ಬೆಂಗಳೂರು, ಜು.07 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಣೆಬರಹ ಸರಿಯಿಲ್ಲ ಅನ್ನಿಸುತ್ತೆ. 27,000 ಕೋಟಿ ರೂಪಾಯಿ ಹೂಡಿಕೆ ಮೊತ್ತದ 74 ಕಿಮೀ ಪೆರಿಫೆರಲ್ ರಿಂಗ್ ರೋಡ್ (PRR – ಪಿಆರ್ಆರ್) ನಿರ್ಮಿಸುವ ಯೋಜನೆಗೆ ಮೂರನೇ ಬಾರಿ ಕರೆದ ಟೆಂಡರ್ ವಿಫಲವಾಗಿರುವ ವಿಷಯ ತಡವಾಗಿ ಬೆಳೆಕಿಗೆ ಬಂದಿದೆ.
ಕೇವಲ ಒಂದೇ ಒಂದು ಸಂಸ್ಥೆ ಮಾತ್ರ ಈ ಟೆಂಡರ್ ನಲ್ಲಿ ಭಾಗವಹಿಸಿತ್ತು. ಆದರೆ ಆರ್ಥಿಕ ಬಿಡ್ ನಲ್ಲಿ ಯಶಸ್ವಿಯಾದ ಸಂಸ್ಥೆಯು ತಾಂತ್ರಿಕ ಬಿಡ್ ನಲ್ಲಿ ಅರ್ಹತೆ ಪಡೆಯದ ಕಾರಣ ಬಿಡಿಎ ಇದೀಗ ಮೂರನೇ ಬಾರಿಗೆ ಕರೆದ ಟೆಂಡರ್ ವಿಫಲವಾಗಿ ಭೂಸ್ವಾಧೀನ ಅಧಿಸೂಚನೆಗೆ ಒಳಪಟ್ಟು ಇತ್ತ ಪರಿಹಾರವೂ ಇಲ್ಲದೆ, ಭೂಮಿಯೂ ಇಲ್ಲದೆ ರೈತರ ಅಂತಂತ್ರ ಸ್ಥಿತಿಗೆ ಪರಿಹಾರವೇ ಇಲ್ಲದಂತಾಗಿದೆ.
ನಗರದ ಹೊರವಲಯದಲ್ಲಿ ಅರ್ಧವೃತ್ತಾಕಾರದ ರಸ್ತೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಯೋಜನೆಗೆ ಗುತ್ತಿಗೆದಾರರನ್ನು ಪಡೆಯಲು ಹಿಂದಿನ ಮೂರು ಪ್ರಯತ್ನಗಳು ವಿಫಲವಾದದಂತಾಗಿದೆ. ಇದೀಗ ಸಂಪೂರ್ಣ ಯೋಜನೆಗೆ ಟೆಂಡರ್ ಷರತ್ತುಗಳು ಹಾಗೂ ಯೋಜನೆ ಅನುಷ್ಠಾನದ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲು ಬಿಡಿಎ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆ ಬಳಿಕ ಹೊಸದಾಗಿ ಮತ್ತೆ ಟೆಂಡರ್ ಕರೆಯಲಿದ್ದಾರೆ.
ಮೂರನೇ ಬಾರಿ ಕರೆದ ಟೆಂಡರ್ ರದ್ದಾಗಲು ಕಾರಣ? :

ಫೆಬ್ರವರಿ ಅಂತ್ಯದಲ್ಲಿ ನಡೆದ ಪೂರ್ವ ಬಿಡ್ ಸಭೆಯಲ್ಲಿ ಅದಾನಿ ಶಾಖೆ ಸೇರಿದಂತೆ ಮೂರು ಸಂಸ್ಥೆಗಳು ಭಾಗವಹಿಸಿದ್ದರಿಂದ ಉತ್ತಮ ಪ್ರತಿಕ್ರಿಯೆಯನ್ನು ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಅಂತಿಮವಾಗಿ ಕೀನ್ಯಾ ಮೂಲದ ಕಂಪನಿಯೊಂದು ಟೆಂಡರ್ ನಲ್ಲಿ ಪಾಲ್ಗೊಂಡಿತ್ತು. ಅಂತಿಮವಾಗಿ ಬಿಡಿಎ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಆ ಸಂಸ್ಥೆಯು ಟೆಂಡರ್ ಷರತ್ತಿನ ಅನ್ವಯ 12,000 ಕೋಟಿ ರೂ. ಮೊತ್ತದ ಕೆಲಸಗಳ ಬದಲಿಗೆ ಕೇವಲ 6,000 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಮಾತ್ರ ನಿರ್ವಹಿಸಿದ್ದರು.

“ಮೂರನೇ ಬಾರಿಗೆ ಟೆಂಡರ್ ಕರೆದು, ಸಿಂಗಲ್ ಬಿಡ್ ಆಗಿದ್ದರಿಂದ ಸಚಿವ ಸಂಪುಟದ ಮುಂದೆ ಈ ವಿಷಯವನ್ನು ತಂದು ಒಪ್ಪಿಗೆ ಪಡೆಯಬಹುದಿತ್ತು. ಆ ಸಂಸ್ಥೆಯು ಟೆಂಡರ್ ಷರತ್ತಿನ ಅನ್ವಯ 12,000 ಕೋಟಿ ರೂ. ಮೊತ್ತದ ಕೆಲಸಗಳ ಬದಲಿಗೆ ಕೇವಲ 6,000 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಮಾತ್ರ ನಿರ್ವಹಿಸಿದ ಅನುಭವ ಹೊಂದಿತ್ತು. ಹೀಗಾಗಿ ಪ್ರಾರಂಭದಲ್ಲೇ ಅರ್ಹತೆ ಪಡೆದುಕೊಳ್ಳಲಿಲ್ಲ. ಕೀನ್ಯಾ ಮೂಲದ ಸಂಸ್ಥೆಯು ಟೆಂಡರ್ ನಲ್ಲಿ ಪಾಲ್ಗೊಂಡಿತ್ತು. ಹೀಗಾಗಿ ಮತ್ತೆ ಈ ಟೆಂಡರ್ ರದ್ದುಪಡಿಸಿ, ಹೊಸದಾಗಿ ಪುನಃ ಟೆಂಡರ್ ಕರೆಯಲು ಚಿಂತನೆ ನಡೆಸಲಾಗುತ್ತಿದೆ” ಬಿಡಿಎ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಮರು ಟೆಂಡರ್ ಹೇಗಿರಲಿದೆ ಸ್ವರೂಪ? :
ಈಗ ಹೊಸದಾಗಿ ಟೆಂಡರ್ ಕರೆಯುವ ಮುನ್ನ ಹೂಡಿಕೆದಾರರನ್ನು ಟೆಂಡರ್ ನಲ್ಲಿ ಭಾಗವಹಿಸುವಂತೆ ಆಕರ್ಷಿಸಲು, ಹೂಡಿಕೆದಾರರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಷರತ್ತು ಮತ್ತು ಚೌಕಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಮರು ಟೆಂಡರ್ ಕರೆಯಲು ಸರ್ಕಾರಿ ಆದೇಶ ಆಗುವ ಸಾಧ್ಯತೆಗಳಿವೆ.
ಈ ಯೋಜನೆ ಪಡೆಯುವ ಕಂಪನಿಯು ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಎರಡಕ್ಕೂ ಹಣವನ್ನು ನೀಡಬೇಕಾಗುತ್ತದೆ. ಅಂತಹ ಟೆಂಡರ್ಗಳು ಸಾಮಾನ್ಯವಾಗಿ ಬಿಡ್ದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವುದಿಲ್ಲ. ಭೂ ಸ್ವಾಧೀನ ವೆಚ್ಚವೇ ಸುಮಾರು 21,000 ಕೋಟಿ ರೂಪಾಯಿ ಆದರೆ, ಯೋಜನಾ ವೆಚ್ಚ 6,000 ಕೋಟಿ ರೂ. ಆಗುತ್ತದೆ. ಪ್ರಸ್ತುತ ಇದು ಖಾಸಗಿ ಸಂಸ್ಥೆಗಳಿಗೆ ತುಂಬಾ ಆಕರ್ಷಕವಾಗಿಲ್ಲ” ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ವಾಸ್ತವ ಪರಿಸ್ಥಿತಿಯೇನು? ಬಿಡಿಎ ಲೆಕ್ಕಾಚಾರವೇನು? :

ಯೋಜನೆಯ ಒಟ್ಟು ಮೊತ್ತ 27,000 ಕೋಟಿ ರೂ. ಆದರೆ ಶೇ.10ರಷ್ಟು ಸಾಲಕ್ಕೆ ಬಡ್ಡಿ ಕಟ್ಟಬೇಕು ಅಂದರೂ 2,700 ಕೋಟಿ ರೂ. ಆಗುತ್ತೆ. ವರ್ಷಕ್ಕೆ ಈ ರಸ್ತೆಗಳಲ್ಲಿ ಅಷ್ಟು ಟೋಲ್ ಸಂಗ್ರಹವಾಗಲ್ಲ. ನೈಸ್ ರಸ್ತೆಯಲ್ಲಿನ ಟೋಲ್ ಸಂಗ್ರಹ ಮೊತ್ತವನ್ನು ಗಣನೆಗೆ ತೆಗೆದುಕೊಂಡರೂ, ದಿನಕ್ಕೆ ಎರಡರಿಂದ ಮೂರು ಕೋಟಿ ರೂ. ಅಂದರೂ ವರ್ಷಕ್ಕೆ ಅಂದಾಜು 1,500 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹವಾಗುತ್ತೆ. ಇನ್ನು ಪಿಆರ್ ಆರ್ ರಸ್ತೆ ನಿರ್ಮಾಣವಾದರೆ ನೈಸ್ ರಸ್ತೆ ಟ್ರಾಫಿಕ್ ಜೊತೆಗೆ ಹೆಚ್ಚವರಿಯಾಗಿ ವಾಹನಗಳು ಪಿಆರ್ ಆರ್ ನಲ್ಲಿ ಸಂಚರಿಸಿದರೂ ಪ್ರತಿದಿನ 3 ರಿಂದ 4 ಕೋಟಿ ರೂ. ಸಂಗ್ರವಾಗುತ್ತೆ ಅಂತ ಲೆಕ್ಕ ಹಾಕಿದರೂ ವರ್ಷಕ್ಕೆ 1,200 ರಿಂದ 1,300 ಕೋಟಿ ರೂ. ಟೋಲ್ ಸಂಗ್ರಹವಾಗಲಿದೆ.
ಹಾಗಂದ್ರೂ ನೂ ಪಿಆರ್ ಆರ್ ಯೋಜನೆಯ ಸಾಲದ ಮೇಲಿನ 2,700 ಕೋಟಿ ರೂ. ವಾರ್ಷಿಕ ಬಡ್ಡಿ ತೀರಿಸಲೂ ಆಗಲ್ಲ. ಹಾಗಾಗಿ ಯಶಸ್ವಿ ಬಿಡ್ ದಾರರಿಗೆ ಪಿಆರ್ ಆರ್ ರಸ್ತೆಮಾರ್ಗದಲ್ಲಿ ಜಾಹೀರಾತು ಅಳವಡಿಸಿ ಆದಾಯ ಸಂಗ್ರಹಿಸಲು ಅವಕಾಶ ಕೊಡುವ ಬಗ್ಗೆ, ರಸ್ತೆ ಮಾಡುವವರಿಗೆ ಪರಿಹಾರವಾಗಿ ಭೂಮಿಯನ್ನು ಭದ್ರತೆಯಾಗಿ ನೀಡುವ ಕುರಿತೂ ಕಾನೂನು ರೀತಿ ಸಾಧಕಬಾಧಕ ಬಗ್ಗೆ ನೋಡುತ್ತಿದ್ದೇವೆ. ಟೋಲ್ ಸಂಗ್ರಹ ಆಗದಿದ್ದರೂ, ಗುತ್ತಿಗೆದಾರನಿಗೆ ಭೂಮಿ ನೀಡಿ ಆ ಹಣ ಸಂಗ್ರಹ ಮಾಡಿಕೊಳ್ಳಲು ಖಾತ್ರಿ ನೀಡುವ ಕುರಿತೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಬಿಡಿಎ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಹೇಳಿವೆ.
ಮೂರನೇ ಬಾರಿಗೆ ಕರೆದ ಟೆಂಡರ್ ದಾಖಲೆಯ ಪ್ರಕಾರ, ಕಂಪನಿಯು ಒಪ್ಪಂದಕ್ಕೆ ಸಹಿ ಮಾಡಿದ ದಿನಾಂಕದಿಂದ 90 ತಿಂಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಭೂಸ್ವಾಧೀನ ಮೊತ್ತವನ್ನು ಠೇವಣಿ ಮಾಡಬೇಕು. ಭೂಸ್ವಾಧೀನ ರಚನೆಯಲ್ಲಿನ ಸ್ಪಷ್ಟತೆಯ ಕೊರತೆಯು ಟೆಂಡರ್ ಕರೆಗೆ ಕಳಪೆ ಪ್ರತಿಕ್ರಿಯೆಗೆ ಕಾರಣವಾಗಿರಬಹುದು. ಬಿಡಿಎ ಭೂ ಪರಿಹಾರಕ್ಕಾಗಿ ತನ್ನದೇ ಆದ ಕಾಯ್ದೆಯನ್ನು ಅನುಸರಿಸುತ್ತದೆಯೇ ಅಥವಾ ಕೇಂದ್ರ ಸರ್ಕಾರದ 2013 ರ ಕಾಯಿದೆಯನ್ನು ಅನುಸರಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2013ರ ಕಾಯಿದೆ ಅನುಸಾರ ಪರಿಹಾರ ನೀಡಲು ಹೋದರೆ, ಇದು ಮಾರ್ಗದರ್ಶನ ಮೌಲ್ಯಕ್ಕಿಂತ ಸುಮಾರು ಎರಡರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ.
ಗುತ್ತಿಗೆಯನ್ನು ಆಕರ್ಷಕವಾಗಿಸಲು ಮತ್ತು ಉತ್ತಮ ಟೋಲ್ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ಬಿಡಿಎ ತನ್ನ ವ್ಯಾಪ್ತಿಯಿಂದ ಸೇವಾ ರಸ್ತೆಗಳನ್ನು ಕೈಬಿಟ್ಟಿದೆ. 74 ಕಿ.ಮೀ ಜೋಡಣೆಯ ಉದ್ದಕ್ಕೂ ಮಾರ್ಗದರ್ಶಿ ಮೌಲ್ಯವನ್ನು ಕಡಿತಗೊಳಿಸುವಂತೆ ಪ್ರಾಧಿಕಾರವು ಸರ್ಕಾರದ ಮೇಲೆ ಈ ಹಿಂದೆ ಒತ್ತಡ ಹೇರಿತ್ತು. ಈ ಕ್ರಮವು ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಆದರೆ ಮರು ಟೆಂಡರ್ನಲ್ಲಿ ಬಿಡಿಎ ಯಾವೆಲ್ಲಾ ಬದಲಾವಣೆ ಮಾಡುತ್ತದೆ ಎಂದು ಕಾದುನೋಡಬೇಕಿದೆ.




















