ಬೆಂಗಳೂರು, ಜೂ.19 www.bengaluruwire.com: ರಾಜಧಾನಿಯಲ್ಲಿ ಬಿಎಂಟಿಸಿ (BMTC) ಬಸ್ಸುಗಳ ಮರಣ ಮೃದಂಗ ಮುಂದುವರಿದಿದೆ. ಉಲ್ಲಾಳ ವಾರ್ಡಿನ ಮಂಗನಹಳ್ಳಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ 57 ವರ್ಷದ ವ್ಯಕ್ತಿಯೊಬ್ಬರ ಮೇಲೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಜೂನ್ 18ರ ರಾತ್ರಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಉಲ್ಲಾಳ ನಿವಾಸಿ ರಾಜು (57 ವರ್ಷ) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಸುಮಾರು 7.30ರ ಸಂದರ್ಭದಲ್ಲಿ ಕೆ.ಆರ್. ಮಾರುಕಟ್ಟೆಯಿಂದ ಉಲ್ಲಾಳ ಉಪನಗರದ ಕಡೆಗೆ ತೆರಳುತ್ತಿದ್ದ ಡಿಪೋ 16ರ ಗುತ್ತಿಗೆ ಆಧಾರಿತ ಎಲೆಕ್ಟ್ರಿಕ್ ಬಸ್ (KA51 AK 7336), ಮಂಗನಹಳ್ಳಿ ಕ್ರಾಸ್ ಬರುವ ಮುನ್ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಬಲ ತಿರುವು ಪಡೆಯುತ್ತಿತ್ತು. ಈ ವೇಳೆ ರಸ್ತೆ ದಾಟುತ್ತಿದ್ದ ರಾಜು ಅವರಿಗೆ ಡಿಕ್ಕಿ ಹೊಡೆದ ಬಸ್, ಅವರ ಹೊಟ್ಟೆಯ ಮೇಲೆಯೇ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಹೆದರಿ ಪರಾರಿಯಾದ ಬಿಎಂಟಿಸಿ ಸಿಬ್ಬಂದಿ:
ಅಪಘಾತ ಸಂಭವಿಸಿದ ಕೂಡಲೇ ಬಸ್ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು. ಆದರೆ ಘಟನೆಯ ಭೀಕರತೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಬೆದರಿದ ಬಸ್ ಚಾಲಕ, ನಿರ್ವಾಹಕ ಹಾಗೂ ತಪಾಸಣೆಗೆ ಬಂದಿದ್ದ ಸಿಬ್ಬಂದಿ ಬಸ್ನಿಂದ ಇಳಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ‘ಬೆಂಗಳೂರು ವೈರ್’ಗೆ (BengaluruWire) ತಿಳಿಸಿದ್ದಾರೆ. ರಾತ್ರಿ 8.20ರ ಸುಮಾರಿಗೆ ನಿರ್ವಾಹಕರು ಘಟನೆಯ ಕುರಿತು ಬಿಎಂಟಿಸಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳೀಯರ ಆಕ್ರೋಶ ಹಾಗೂ ಆರೋಪ:
ಇದೇ ಪ್ರದೇಶದಲ್ಲಿ ಈ ಹಿಂದೆಯೂ ಬಿಎಂಟಿಸಿ ಬಸ್ ಹರಿದು ತಾಯಿ-ಮಗಳು ಪ್ರಾಣ ಕಳೆದುಕೊಂಡಿದ್ದರು. ಈ ಭಾಗದಲ್ಲಿ ಬಿಎಂಟಿಸಿ ಚಾಲಕರು ಅತಿವೇಗ ಹಾಗೂ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಾರೆ. ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ, ಒಮ್ಮೆಯೇ ಒಂದರ ಹಿಂದೊಂದರಂತೆ ಸಾಲುಗಟ್ಟಿ ಬರುತ್ತವೆ. ಇದರಿಂದ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಸಿಬ್ಬಂದಿ ಕೂಡ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹ:
ನಿರಂತರ ಅಪಘಾತಗಳ ಹಿನ್ನೆಲೆಯಲ್ಲಿ, ಜನರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ರಸ್ತೆ ನಿಯಮಾವಳಿ ಪ್ರಕಾರ ದುರ್ಘಟನೆ ನಡೆದ ಸ್ಥಳದಲ್ಲಿ ತಕ್ಷಣವೇ ‘ರಸ್ತೆ ಉಬ್ಬು’ (Speed Breakers) ಅಳವಡಿಸುವಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹಾಗೂ ನಗರ ಸಂಚಾರಿ ಪೊಲೀಸ್ ಇಲಾಖೆಯನ್ನು ನಾಗರಿಕರು ಹಾಗೂ ಸ್ಥಳೀಯ ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳು ಒತ್ತಾಯಿಸಿವೆ.
ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ:
ಘಟನೆಯ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಂತಹ ಭೀಕರ ಅಪಘಾತ ನಡೆದರೂ ಬಿಎಂಟಿಸಿ 16ನೇ ಘಟಕದ ಅಧಿಕಾರಿಗಳಿಗಾಗಲೀ, ಬಿಎಂಟಿಸಿ ಅಪಘಾತ ಘಟಕದವರ ಬಳಿಯಾಗಲೀ ಘಟನೆಯ ಸಂಬಂಧ ಸೂಕ್ತ ಮಾಹಿತಿ, ಅಪಘಾತ ನಂತರದ ವಿಡಿಯೋ, ಫೊಟೊಗಳಾಗಲಿ ಇಲ್ಲದಿರುವುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಅವರ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುವಂತಿದೆ. ಇದೇ ಭಾಗದಲ್ಲೇ ಪದೇ ಪದೇ ಬಿಎಂಟಿಸಿ ಬಸ್ ಗಳಿಂದ ಅಪಘಾತಗಳಾಗುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. (Main Image Recreated from Gemini AI – ಸಾಂದರ್ಭಿಕ ಚಿತ್ರ)




















