾನ್ಯ ಜನರಿಗೆ ಸಂಕಷ್ಟ:
ಸಂಸ್ಥೆಯ ಪ್ರತಿನಿಧಿಗಳು ಈಗಾಗಲೇ ನಾಗರಿಕರ ಮನೆ-ಮನೆಗೆ ಭೇಟಿ ನೀಡಿ ವಿದ್ಯುಚ್ಛಕ್ತಿ ಪೂರೈಕೆ ಕುರಿತಂತೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ, ಈ ವೇಳೆ ಬಳಸಲಾಗುತ್ತಿರುವ ಮಾಹಿತಿ ಸಂಗ್ರಹಣಾ ನಮೂನೆಗಳು (Data Collection Forms) ಕೂಡ ಕೇವಲ ಆಂಗ್ಲ ಭಾಷೆಯಲ್ಲಿವೆ.
”ದಾಖಲೆಗಳು ಇಂಗ್ಲಿಷ್ನಲ್ಲಿರುವುದರಿಂದ ಸಾಮಾನ್ಯ ಕನ್ನಡಿಗರು ಈ ನಮೂನೆಗಳ ಉದ್ದೇಶ ಹಾಗೂ ಅದರ ಪರಿಣಾಮಗಳನ್ನು ಅರ್ಥೈಸಿಕೊಳ್ಳಲಾಗದೆ ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಇದು ತೀವ್ರ ಆಕ್ಷೇಪಣೀಯ,” ಎಂದು ಡಾ. ಬಿಳಿಮಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿಯೇ ಮಾಹಿತಿ ಒದಗಿಸಲು ಆಗ್ರಹಿಸಿ: ಕನ್ನಡಿಗರಿಗೆ ಕರೆ:
ಸಂಸ್ಥೆಯ ಪ್ರತಿನಿಧಿಗಳು ಮನೆಗೆ ಭೇಟಿ ನೀಡಿದಾಗ ಯಾವುದೇ ಮಾಹಿತಿ, ಅರ್ಜಿ ಅಥವಾ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ನೀಡಲು ಮುಂದಾದರೆ, ನಾಗರಿಕರು ಅದನ್ನು ತಿರಸ್ಕರಿಸಿ ‘ಕನ್ನಡದಲ್ಲಿಯೇ ಒದಗಿಸುವಂತೆ’ ಕಡ್ಡಾಯವಾಗಿ ಆಗ್ರಹಿಸಬೇಕು ಎಂದು ನಾಡಿನ ಜನತೆಗೆ ಬಿಳಿಮಲೆ ಕರೆ ನೀಡಿದ್ದಾರೆ.
”ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕನ್ನಡದಲ್ಲಿ ಪಡೆಯುವುದು ಕನ್ನಡಿಗರ ಹಕ್ಕು. ವಿದ್ಯುತ್ ಬಿಲ್ಲುಗಳು ಪ್ರಮುಖ ದಾಖಲೆಗಳಾಗಿರುವುದರಿಂದ, ಬಳಕೆದಾರರು ಈ ವಿಚಾರದಲ್ಲಿ ಹೆಚ್ಚು ಜಾಗೃತರಾಗಿರಬೇಕು,” ಎಂದು ಅವರು ಕಿವಿಮಾತು ಹೇಳಿದ್ದಾರೆ.
ಕೆಇಆರ್ಸಿಗೆ ಎಚ್ಚರಿಕೆ:
ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು, ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಇಂತಹ ಮಹತ್ವದ ದಾಖಲೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೂ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.




















