ಬೆಂಗಳೂರು, ಜೂ. 20 www.bengaluruwire.com: ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಸಜ್ಜಾಗಿರುವ ಎಂಟನೇ ಬ್ಯಾಚ್ನ ಅಗ್ನಿವೀರರ (8th Batch of Agniveers) ನಿರ್ಗಮನ ಪಥಸಂಚಲನ (Passing Out Parade) ಕಾರ್ಯಕ್ರಮವು ಬೆಂಗಳೂರಿನ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ (ನಾರ್ತ್) ನಲ್ಲಿ ಇಂದು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅದ್ದೂರಿಯಾಗಿ ನಡೆಯಿತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಅಗ್ನಿಪಥ್’ (Agnipath Scheme) ಯೋಜನೆಯಡಿ ದಾಖಲಾದ ಈ ಅಗ್ನಿವೀರರ ತರಬೇತಿಯು 2026ರ ಜನವರಿ 05 ರಂದು ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ (ನಾರ್ತ್) ನಲ್ಲಿ ಪ್ರಾರಂಭವಾಗಿತ್ತು. ಭಾರತೀಯ ಸೇನೆಯ ಎಲ್ಲಾ ಆರ್ಮಿ ಸರ್ವಿಸ್ ಕಾರ್ಪ್ಸ್ ಘಟಕಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ‘ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್’ಗಳಿಗೆ (Mechanical Transport Drivers) ಅತ್ಯುನ್ನತ ಗುಣಮಟ್ಟದ ತರಬೇತಿ ನೀಡುವ ಪ್ರಮುಖ ಸಂಸ್ಥೆಗಳಲ್ಲಿ ಬೆಂಗಳೂರಿನ ಎಎಸ್ಸಿ ಸೆಂಟರ್ ಮುಂಚೂಣಿಯಲ್ಲಿದೆ.
ಅಗ್ನಿವೀರರ ಪೋಷಕರಿಗೆ ‘ಗೌರವ ಪದಕ’:
ಜೂನ್ 20ರಂದು ನಡೆದ ನಿರ್ಗಮನ ಕಾರ್ಯಕ್ರಮದಲ್ಲಿ ಯುವ ಅಗ್ನಿವೀರರ ಆಕರ್ಷಕ ಪಥಸಂಚಲನ ಜರುಗಿತು. ಎಎಸ್ಸಿ ಸೆಂಟರ್ (ನಾರ್ತ್) ಕಮಾಂಡೆಂಟ್ ಆದ ಬ್ರಿಗೇಡಿಯರ್ ವಿಕ್ರಮ್ ಶೇಖಾವತ್ (ಸೇನಾ ಪದಕ) ಅವರು ತರಬೇತಿಯಲ್ಲಿ ಅತ್ಯುತ್ತಮ ಸಾಧನೆಗೈದ ಅಗ್ನಿವೀರರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರದ ಸೇವೆಗೆ ತಮ್ಮ ಮಕ್ಕಳನ್ನು ಸಮರ್ಪಿಸಿದ ಅಗ್ನಿವೀರರ ಹೆಮ್ಮೆಯ ಪೋಷಕರ ಅಚಲ ಬೆಂಬಲ ಮತ್ತು ಬದ್ಧತೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲು ವಿಶೇಷ ‘ಗೌರವ ಪದಕ’ (Gaurav Padak) ಸಮಾರಂಭವನ್ನು ಈ ವೇಳೆ ಆಯೋಜಿಸಲಾಗಿತ್ತು.

ಸೇನಾ ಮೌಲ್ಯಗಳನ್ನು ಅಳವಡಿಸಿಕೊಳ್ಳಿ:
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬ್ರಿಗೇಡಿಯರ್ ವಿಕ್ರಮ್ ಶೇಖಾವತ್, ತರಬೇತಿ ಪೂರ್ಣಗೊಳಿಸಿದ ಯುವ ಪಡೆಯನ್ನು ಅಭಿನಂದಿಸಿದರು. “ಭಾರತೀಯ ಸೇನೆಯ ಪ್ರಮುಖ ಮೌಲ್ಯಗಳಾದ ಕರ್ತವ್ಯ, ಘನತೆ, ಸಮಗ್ರತೆ, ನಿಷ್ಠೆ, ನಿಸ್ವಾರ್ಥ ಸೇವೆ, ಧೈರ್ಯ ಮತ್ತು ಪರಸ್ಪರ ಗೌರವವನ್ನು ಜೀವನದ ಪ್ರತಿ ಹಂತದಲ್ಲೂ ಕಟ್ಟುನಿಟ್ಟಾಗಿ ಎತ್ತಿಹಿಡಿಯಬೇಕು” ಎಂದು ಅವರು ಅಗ್ನಿವೀರರಿಗೆ ಹುರಿದುಂಬಿಸಿದರು.





















