ಬೆಂಗಳೂರು: ಜೂ. 26 www.bengaluruwire.com : ಸರ್ವಶ್ರೇಷ್ಠ ದಾರ್ಶನಿಕ, ಅಪ್ರತಿಮ ಆಡಳಿತಗಾರ ಮತ್ತು ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ನಾಳೆ (ಜೂನ್ 27) ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಈ ಬಾರಿ ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಸಹ ತನ್ನ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಏಳು ಸ್ಥಳಗಳಿಂದ ಪುರಜ್ಯೋತಿ ಮೆರವಣಿಗೆ:
ಜಯಂತಿಯ ಪ್ರಮುಖ ಆಕರ್ಷಣೆಯಾಗಿ, ನಾಳೆ ಬೆಳಿಗ್ಗೆ 7.00 ಗಂಟೆಗೆ ನಗರದ ನಾಲ್ಕು ದಿಕ್ಕುಗಳಲ್ಲಿರುವ ಗಡಿ ಗೋಪುರಗಳಾದ ಲಾಲ್ ಬಾಗ್, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು, ಮತ್ತು ಮೂರು ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನ ಆವತಿ ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಸೇರಿ ಒಟ್ಟು ಏಳು ಸ್ಥಳಗಳಿಂದ ‘ಪುರಜ್ಯೋತಿ’ ಮೆರವಣಿಗೆಗಳು ಹೊರಡಲಿವೆ. ಈ ಪುರಜ್ಯೋತಿಗಳಿಗೆ ವಿವಿಧ ಸಚಿವರು ಚಾಲನೆ ನೀಡಲಿದ್ದಾರೆ.

* ಲಾಲ್ ಬಾಗ್ ಗಡಿ ಗೋಪುರ: ದಿನೇಶ್ ಗುಂಡೂರಾವ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು) ಚಾಲನೆ, ಉದಯ್ ಬಿ. ಗರುಡಾಚಾರ್ (ಚಿಕ್ಕಪೇಟೆ ಶಾಸಕರು) ಉಪಸ್ಥಿತಿ.
* ಮೇಕ್ರಿ ವೃತ್ತ ಗಡಿ ಗೋಪುರ: ಸುರೇಶ್ ಬಿ.ಎಸ್ (ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು) ಚಾಲನೆ, ಡಾ. ಸಿ.ಎನ್ ಅಶ್ವತ್ಥ ನಾರಾಯಣ (ಮಲ್ಲೇಶ್ವರಂ ಶಾಸಕರು) ಉಪಸ್ಥಿತಿ.
* ಕೆಂಪಾಂಬುದಿ ಕೆರೆ ಗಡಿ ಗೋಪುರ: ಬಿ.ಝಡ್ ಜಮೀರ್ ಅಹ್ಮದ್ ಖಾನ್ (ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು) ಚಾಲನೆ, ಎಲ್.ಎ ರವಿ ಸುಬ್ರಮಣ್ಯ (ಬಸವನಗುಡಿ ಶಾಸಕರು) ಉಪಸ್ಥಿತಿ.
* ಹಲಸೂರು ಗಡಿ ಗೋಪುರ: ಕೆ.ಜೆ ಜಾರ್ಜ್ (ಇಂಧನ ಸಚಿವರು) ಚಾಲನೆ, ರಿಜ್ವಾನ್ ಹರ್ಷದ್ (ಶಿವಾಜಿನಗರ ಶಾಸಕರು) ಉಪಸ್ಥಿತಿ.
* ನಾಡಪ್ರಭು ಕೆಂಪೇಗೌಡರ ಸಮಾಧಿ, ಮಾಗಡಿ: ರಾಮಲಿಂಗಾರೆಡ್ಡಿ (ಸಾರಿಗೆ ಹಾಗೂ ಮುಜರಾಯಿ ಸಚಿವರು) ಚಾಲನೆ, ಹೆಚ್.ಸಿ ಬಾಲಕೃಷ್ಣ (ಮಾಗಡಿ ಶಾಸಕರು) ಉಪಸ್ಥಿತಿ.
* ಚೆನ್ನಕೇಶವ ದೇವಾಲಯ, ಆವತಿ: ಕೆ.ಹೆಚ್ ಮುನಿಯಪ್ಪ (ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರು) ಚಾಲನೆ.
* ಬಯಲು ಬಿಸಿಲು ಬಸವಣ್ಣ, ಹುತ್ರಿದುರ್ಗ: ಡಾ. ಜಿ ಪರಮೇಶ್ವರ್ (ಗೃಹ ಸಚಿವರು) ಚಾಲನೆ, ಡಾ. ಹೆಚ್.ಡಿ ರಂಗನಾಥ್ (ಕುಣಿಗಲ್ ಶಾಸಕರು) ಉಪಸ್ಥಿತಿ.
ಈ ಏಳು ಪುರಜ್ಯೋತಿಗಳು ಸುಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ (ಮಾಗಡಿ ರಸ್ತೆ)ಯಲ್ಲಿ ಕೆಂಪೇಗೌಡ ಭವನ ನಿರ್ಮಾಣ ಸ್ಥಳಕ್ಕೆ ಆಗಮಿಸಿ, ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಸ್ವೀಕರಿಸಲ್ಪಡಲಿವೆ.
ಪ್ರತಿಮೆಗಳಿಗೆ ಪುಷ್ಪನಮನ ಹಾಗೂ ಕೆಂಪೇಗೌಡ ಭವನಕ್ಕೆ ಶಂಕುಸ್ಥಾಪನೆ:
ಜಯಂತಿಯ ಅಂಗವಾಗಿ, ಕೆಂಪೇಗೌಡ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕೂ ಮೊದಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮತ್ತು ವಿಧಾನ ಸೌಧದ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗರ ಪುಷ್ಪ ನಮನ ಸಲ್ಲಿಸಲಿದ್ದಾರೆ.
ಪುರಜ್ಯೋತಿಗಳ ಸ್ವೀಕಾರದ ನಂತರ, ಅಪರಾಹ್ನ 12.15ಕ್ಕೆ ಸುಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆಯಲ್ಲಿ (ಮಾಗಡಿ ರಸ್ತೆ) ಕೆಂಪೇಗೌಡ ಭವನ ನಿರ್ಮಾಣ ಸ್ಥಳಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಠಾಧೀಶರುಗಳು, ಸಚಿವರುಗಳು, ಶಾಸಕರುಗಳು ಹಾಗೂ ಇತರೆ ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಮತ್ತು ಬಿಬಿಎಂಪಿ ಮಟ್ಟದ ಕಾರ್ಯಕ್ರಮಗಳು:
ಅಪರಾಹ್ನ 12.30ಕ್ಕೆ ಸುಮನಹಳ್ಳಿ ಬಳಿಯಿರುವ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅದೇ ರೀತಿ, ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಬಿಬಿಎಂಪಿ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಸಂಜೆ 4.30ರಿಂದ 6.00 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6.00 ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮತ್ತು ಉತ್ತಮ ಅಧಿಕಾರಿ-ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ನವೀನ್ ಕುಮಾರ್ ರಾಜು ಮನವಿ ಮಾಡಿದ್ದಾರೆ.






















