ಬೆಂಗಳೂರು, ಜೂ.19 www.bengaluruwire.com: ರಾಜಧಾನಿ ಬೆಂಗಳೂರಿನ ವರ್ತೂರು ಬೆಳಗೆರೆಯಲ್ಲಿರುವ ಜಲಮಂಡಳಿಯ (BWSSB) ತ್ಯಾಜ್ಯ ನೀರು ಸಂಸ್ಕರಣಾ (STP) ಘಟಕದಲ್ಲಿನ
40 ಅಡಿ ಆಳದ ಎಸ್ಟಿಪಿ ಟ್ಯಾಂಕ್ಗೆ ಆಯತಪ್ಪಿ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
40 ಅಡಿ ಆಳದ ಟ್ಯಾಂಕ್ ಒಳಗೆ ಬಿದ್ದ ಮೂವರು ಕಾರ್ಮಿಕರು, ಓರ್ವನ ರಕ್ಷಣೆ:
ಗುರುವಾರ ಸಂಜೆ ಕಾರ್ಮಿಕರು ಎಸ್ಟಿಪಿ ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ 40 ಅಡಿ ಆಳದ ಟ್ಯಾಂಕ್ನೊಳಗೆ ಬಿದ್ದಿದ್ದಾರೆ. ಒಟ್ಟು ಮೂವರು ಕಾರ್ಮಿಕರು ಟ್ಯಾಂಕ್ಗೆ ಬಿದ್ದಿದ್ದು, ಈ ಪೈಕಿ ಓರ್ವನನ್ನು ತಕ್ಷಣವೇ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ದುರದೃಷ್ಟವಶಾತ್ ಬ್ರಿಜೇಶ್ ಮತ್ತು ಅಖಿಲೇಶ್ ಎಂಬ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ವಿಷಾನಿಲದಿಂದ ಅಡ್ಡಿಯಾದ ರಕ್ಷಣಾ ಕಾರ್ಯಾಚರಣೆ:
ಟ್ಯಾಂಕ್ನೊಳಗೆ ತ್ಯಾಜ್ಯ ನೀರು ರಭಸವಾಗಿ ಹರಿಯುತ್ತಿರುವುದು ಹಾಗೂ ಭಾರೀ ಪ್ರಮಾಣದ ವಿಷಾನಿಲ ತುಂಬಿಕೊಂಡಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಗ್ನಿಶಾಮಕ ದಳದ ಜೊತೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ರಕ್ಷಣಾ ಸಿಬ್ಬಂದಿ ಟ್ಯಾಂಕ್ನೊಳಗೆ ಇಳಿಯುವ ಮುನ್ನ, ವಿಷಾನಿಲದ ಪ್ರಭಾವವನ್ನು ತಗ್ಗಿಸಲು ಟ್ಯಾಂಕ್ನೊಳಗೆ ಆಮ್ಲಜನಕ (Oxygen) ತುಂಬುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆಮ್ಲಜನಕ ತುಂಬಿದ ತಕ್ಷಣವೇ ಎನ್ಡಿಆರ್ಎಫ್ ಸಿಬ್ಬಂದಿ ಕಾರ್ಯಾಚರಣೆಗಿಳಿಯಲಿದ್ದಾರೆ.

ಸ್ಥಳದಲ್ಲಿಯೇ ಜಲಮಂಡಳಿ ಅಧ್ಯಕ್ಷರ ಮೊಕ್ಕಾಂ – ಸಮಗ್ರ ತನಿಖೆಗೆ ಆದೇಶ:
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ಮಂಜುಳಾ ಐಎಎಸ್ ಅವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಜಲಮಂಡಳಿಯ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲೇ ಬಿಡುಬಿಟ್ಟಿದ್ದು, ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತಿದೆ.
ಈ ದುರಂತದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಡಾ. ಮಂಜುಳಾ ಅವರು, ಘಟನೆಯ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. “ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ಮೃತದೇಹಗಳನ್ನು ತ್ವರಿತವಾಗಿ ಹೊರತೆಗೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಘಟನೆಯಲ್ಲಿ ಯಾರದ್ದೇ ನಿರ್ಲಕ್ಷ್ಯವಿದ್ದರೂ ಅಂತಹ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಹಿರಿಯ ಅಧಿಕಾರಿಗಳನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿ, ಜೂನ್ 19, 2026 ರಂದು ಅಧಿಕೃತ ಆದೇಶ ಹೊರಡಿಸಿದೆ.
ತನಿಖಾ ಸಮಿತಿಯ ಸದಸ್ಯರು:
- ಡಾ. ಕೆ.ಎನ್. ರಾಜೀವ್: ಮುಖ್ಯ ಅಭಿಯಂತರರು
- ಡಾ. ಕೆ.ಎಸ್. ರೇಣುಕುಮಾರ್: ಅಪರ ಮುಖ್ಯ ಅಭಿಯಂತರರು
- ವಿನುತ ಡಿ.ಎಸ್.: ಉಪ ಮುಖ್ಯ ಅಭಿಯಂತರರು
ವರದಿಗೆ ಗಡುವು:
ಈ ಸಮಿತಿಯು ದುರ್ಘಟನೆಗೆ ನಿಖರ ಕಾರಣವೇನು ಮತ್ತು ಈ ಅವಘಡಕ್ಕೆ ಯಾರು ಜವಾಬ್ದಾರಿ ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಿದೆ. ಘಟನೆಯ ವಾಸ್ತವಾಂಶಗಳನ್ನೊಳಗೊಂಡ ನೈಜ ವರದಿಯನ್ನು ಜೂನ್ 20 ರಂದು ಮಧ್ಯಾಹ್ನ 12:00 ಗಂಟೆಯೊಳಗಾಗಿ ಜಲಮಂಡಳಿ ಅಧ್ಯಕ್ಷರಿಗೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.



















