ನವದೆಹಲಿ, ಜು.08 www.bengaluruwire.com: ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ಮತ್ತು ಅಲ್-ಖೈದಾ (AQIS) ಉಗ್ರ ಸಂಘಟನೆಗಳ ಜಿಹಾದಿ ಸಿದ್ಧಾಂತವನ್ನು ಪ್ರಚಾರ ಮಾಡಿ, ಆನ್ಲೈನ್ ಮೂಲಕ ಯುವಕರನ್ನು ಉಗ್ರವಾದಕ್ಕೆ ಸೆಳೆಯುತ್ತಿದ್ದ ಜಾಲದ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ದೇಶಾದ್ಯಂತ ವ್ಯಾಪಕ ದಾಳಿ ನಡೆಸಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ಗುಜರಾತ್ ಮತ್ತು ದೆಹಲಿ ಸೇರಿದಂತೆ ಒಟ್ಟು 10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 20 ಪ್ರಮುಖ ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳ ತಂಡ ಏಕಕಾಲಕ್ಕೆ ಶೋಧ ಕಾರ್ಯ ಕೈಗೊಂಡಿದೆ.
ಡಿಜಿಟಲ್ ಸಾಧನಗಳ ಜಪ್ತಿ, 12 ಮಂದಿ ಬಂಧನ:
ಇಂದಿನ ತಪಾಸಣೆಯ ವೇಳೆ ಉಗ್ರ ಸಂಚಿಗೆ ಸಂಬಂಧಿಸಿದ ಹಲವು ಪ್ರಮುಖ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳನ್ನು ಮುಂದಿನ ತನಿಖೆಗಾಗಿ ವಿಧಿವಿಜ್ಞಾನ (ಫೋರೆನ್ಸಿಕ್) ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಈ ಆನ್ಲೈನ್ ಉಗ್ರ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 11 ಮಂದಿ ಆರೋಪಿಗಳು ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಮೇ ತಿಂಗಳಲ್ಲಿ ಈ ಪ್ರಕರಣವನ್ನು ಎನ್ಐಎ ತನ್ನ ಕೈಗೆತ್ತಿಕೊಂಡಿತ್ತು.

ವಿಜಯವಾಡ ಪೊಲೀಸರಿಂದ ಪ್ರಕರಣ ವರ್ಗಾವಣೆ:
ಕಳೆದ ಮಾರ್ಚ್ ತಿಂಗಳಲ್ಲಿ ಆಂಧ್ರಪ್ರದೇಶದ ವಿಜಯವಾಡ ಪೊಲೀಸರು ಮುಖ್ಯ ಆರೋಪಿ ರೆಹಮತುಲ್ಲಾ ಷರೀಫ್ ಮೊಹಮ್ಮದ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನಿಷೇಧಿತ ಐಸಿಸ್ ಮತ್ತು ಎಕ್ಯೂಐಎಸ್ ಸಂಘಟನೆಗಳಿಗೆ ಸಂಬಂಧಿಸಿದ ಪ್ರಮುಖ ಮತ್ತು ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದ ಎನ್ಐಎ, ಬಂಧಿತರ ಡಿಜಿಟಲ್ ಲಿಂಕ್ಗಳನ್ನು ಪತ್ತೆಹಚ್ಚಿ ಇಂದು ದೇಶಾದ್ಯಂತ ಈ ಬೃಹತ್ ಕಾರ್ಯಾಚರಣೆ ನಡೆಸಿದೆ.
ಯುವಕರಿಗೆ ಆನ್ಲೈನ್ ಬ್ರೈನ್ ವಾಶ್:
ಬಂಧಿತ ಆರೋಪಿಗಳು ಹಾಗೂ ಅವರ ಸಹಚರರು ದೇಶದ ಮುಗ್ಧ ಯುವಕರನ್ನು ಗುರಿಯಾಗಿಸಿಕೊಂಡು ಆನ್ಲೈನ್ ಮೂಲಕ ಹಿಂಸಾತ್ಮಕ ಜಿಹಾದಿ ವಿಷಯಗಳು ಮತ್ತು ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ಬ್ರೈನ್ ವಾಶ್ ಮಾಡುತ್ತಿದ್ದರು. ಅಲ್ಲದೆ, ಭಾರತದ ಪ್ರಜಾಸತ್ತಾತ್ಮಕ ಸರ್ಕಾರದ ವಿರುದ್ಧ ಸಶಸ್ತ್ರ ಜಿಹಾದ್ ನಡೆಸಿ ‘ಖಿಲಾಫತ್’ ಸ್ಥಾಪಿಸಲು ವಿದೇಶಿ ಹ್ಯಾಂಡ್ಲರ್ಗಳೊಂದಿಗೆ ಆನ್ಲೈನ್ ಸಂಪರ್ಕದಲ್ಲಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.





















