ಬೆಂಗಳೂರು, (www.bengaluruwire.com) : ಕಾಶ್ಮೀರದ ತೀತ್ವಾಲದ ಗಡಿನಿಯಂತ್ರಣ ರೇಖೆಯ ಬಳಿ ನಿರ್ಮಿಸುತ್ತಿರುವ ಶ್ರೀ ಶಾರದಾ ದೇವಿಯ ದೇವಸ್ಥಾನ ಕಾಮಗಾರಿ ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ ಅಕ್ಟೋಬರ್ ವೇಳೆಗೆ ಪೂರ್ಣವಾಗಲಿದೆ ಎಂದು ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ (Save Sharada Committee) ತಿಳಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಶಿಸಿರುವ ಮೂಲ ಶಾರದಾ ದೇವಿ ದೇವಸ್ಥಾನಕ್ಕೆ ಭಾರತೀಯರು ಯಾತ್ರೆ ಆರಂಭಿಸುವ ಉದ್ದೇಶದಿಂದ ಕುಪ್ವಾರ ಜಿಲ್ಲೆಯ ತೀತ್ವಾಲ್ ನಲ್ಲಿನ ಎಲ್ ಒಸಿ ಭಾಗದಲ್ಲಿ ಶಾರದಾ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಗಡಿನಿಯಂತ್ರಣ ರೇಖೆಯ ಸ್ಥಳದಲ್ಲಿ ಯಾವುದೇ ಸಮಸ್ಯೆ ಆಗದಿದ್ದಲ್ಲಿ ಅಕ್ಟೋಬರ್ ವೇಳೆಗೆ ಶ್ರೀ ಶಾರದಾ ದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪೂರ್ಣವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಹೊರವಲಯದ ಸೀಗೇಹಳ್ಳಿಯಲ್ಲಿ 12*12 ಅಡಿ ವಿಸ್ತೀರ್ಣದ ದೇವಸ್ಥಾನಕ್ಕೆ ಅಗತ್ಯವಾದ ಕಲ್ಲಿನ ಕಂಬಗಳು, ಹಾಗೂ ಕಲ್ಲಿನ ಗೋಡೆಯ ನಿರ್ಮಾಣ ಕೆಲಸಗಳು ಭರದಿಂದ ಸಾಗಿವೆ. ಮೊದಲ ಹಂತದಲವಾಗಿ ಈ ತಿಂಗಳಲ್ಲಿ ಇಲ್ಲಿ ಕೆತ್ತನೆಯಾದ ಕಂಬಗಳನ್ನು ಜಮ್ಮುವಿನ ತನಕ ಟ್ರಕ್ ನಲ್ಲಿ ಸಾಗಿಸಲಾಗುತ್ತದೆ. ಸಾಗಣೆಗೆ ಅನುಕೂಲವಾಗುವಂತೆ ಕಲ್ಲಿನ ನಿರ್ಮಾಣಗಳನ್ನು 6-7 ಅಡಿಗಳಾಗಿ ವಿಭಜಿಸಲಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ಒಟ್ಟು 1.20 ಕೋಟಿ ರೂ. ವೆಚ್ಚವಾಗುತ್ತಿದೆ. ದಾನಿಗಳಿಂದ ಈ ಹಣ ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ದೇವಸ್ಥಾನದ ಜೊತೆ ಜೊತೆಗೆ 1947ಕ್ಕೆ ಮುಂಚೆ ಇದೇ ಸ್ಥಳದಲ್ಲಿ ಸಿಖ್ಖರ ಗುರುದ್ವಾರವಿದ್ದು ನಾಶವಾಗಿತ್ತು. ಹಾಗಾಗಿ ದೇವಸ್ಥಾನದ ಆವರಣದಲ್ಲಿ ಚಿಕ್ಕದಾಗಿ ಗುರುದ್ವಾರ ನಿರ್ಮಿಸಲಾಗುತ್ತಿದೆ. ಶಾರದಾ ದೇವಿ ದೇವಸ್ಥಾನದಲ್ಲಿ ಒಟ್ಟು ನಾಲ್ಕು ದಿಕ್ಕಿನಲ್ಲೂ ನಾಲ್ಕು ದ್ವಾರಗಳಿರಲಿದೆ. ಇವು ಸನಾತನ ಧರ್ಮದ ನಾಲ್ಕು ವೇದಗಳನ್ನು ಸಂಕೇತಿಸಲಿವೆ. ದೇವಸ್ಥಾನ ಒಳಾವರಣದ ಕೆಳಭಾಗ ಮತ್ತು ಮೇಲ್ಭಾಗ ಮರದ ಹೊದಿಕೆಗಳಿರಲಿದೆ. ಶೃಂಗೇರಿ ಶಂಕರಮಠದಿಂದ ನೀಡಲಾಗುವ ಪಂಚಲೋಹದ ಶಾರದಾ ದೇವಿ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗುವುದು. ವಾಸ್ತು ಪ್ರಕಾರ ಈ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂದು ರವೀಂದ್ರ ಪಂಡಿತ್ ಮಾಹಿತಿ ನೀಡಿದರು.

ಕರ್ನಾಟಕದಲ್ಲಿರುವ ಶೃಂಗೇರಿ ಶಂಕರಮಠದಿಂದ ತೀತ್ವಾಲ್ ನಲ್ಲಿನ ದೇವಸ್ಥಾನಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಸದ್ಯ ದೇವಸ್ಥಾನ ಪಾಯದ ಕೆಲಸ ಮುಗಿದಿದೆ. ಈ ದೇವಸ್ಥಾನ ನಿರ್ಮಾಣದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಮೂಲ ಶಾರದಾ ಪೀಠ ಸ್ಥಳಕ್ಕೆ ಭಾರತೀಯರು ತೀರ್ಥಯಾತ್ರೆ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.
1947ರ ಪೂರ್ವದಲ್ಲಿ ಭಾರತ – ಪಾಕಿಸ್ತಾನ ವಿಭಜನೆಗೆ ಮುಂಚೆ ಶ್ರೀ ಶಾರದಾ ದೇವಿ ದೇವಸ್ಥಾನಕ್ಕೆ ಪ್ರತಿವರ್ಷ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದರು. ತೀತ್ವಾಲ್ ಪ್ರದೇಶದಲ್ಲಿ ನಿರ್ಮಿಸುತ್ತಿರುವ ದೇವಸ್ಥಾನ ಸ್ಥಳದಿಂದಲೇ ತೀರ್ಥಯಾತ್ರೆ ಆರಂಭವಾಗುತ್ತಿತ್ತು. ಹಾಗಾಗಿ ಆ ಬೇಸ್ ಕ್ಯಾಂಪ್ ನಲ್ಲಿಯೇ ಶಾರದಾ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಪಾಕಿಸ್ಥಾನದಲ್ಲಿ ಭಾರತದಿಂದ ಸಿಖ್ಖರು ಕರ್ತಾಪುರ ಯಾತ್ರೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಹಿಂದುಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಮಾತೆಯ ಪುಣ್ಯಸ್ಥಳಕ್ಕೆ ಭೇಟಿ ನೀಡಲು ಎಲ್ ಒಸಿ ಪರ್ಮಿಟ್ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕಿದೆ ಎಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ ಟ್ರಸ್ಟ್ ನ ಸುರೇಂದರ್ ಮಿರ್ಜಾ, ಶಾರದಾ ಸಂರಕ್ಷಣಾ ಸಮಿತಿಯ ಕಾರ್ಯಕರ್ತರಾದ ಮಂಜುನಾಥ ಶರ್ಮ, ರವಿಂದರ್ ಟೀಕು ಉಪಸ್ಥಿತರಿದ್ದರು.






















