ಬೆಂಗಳೂರು,ಜು.09 www.bengaluruwire.com: ರಾಜಧಾನಿಯಲ್ಲಿ ಮಳೆಗಾಲ ಬಂತೆಂದರೆ ಸಾಕು ಪ್ರವಾಹ ಭೀತಿ ಎದುರಾಗುತ್ತೆ. ಇದನ್ನು ತಪ್ಪಿಸಲು ಹಾಗೂ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಬಫರ್ ವಲಯವನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಹೆಜ್ಜೆ ಇಟ್ಟಿದೆ.
ಬೆಳ್ಳಂದೂರು ವೇಸ್ಟ್ ವಿಯರ್/ಔಟ್ಲೆಟ್ನಿಂದ ಓಲ್ಡ್ ಏರ್ಪೋರ್ಟ್ ರಸ್ತೆ ಸಮೀಪದ ವರ್ಜೀನಿಯಾ ಮಾಲ್ವರೆಗೆ ಪ್ರಸ್ತಾಪಿತ ರಾಜಕಾಲುವೆಯ ಬಫರ್ ವಲಯ ಸಂರಕ್ಷಣೆ, ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ಪ್ರವಾಹ ನಿಯಂತ್ರಣ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಗುರುವಾರ (ಜುಲೈ 09) ಖುದ್ದು ಸ್ಥಳ ಪರಿಶೀಲನೆ ನಡೆಸಿದರು.
ಯೋಜನೆಯ ತಾಂತ್ರಿಕ ಅಂಶಗಳು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ವಿಳಂಬವಿಲ್ಲದೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಗತ್ಯ ನಿರ್ದೇಶನಗಳನ್ನು ನೀಡಿದರು.
ಗಡಿ ಗುರುತಿಸಲು ಜಂಟಿ ಸರ್ವೆಗೆ ಕಟ್ಟುನಿಟ್ಟಿನ ಆದೇಶ:

ಯೋಜನೆ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆ ಮತ್ತು ಕೆರೆಗಳ ಮೂಲ ಗಡಿಗಳನ್ನು ಕಂದಾಯ ದಾಖಲೆಗಳಿಗೆ (Revenue Records) ಅನುಗುಣವಾಗಿ ಗುರುತಿಸುವುದು ಅತ್ಯಗತ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು. ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣವನ್ನು ನಿಖರವಾಗಿ ಗುರುತಿಸಿ ಗಡಿ ಕಲ್ಲುಗಳನ್ನು ಅಳವಡಿಸುವ ಉದ್ದೇಶದಿಂದ ಕಂದಾಯ ಹಾಗೂ ಇತರೆ ಸಂಬಂಧಿತ ಇಲಾಖೆಗಳು, ಏಜೆನ್ಸಿಗಳ ಸಹಯೋಗದಲ್ಲಿ ತಕ್ಷಣವೇ ಜಂಟಿ ಸರ್ವೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ತಾಕೀತು ಮಾಡಿದರು.
ಆಯುಕ್ತರು ಪರಿಶೀಲಿಸಿದ ಪ್ರಮುಖ ಸ್ಥಳಗಳು:
ಹೊರ ವರ್ತುಲ ರಸ್ತೆ (Outer Ring Road)
ಬೆಳ್ಳಂದೂರು ರೈಲು ನಿಲ್ದಾಣ
100 ಅಡಿ ರಸ್ತೆ ಮುನ್ನೇಕೊಳಲು ಎಸ್.ಟಿ.ಪಿ (STP)
ವರ್ತೂರು ಕೆರೆ ಬಫರ್ ವಲಯ
ವರ್ತೂರು ಕೋಡಿ ಜಂಕ್ಷನ್
ಬಫರ್ ರಸ್ತೆ ಹಾಗೂ ಪ್ರವಾಹ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್:
ಬಫರ್ ರಸ್ತೆಯನ್ನು ಹೊರ ವರ್ತುಲ ರಸ್ತೆಗೆ (ORR) ಸುಗಮವಾಗಿ ಸಂಪರ್ಕಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸೂಚಿಸಲಾಯಿತು. ಟ್ರಾಫಿಕ್ ಸಮಸ್ಯೆ ಮತ್ತು ಭೌಗೋಳಿಕ ಸವಾಲುಗಳಿರುವ ಕಡೆ ರೈಲ್ವೆ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಬ್ರಿಡ್ಜ್ (Elevated Bridge) ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸಲು ಆಯುಕ್ತರು ನಿರ್ದೇಶಿಸಿದರು. ಮುಖ್ಯವಾಗಿ, ರಾಜಕಾಲುವೆಗಳ ಮೂಲ ಅಗಲವನ್ನು ಸಂರಕ್ಷಿಸುವುದು, ಸುಸಜ್ಜಿತ ರಿಟೈನಿಂಗ್ ವಾಲ್ (Retaining Wall) ನಿರ್ಮಾಣ ಹಾಗೂ ನಗರ ಪ್ರವಾಹ (Urban Flooding) ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಇಲಾಖೆಗಳ ನಡುವೆ ಸಮನ್ವಯದ ಅಗತ್ಯ:
ಯಾವುದೇ ಬೃಹತ್ ಯೋಜನೆ ವಿಳಂಬವಾಗಲು ಅಂತರ್-ಇಲಾಖಾ ಸಮನ್ವಯದ ಕೊರತೆಯೇ ಪ್ರಮುಖ ಕಾರಣವಾಗುತ್ತದೆ. ಇದನ್ನು ಮನಗಂಡಿರುವ ಆಯುಕ್ತರು, ಬೆಂಗಳೂರು ಜಲ ಮಂಡಳಿ (BWSSB), ಗೇಲ್ ಇಂಡಿಯಾ (GAIL), ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಜಂಟಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಅಡೆತಡೆಗಳಿಲ್ಲದೆ ನಿಗದಿತ ಅವಧಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಸ್ಥಳ ಪರಿಶೀಲನೆ ವೇಳೆ ಅಪರ ಆಯುಕ್ತರು (ಅಭಿವೃದ್ಧಿ) ಲೊಖಂಡೆ ಸ್ನೇಹಲ್ ಸುಧಾಕರ್, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಡಾ. ಬಿ.ಎಸ್. ಪ್ರಹ್ಲಾದ್, ಭೂಪ್ರದ, ಎಸ್ಡಬ್ಲ್ಯೂಡಿ (SWD) ಕಾರ್ಯಪಾಲಕ ಅಭಿಯಂತರರಾದ ಅಮೃತಾ ಸಾಯಿ, ಬಿ-ಸ್ಟೈಲ್ ಕಾರ್ಯಪಾಲಕ ಅಭಿಯಂತರ ದೇವರಾಜ, ಬಿ-ಸ್ಟೈಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗಾಂಜನೇಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಟಿಡಿಆರ್ (TDR) ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂದೇಶ್ ಶೆಟ್ಟಿ ಹಾಗೂ ಸಹಾಯಕ ಅಭಿಯಂತರ ಚಂದ್ರಶೇಖರ್ ನಾಯಕ್ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





















