ಬೆಂಗಳೂರು, ಜೂ.19 www.bengaluruwire.com: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದು, ಹಲವು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರಿಗೆ ನಿಗಮಗಳು ಹಾಗೂ ವಿವಿಧ ಪ್ರಮುಖ ಇಲಾಖೆಗಳಲ್ಲಿ ಹೊಸ ಅಧಿಕಾರಿಗಳನ್ನು ನೇಮಿಸಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ಪಿ. ಮಣಿವಣ್ಣನ್ ಅವರಿಗೆ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಲಾಗಿದೆ. ಹಾಗೆಯೇ, ರಘುನಂದನ್ ಮೂರ್ತಿ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದ್ದು, ಇದರ ಜೊತೆಗೆ ಖಜಾನೆ ಇಲಾಖೆಯ ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ.
ವಿವಿಧ ಇಲಾಖೆಗಳಿಗೆ ನೇಮಕಗೊಂಡ ಅಧಿಕಾರಿಗಳ ಸಂಪೂರ್ಣ ವಿವರ ಹೀಗಿದೆ:

ಎನ್.ವಿ. ಪ್ರಸಾದ್: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ
ತುಳಸಿ ಮದ್ದಿನೇನಿ: ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ
ಡಿ. ರಂದೀಪ್: ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ
ಕೆ.ಬಿ. ಶಿವಕುಮಾರ್: ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ವಿ. ರಾಮ್ ಪ್ರಸಾತ್ ಮನೋಹರ್: ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ
ಬಿ.ಸಿ. ಸತೀಶ: ಕೃಷಿ ಇಲಾಖೆ ಆಯುಕ್ತ
ಅಕ್ರಂ ಪಾಷ: ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ
ಕೆ. ನಿತೀಶ್: ಪೌರಾಡಳಿತ ನಿರ್ದೇಶನಾಲಯದ ವಿಶೇಷ ಆಯುಕ್ತ
ಜ್ಞಾನೇಂದ್ರ ಕುಮಾರ್ ಗಂಗ್ವಾರ್: ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮದ ನಿರ್ದೇಶಕ
ಗಜಾನನ ಬಲೆ: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ
ದೆಹಲಿ ಕರ್ನಾಟಕ ಭವನದಲ್ಲಿ ಮಹತ್ವದ ಬದಲಾವಣೆ:
ರಾಷ್ಟ್ರ ರಾಜಧಾನಿಯಲ್ಲಿರುವ ದೆಹಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತೆ ಇಮ್ ಕಾಂಗ್ಲಾ ಜಮೀರ್ ಅವರಿಗೆ ಅದೇ ಭವನದ ಸಮನ್ವಯ ವಿಭಾಗದ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇನ್ನು ತೆರವಾದ ಸ್ಥಾನಿಕ ಆಯುಕ್ತರ ಹುದ್ದೆಗೆ ಸಮೀರ್ ಶುಕ್ಲಾ ಅವರನ್ನು ಸರ್ಕಾರ ನೂತನವಾಗಿ ನೇಮಿಸಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಪ್ರಮುಖ ಆಡಳಿತಾತ್ಮಕ ಬದಲಾವಣೆ ಇದಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ಇದೆ.




















